ಪ್ರವಾಸೋದ್ಯಮದ ಆತಿಥ್ಯ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಜಿ-20 ಸಮಾವೇಶ
ಬೆಂಗಳೂರು, ಡಿ.13: ಕರ್ನಾಟಕ ಪ್ರವಾಸೋದ್ಯಮವು ತನ್ನ ಆತಿಥ್ಯ ಹಾಗೂ ಧ್ಯೇಯೋದ್ದೇಶದ ಭಾಗವಾಗಿ, ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿರುವ ಜಿ-20 ಶೃಂಗಸಭೆಯಲ್ಲಿ ಭಾಗವಹಿಸುವ ಸುಮಾರು 35ಕ್ಕೂ ಹೆಚ್ಚು ದೇಶಗಳ ಅಂತರಾಷ್ಟ್ರೀಯ ಪ್ರತಿನಿಧಿಗಳಿಗೆ ಕೆಂಪು ಹಾಸಿನ (ರೆಡ್ ಕಾರ್ಪೆಟ್) ಸ್ವಾಗತ ಕೋರುತ್ತಿದೆ.
ಕರ್ನಾಟಕಕ್ಕೆ ಅಂತಾರಾಷ್ಟ್ರೀಯ ಪ್ರತಿನಿಧಿಗಳ ಭೇಟಿ ಬ್ರಾಂಡ್ ಕರ್ನಾಟಕವನ್ನು ಬಲಪಡಿಸುವುದರೊಂದಿಗೆ, ಪ್ರವಾಸೋದ್ಯಮ ಇಲಾಖೆಯ ‘ಒಂದು ರಾಜ್ಯ, ಹಲವು ಜಗತ್ತು’(ಅಡಿಬರಹ)ಟ್ಯಾಗ್ಲೈನ್ ಅನ್ನು ಬಲಪಡಿಸಲು ಸಹಾಯಕ. ಪ್ರವಾಸೋದ್ಯಮವು ಈ ಪ್ರತಿಷ್ಠಿತ ಜಿ-20 ಸಮಾವೇಶ ನಿರ್ವಹಣೆಯ ನೋಡಲ್ ಇಲಾಖೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಪ್ರವಾಸೋದ್ಯಮ ಉತ್ಪನ್ನಗಳನ್ನು ಜಗತ್ತಿಗೆ ಪ್ರದರ್ಶಿಸಲು ಹಾಗೂ ಪ್ರವಾಸಿ ಪ್ರೇಕ್ಷಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಉತ್ತಮ ವೇದಿಕೆ.
ಕರ್ನಾಟಕ ರಾಜ್ಯವು ಬೆಂಗಳೂರಿನಲ್ಲಿ-11, ಹಂಪಿಯಲ್ಲಿ-2 ಹಾಗೂ ಮೈಸೂರಿನಲ್ಲಿ-1ರಂತೆ, ಒಟ್ಟು 14 ಜಿ-20 ಸಭೆಗಳನ್ನು ಆಯೋಜಿಸುತ್ತಿದ್ದು, ದಿಲ್ಲಿಯ-ಎನ್ಸಿಆರ್ ನಂತರ ರಾಜ್ಯಕ್ಕೆ ಅತ್ಯುನ್ನತ ಈ ಅವಕಾಶ ಸಿಕ್ಕಿರುವುದು ರಾಜ್ಯಕ್ಕೆ ನೀಡಿದ ಗೌರವವಾಗಿದೆ. ಈ ಜಿ-20 ಸಭೆಗಳು ಮತ್ತು ಪ್ರತಿನಿಧಿಗಳ ವಾಸ್ತವ್ಯದ ಸಂದರ್ಭದಲ್ಲಿ, ನಾವು ರಾಜ್ಯದ ಅನೇಕ ಕೊಡುಗೆಗಳನ್ನು ಪ್ರದರ್ಶಿಸಲಿದ್ದೇವೆ. ಬೆಂಗಳೂರು ನಗರದೊಳಗೆ ಹಾಗೂ ನಂದಿಬೆಟ್ಟ, ಭೋಗನಂದೀಶ್ವರ ದೇವಸ್ಥಾನ, ಮೈಸೂರು ಮತ್ತು ಹಂಪಿಯ ಪ್ರವಾಸಿ ತಾಣಗಳಿಗೆ ವಿಹಾರ ಪ್ರವಾಸಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ, ದಕ್ಷಿಣ ಭಾರತದ ಏಕೈಕ ಐಷಾರಾಮಿ ರೈಲು ಗೋಲ್ಡನ್ ಚಾರಿಯಟ್ ಅನ್ನು ಪ್ರದರ್ಶಿಸಲು ನಾವು ಜಿ-20 ಸೆಕ್ರೆಟರಿಯೇಟ್ ಅನ್ನು ಪ್ರೋತ್ಸಾಹಿಸಲು ಬಯಸುತ್ತೇವೆ.
ಡಿ.17ರ ವರೆಗೆ ಮೊದಲ ಹಂತದಲ್ಲಿ ನಡೆಯಲಿರುವ ಜಿ-20 ಸಭೆಗಳಿಗೆ ಆಗಮಿಸುವ ಪ್ರತಿನಿಧಿಗಳನ್ನು ನಗರದ ಪ್ರತಿಷ್ಠಿತ J.W. Marriott Prestige Golfshire ನಲ್ಲಿ ಬರಮಾಡಿಕೊಳ್ಳಲು ರಾಜ್ಯವು ಸಜ್ಜಾಗಿರುತ್ತದೆ. ಮೊದಲಿಗೆ 1st Finance & Central Deputies Meeting: ಡಿ.15ರ ವರೆಗೆ, ಎರಡನೆಯದಾಗಿ 1st Framework Working Group Meeting: ಡಿ.16ರಿಂದ 17ರ ವರೆಗೆ ನಡೆಯಲಿದೆ.
ಜಿ-20 ಸಮಾವೇಶದ ಪ್ರಯುಕ್ತ, ರಾಜ್ಯದಿಂದ ಸ್ಮಾರಕಗಳನ್ನು ಒಳಗೊಂಡಂತೆ, ಕರ್ನಾಟಕದ ಸ್ಥಳ ನಿರ್ವಹಣೆ, ವಸತಿ ವ್ಯವಸ್ಥೆಗಳು, ಭದ್ರತೆ, ಸಾರಿಗೆ, ಸಾಂಸ್ಕೃತಿಕ ಕಾರ್ಯಕ್ರಮ, ರಾಜ್ಯ ಸಂಬಂಧಿತ ಬ್ರ್ಯಾಂಡಿಂಗ್ ಮತ್ತು ಪ್ರಚಾರ, ವಿಹಾರ ಪ್ರವಾಸ, ರಸ್ತೆ ಹಾಗೂ ಮೂಲಸೌಕರ್ಯ ಮತ್ತು ಪ್ರತಿನಿಧಿಗಳಿಗೆ ಉಡುಗೊರೆಗಳನ್ನು ನೀಡುವುವವರೆಗೆ ಯಾವುದೇ ಸೌಲಭ್ಯದಿಂದ ವಂಚಿತರಾಗದಂತೆ ಸೇವೆ ಒದಗಿಸುತ್ತಿದೆ.
ಈ ಸಮಾವೇಶದ ಸುಗಮ ಕಾರ್ಯಾಚರಣೆಗೆ ಅನುಕೂಲವಾಗುವಂತೆ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿರವರ ಅಧೀನದಲ್ಲಿ ವಿವಿಧ ಪ್ರಾಧಿಕಾರಗಳಾದ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಪೊಲೀಸ್, ರಾಜ್ಯ ಗುಪ್ತಚರ, ಸಂಚಾರ, ಡಿಪಿಎಆರ್, ಬಿಬಿಎಂಪಿ, ಬಿಐಎಎಲ್ ಮತ್ತು ಆಯಾ ಜಿಲ್ಲೆಯ ಸಂಬಂಧಿತ ಜಿಲ್ಲಾಧಿಕಾರಿಗಳನ್ನೊಳಗೊಂಡಂತೆ ನೋಡಲ್ ಅಧಿüಕಾರಿಗಳನ್ನು ನೇಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.