ಪರಸ್ಪರ ನಿಂದನೆಗೆ ಅಮಾಯಕ ವರ್ಗದ ಹೆಸರು, ಟೋಪಿ, ಆಹಾರ ಬಳಕೆ ರಾಜಕಾರಣದ ದಿವಾಳಿತನಕ್ಕೆ ಸಾಕ್ಷಿ: ನಿರಂಜನಾರಾಧ್ಯ

Update: 2022-12-07 10:19 GMT

ಬೆಂಗಳೂರು, ಡಿ.7: ಒಂದು ಅಮಾಯಕ ವರ್ಗದ ಹೆಸರು, ಟೋಪಿ, ಬಟ್ಟೆ, ಆಹಾರ ಇತ್ಯಾದಿಗಳು ಪರಸ್ಪರ ನಿಂದನೆ ಅವಮಾನಿಸಲು ಬಳಕೆಯಾಗುತ್ತಿರುವುದು ನಮ್ಮ ರಾಜಕಾರಣದ ದಿವಾಳಿತನಕ್ಕೆ ಸಾಕ್ಷಿ ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಹೇಳಿದ್ದಾರೆ.

ಒಂದು ಅಮಾಯಕ ಅಲ್ಪ ಸಂಖ್ಯಾತ ವರ್ಗದ ಹೆಸರು, ಟೋಪಿ, ಬಟ್ಟೆ, ಆಹಾರ ಇತ್ಯಾದಿ ವಿಷಯಗಳನ್ನು ರಾಜಕೀಯ ಪಕ್ಷದ ಮುಖಂಡರ ಪಕ್ಷ ರಾಜಕಾರಣದ ದಾಳವಾಗಿ ಬಳಕೆಯಾಗುತ್ತಿರುವುದು ಖಂಡನೀಯ. ಇದು ನಮ್ಮ ಸಂವೇದನಾರಹಿತ ರಾಜಕಾರಣಕ್ಕೆ ಕನ್ನಡಿಯಾಗಿದೆ ಎಂದವರು ಟೀಕಿಸಿದ್ದಾರೆ.

ಬಿಜಿಪಿಯ ತನ್ನ ಕೋಮುವಾದಿ ಹಾಗೂ ದ್ವೇಷದ ರಾಜಕಾರಣದ ಭಾಗವಾಗಿ ಇದನ್ನು ಪ್ರಾರಂಭದಿಂದಲೂ ಮಾಡುತ್ತಿದೆ. ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಈ ಬಗೆಯ ಮೌಲ್ಯರಹಿತ ರಾಜಕಾರಣದ ಮೂಲಕ ಪ್ರಜಾಪ್ರಭುತ್ವವನ್ನು ಕಗ್ಗೊಲೆಗೈದು ಅಧಿಕಾರದ ಗದ್ದುಗೆ ಏರುವ ಅವರ ಕೊಳಕು ರಾಜಕಾರಣ ಸೂಕ್ಷ್ಮಮತಿಯ ಜನರಿಗೆ ಅರ್ಥವಾಗುತ್ತದೆ. ಆದರೆ, ಕಾಂಗ್ರೆಸ್ ಪಕ್ಷ ಕೂಡ ಇದೇ ದಾರಿ ತುಳಿಯುತ್ತಿರುವು ಮನಸ್ಸಿಗೆ ನೋವಾಗಿದೆ ಮತ್ತು ಆತಂಕ ಮೂಡಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ಕೇಂದ್ರ ಹಾಗು ರಾಜ್ಯ ಸರಕಾರಗಳ ಅಸಂವಿಧಾನಿಕ ನೀತಿ/ಕಾನೂನುಗಳು, ಶಿಕ್ಷಣದ ಖಾಸಗೀಕರಣ, ವ್ಯಾಪರೀಕರಣ ಹಾಗು ಕೋಮುವಾದೀಕರಣ, ಬಡ ಜನರ ಬದುಕು ಕಸಿದ ಬೆಲೆ ಏರಿಕೆ, ಕಂಡರಿಯದ ಕಡು ಭ್ರಷ್ಟಾಚಾರ, ಯುವಜನರ ಬದುಕು ಕಸಿದ ನಿರುದ್ಯೋಗ ಸಮಸ್ಯೆ, ದೇಶದ ಸಾರ್ವಜನಿಕ ಆಸ್ತಿ ಮಾರಾಟ, ದೇಶದಲ್ಲಿ ಸುಳ್ಳು ಬಿತ್ತುವ ಮೂಲಕ ಧರ್ಮಾಂಧತೆ, ಕೋಮು ದಳ್ಳುರಿ ಹಾಗು ಜನರನ್ನು ದಿಕ್ಕು ತಪ್ಪಿಸುವ ಜನವಿರೋಧಿ ಕ್ರಮ ಹಾಗು ನೀತಿಗಳು ಚುನಾವಣೆಯ ಪ್ರಮುಖ ವಿಷಯಗಳಾಗಿ ದೇಶಾದ್ಯಂತ-ರಾಜ್ಯಾದಂತ ಚರ್ಚೆಯಾಗಬೇಕಾಗಿದೆ. ಆದರೆ ಈ ಬಗೆಯ ಸಂವೇದನಾರತ ವ್ಯಕ್ತಿ ನಿಂದನೆ, ಒಂದು ಸಮುದಾಯವನ್ನು ತೇಜೋವಧೆಗೊಳಿಸಿ ಕೊಳಕು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದನ್ನು ಪ್ರಜ್ಞಾವಂತರು ಜಾತಿ, ಧರ್ಮ, ಪಕ್ಷ -ಬೇಧ ಮರೆತು ಖಂಡಿಸಬೇಕಿದೆ. ಇದು ಕರ್ನಾಟಕದ ಜನತೆಗೆ ಶೋಭೆ ತರುವುದಿಲ್ಲ ಎಂದು ಅವರು ಅಭಿಪ್ರಾಯಿಸಿದ್ದಾರೆ.

Similar News