ಆರ್.ಆರ್.ನಗರದಲ್ಲಿ ಮತದಾರರ ಪಟ್ಟಿ ಅಕ್ರಮ ಆರೋಪ: ಕಾಂಗ್ರೆಸ್ ನಿಂದ ಚುನಾವಣಾ ಆಯೋಗಕ್ಕೆ ದೂರು

Update: 2022-12-07 09:44 GMT

ಬೆಂಗಳೂರು, ಡಿ.7: 'ರಾಜರಾಜೇಶ್ವರಿ ನಗರ (ಆರ್.ಆರ್.ನಗರ) ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ವ್ಯಾಪಕ ಅಕ್ರಮ ನಡೆದಿದೆ. ಕಳೆದ ವಿಧಾನಸಭಾ ಚುನಾವಣೆಯಿಂದ ಕಳೆದ ನವೆಂಬರ್ 9ರವರೆಗೆ ಅನಧಿಕೃತವಾಗಿ ಸುಮಾರು 1.30 ಲಕ್ಷ ಮತಗಳ ಸೇರ್ಪಡೆಯಾಗಿದ್ದು, 75 ಸಾವಿರ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು' ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಮತ್ತಿತರ ಸ್ಥಳೀಯ ಮುಖಂಡರು  ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಬೆಂಗಳೂರಿನ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ಬುಧವಾರ ಭೇಟಿ ನೀಡಿ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಮೀನಾರಿಗೆ ಈ ದೂರು ನೀಡಲಾಗಿದೆ.

ಈ ಸಂದರ್ಭದಲ್ಲಿ ಕ್ಷೇತ್ರದ ಕಾಂಗ್ರೆಸ್ ನಾಯಕಿ ಕುಸುಮ ಹೆಚ್, ಹನುಮಂತರಾಯಪ್ಪ, ಲಗ್ಗೆರೆ ಬ್ಲಾಕ್ ಅಧ್ಯಕ್ಷ ಅಮರನಾಥ್, ರಾಜರಾಜೇಶ್ವರಿ ನಗರ ಬ್ಲಾಕ್ ಅಧ್ಯಕ್ಷ ರಾಂಪುರ ನಾಗೇಶ್, ಯಶವಂತಪುರ ಬ್ಲಾಕ್ ಅಧ್ಯಕ್ಷ ಗೋಪಾಲ ಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ದೂರಿನ ಬಗ್ಗೆ ಮಾಧ್ಯಮಗಳಿಗೆ ವಿವರಣೆ ನೀಡಿದ ಸಂಸದ ಡಿ.ಕೆ.ಸುರೇಶ್ ಹೇಳಿದ್ದಿಷ್ಟು;

‘ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಹಳಷ್ಟು ನಕಲಿ ಮತಗಳ ಸೇರ್ಪಡೆಯಾಗಿದ್ದು, ನಾವು ಸ್ಥಳ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಖಾಲಿ ನಿವೇಶನ ಹಾಗೂ ಖಾಲಿ ಮನೆಗಳಲ್ಲಿ ಸಾವಿರಾರು ಮತದಾರರ ಹೆಸರು ಸೇರ್ಪಡೆಯಾಗಿವೆ. ಈ ವಿಧಾನಸಭಾ ಕ್ಷೇತ್ರದಲ್ಲಿನ ಕಾಂಗ್ರೆಸ್ ಬೆಂಬಲಿತರು ಹಾಗೂ ಒಕ್ಕಲಿಗ ಮತದಾರರ ಹೆಸರನ್ನು ಪಟ್ಟಿಯಿಂದ ಬೇಕೆಂದೇ ಕೈಬಿಡಲಾಗಿದೆ.

ಚಿಲುಮೆ ಎಂಬ ಸಂಸ್ಥೆ ಮೂಲಕ ಬೆಂಗಳೂರಿನಲ್ಲಿ ಬಿಜೆಪಿ ನಾಯಕರು, ಮಂತ್ರಿಗಳು, ಶಾಸಕರು ಮತಪಟ್ಟಿ ಪರಿಷ್ಕರಣೆ ಹೆಸರಲ್ಲಿ ಭಾರಿ ಅಕ್ರಮ ಮಾಡಿದ್ದಾರೆ. ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದಲ್ಲಿ 2018ರಿಂದ 2022ರ ಜನವರಿವರೆಗೆ ಸುಮಾರು 90 ಸಾವಿರ ಮತಗಳ ಸೇರ್ಪಡೆ ಮಾಡಲಾಗಿದೆ. 2022ರ ಜನವರಿ 22ರಿಂದ ನವೆಂಬರ್ 9ರವರೆಗೆ ಸುಮಾರು 40 ಸಾವಿರ ಮತಗಳ ಸೇರ್ಪಡೆ ಮಾಡಲಾಗಿದೆ. 1.30 ಲಕ್ಷ ಮತಗಳನ್ನು ಕಳೆದ ವಿಧಾನಸಭಾ ಚುನಾವಣೆ ನಂತರ ಸೇರಿಸಲಾಗಿದೆ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಆಯುಕ್ತರ ಗಮನಕ್ಕೆ ತಂದಿದ್ದೇವೆ ಎಂದವರು ತಿಳಿಸಿದರು.

2018 ಮೇ ನಿಂದ 2022ರ ಜನವರಿ ವೇಳೆಗೆ ಸುಮಾರು 40 ಸಾವಿರ ಮತಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದ್ದು, ಜನವರಿ 22ರಿಂದ ನವೆಂಬರ್ 9ರವರೆಗೆ 26 ಸಾವಿರ ಮತದಾರರ ಹೆಸರು ಕೈಬಿಡಲಾಗಿದೆ ಎಂಬ ಮಾಹಿತಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಆ ಮೂಲಕ 75 ಸಾವಿರ ಮತಗಳನ್ನು ತೆಗೆದುಹಾಕಲಾಗಿದೆ. ಯಾವುದೇ ಮತದಾರ ತನ್ನ ಹೆಸರನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅಥವಾ ತೆಗೆಸಬೇಕಾದರೆ ಅವರು ಫಾರಂ 6 ಮತ್ತು 7 ಅನ್ನು ಕಡ್ಡಾಯವಾಗಿ ನೀಡಬೇಕು. ನಂತರ ಅದು ಪರಿಶೀಲನೆ ಆಗುತ್ತದೆ.

ಆದರೆ ಈ ಕ್ಷೇತ್ರದ ಶಾಸಕರು ಹಾಗೂ ಮಂತ್ರಿಗಳ ನಿರ್ದೇಶನದ ಮೇರೆಗೆ ಫಾರಂ 6 ಮತ್ತು 7 ಇಲ್ಲದೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿದೆ. ಕಳೆದ 10 ದಿನಗಳಿಂದ ಬೂತ್ ಮಟ್ಟದಲ್ಲಿ ಮತಗಳ ಸಮೀಕ್ಷೆ ಮಾಡಿದ ಸಮಯದಲ್ಲಿ ಖಾಲಿ ನಿವೇಶನಗಳ ವಿಳಾಸದಲ್ಲಿ 45 ಮತಗಳ ಸೇರ್ಪಡೆ ಆಗಿದೆ. ಪ್ರತಿ ಬೂತ್ ನಲ್ಲಿ 20-25 ಮತಗಳನ್ನು ಸೇರಿಸಲಾಗುತ್ತಿದೆ. ಬೇರೆ ರಾಜ್ಯಗಳಿಂದ ಬೋಗಸ್ ಮತದಾರರನ್ನು ಕರೆಸಲಾಗಿದೆ. ಆರ್ ಆರ್ ನಗರದಲ್ಲಿ ಚುನಾವಣಾ ಅಕ್ರಮಗಳ ಬಗ್ಗೆ ಈ ಹಿಂದೆ ಸಾಕಷ್ಟು ಉದಾಹರಣೆಗಳಿದ್ದರೂ ಚುನಾವಣಾ ಆಯೋಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಯಾಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಈಗಲಾದರೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವರಿಕೆ ಮಾಡಿಕೊಡಲಾಗಿದೆ.’ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

Similar News