ಅಂತರ್‌ಜಾತಿ ವಿವಾಹಗಳ ಮೇಲೆ ಸರಕಾರದ ವಕ್ರದೃಷ್ಟಿ?

Update: 2022-12-16 04:10 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ದೇಶ 'ಜಾತಿ ಜನಗಣತಿ'ಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದರೆ, ಮಹಾರಾಷ್ಟ್ರ ಸರಕಾರ ವಿವಾಹಿತರ 'ಜಾತಿ ಗಣತಿ'ಯೊಂದಕ್ಕೆ ಸಿದ್ಧತೆ ನಡೆಸುತ್ತಿದೆ. ಅಂತರ್ ಧರ್ಮೀಯ ಹಾಗೂ ಅಂತರ್ ಜಾತಿ ವಿವಾಹವಾದ ದಂಪತಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಮಹಾರಾಷ್ಟ್ರ ಸರಕಾರ ಸಮಿತಿಯೊಂದನ್ನು ರಚಿಸಿದೆ. ಅಂತರ್ ಜಾತಿ ಮತ್ತು ಅಂತರ್ ಧರ್ಮೀಯ ವಿವಾಹವಾದ ಮಹಿಳೆಯರು ತಮ್ಮ ಕುಟುಂಬಿಕರಿಂದ ತ್ಯಜಿಸಲ್ಪಟ್ಟಿದ್ದಾರೆಯೇ ಎಂಬುದರ ಬಗ್ಗೆ ಸಮಿತಿ ವಿವರಗಳನ್ನು ಕಲೆ ಹಾಕಲಿದೆಯಂತೆ. ಈ ಸಮಿತಿಯಲ್ಲಿ ಸರಕಾರದ ಹಾಗೂ ಸರಕಾರೇತರ ಕ್ಷೇತ್ರಗಳಿಗೆ ಸೇರಿದ 13 ಮಂದಿ ಸದಸ್ಯರಿರುತ್ತಾರಂತೆ. ಈ ಸಮಿತಿಯ ಅಧ್ಯಕ್ಷತೆಯನ್ನು ಸಚಿವ ಮಂಗಲ್ ಪ್ರತಾಪ್ ಸಿಂಹ ವಹಿಸಲಿದ್ದಾರೆ.

ಈವರೆಗೆ ಲವ್ ಜಿಹಾದ್ ಹೆಸರಿನಲ್ಲಿ ಅಂತರ್‌ಧರ್ಮೀಯ ಮದುವೆಗಳ ಬಗ್ಗೆ ಸರಕಾರ ತಲೆಕೆಡಿಸಿಕೊಳ್ಳುತ್ತಿತ್ತು. ಅಂತರ್ ಧರ್ಮೀಯ ಮದುವೆಗಳೇನಾದರೂ ನಡೆದರೆ ಕಾನೂನಿನ ದುರ್ಬಳಕೆಯ ಮೂಲಕ ತಡೆಯುವ ಪ್ರಯತ್ನವನ್ನು ಸರಕಾರವೇ ನಡೆಸುತ್ತಿತ್ತು. ವರ ಯಾವ ಧರ್ಮಕ್ಕೆ ಸೇರಿದ್ದಾನೆ ಎನ್ನುವುದರ ಆಧಾರದಲ್ಲಿ, ಆ ಮದುವೆ ಸರಕಾರದಿಂದ ಮಾನ್ಯತೆಯನ್ನು ಪಡೆದುಕೊಳ್ಳುತ್ತಿತ್ತು. ವರ ಮುಸ್ಲಿಮನೋ, ಕ್ರಿಶ್ಚಿಯನ್ ಧರ್ಮೀಯನೋ ಆಗಿದ್ದರೆ ಲವ್‌ಜಿಹಾದ್, ಬಲವಂತದ ಮತಾಂತರಗಳ ಹೆಸರಿನಲ್ಲಿ ಜೈಲು ಪಾಲಾಗಬೇಕಾಗುತ್ತಿತ್ತು. ವಧು ಸರಕಾರದ ದಿಗ್ಬಂಧನಕ್ಕೆ ಒಳಗಾಗಬೇಕಾಗುತ್ತಿತ್ತು. ಕೊನೆಗೆ ನ್ಯಾಯಾಲಯದಲ್ಲಿ ಹೋರಾಟ ನಡೆಸಿ ಜೋಡಿಗಳು ಒಂದಾಗಬೇಕಾದ ಸ್ಥಿತಿ ನಮ್ಮ ನಡುವೆ ಇದೆ. ಇದೀಗ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅಂತರ್ ಜಾತಿಯ ಮದುವೆಗಳ ವಿರುದ್ಧವೂ ಕಾರ್ಯಾಚರಣೆಗೆ ಮುಂದಾಗಿದೆ. ಅದರ ಭಾಗವಾಗಿಯೇ ಮಹಾರಾಷ್ಟ್ರದಲ್ಲಿ ಮಾಹಿತಿ ಸಂಗ್ರಹದ ಹೆಸರಿನಲ್ಲಿ ಅಂತರ್ ಜಾತಿಯ ವಿವಾಹವಾದ ದಂಪತಿಯ ಬದುಕಿನಲ್ಲಿ ಮೂಗು ತೂರಿಸುವ ಪ್ರಯತ್ನವೊಂದು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅಂತರ್ ಜಾತಿಯ ವಿವಾಹವಾದ ಜೋಡಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಪರೋಕ್ಷ ಕಿರುಕುಳಗಳನ್ನು ನೀಡುವ ಉದ್ದೇಶವನ್ನು ಈ ಮೂಲಕ ಸರಕಾರ ಹೊಂದಿದೆಯೇ ಎಂದು ಜನರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಜಾತಿ ರಹಿತ ಸಮಾಜವೊಂದರ ನಿರ್ಮಾಣ ಮಾಡುವುದಕ್ಕಾಗಿ ಸರಕಾರವೇ ಅಂತರ್‌ಜಾತಿಯ ವಿವಾಹಗಳನ್ನು ಪ್ರೋತ್ಸಾಹಿಸಬೇಕು. ಆದರೆ, ಆರೆಸ್ಸೆಸ್ ಆಳದಲ್ಲಿ ಜಾತಿ ವ್ಯವಸ್ಥೆಯನ್ನು ಪ್ರೋತ್ಸಾಹಿಸುತ್ತದೆ. ಕೆಳಜಾತಿಯ ಪುರುಷರು ಮೇಲ್‌ಜಾತಿಯ ಮಹಿಳೆಯರನ್ನು ವರಿಸುವುದರ ವಿರುದ್ಧ ಅದು ಆಕ್ಷೇಪಗಳನ್ನು ಹೊಂದಿದೆ. ದೇಶಾದ್ಯಂತ ಈ ಕಾರಣದಿಂದಾಗಿಯೇ 'ಮರ್ಯಾದೆ ಹತ್ಯೆ'ಗಳು ಹೆಚ್ಚುತ್ತಿವೆ. ಇದೀಗ ದೇಶದಲ್ಲಿ ಇಂತಹ ವಿವಾಹಗಳನ್ನು ತಡೆಯುವ ಉದ್ದೇಶಕ್ಕಾಗಿಯೇ ಸರಕಾರ ಅಂತರ್‌ಜಾತಿಯ ವಿವಾಹಿತರ ಮಾಹಿತಿಗಳನ್ನು ಸಂಗ್ರಹಿಸಲು ಮುಂದಾಗಿದೆಯೆ? ಎಂದು ಶಂಕಿಸುವಂತಾಗಿದೆ. ಮಹಾರಾಷ್ಟ್ರದಲ್ಲಿ ಈ ಪ್ರಯೋಗ ಯಶಸ್ವಿಯಾದರೆ, ಇತರ ರಾಜ್ಯ ಸರಕಾರಗಳು ಇದನ್ನು ಜಾರಿಗೆ ತರುವ ಸಾಧ್ಯತೆಗಳಿವೆ. ಮಹಾರಾಷ್ಟ್ರ ಸರಕಾರ ಏಕಾಏಕಿ ಅಂತರ್‌ಜಾತಿಯ ವಿವಾಹಿತರ ಕುರಿತಂತೆ ಕಾಳಜಿಯನ್ನು ವ್ಯಕ್ತಪಡಿಸಲು ಕಾರಣವಾದರೂ ಏನು? ಒಂದು ವೇಳೆ ಕೌಟುಂಬಿಕ ಜಗಳ ಇತ್ಯಾದಿಗಳಿದ್ದರೆ ಅವುಗಳು ಪೊಲೀಸ್ ಠಾಣೆಗಳಲ್ಲಿ, ಕೌಟುಂಬಿಕ ನ್ಯಾಯಾಲಯಗಳಲ್ಲಿ ದಾಖಲಾಗುತ್ತವೆ. ಹೀಗಿರುವಾಗ ನೇರವಾಗಿ ಅಂತರ್‌ಜಾತಿಯ ವಿವಾಹಿತರ ಮನೆಗಳ ಬಾಗಿಲು ತಟ್ಟಿ 'ನೀವು ಒಟ್ಟಾಗಿದ್ದೀರಾ? ಇಲ್ಲವೆ?' ಎಂದು ವಿಚಾರಣೆ ನಡೆಸುವ ಅವಶ್ಯಕತೆ ಇದೆಯೆ? ಬಹುತೇಕ ವಿವಾಹಿತರು ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಾ ಜೊತೆ ಜೊತೆಯಾಗಿ ಬಾಳುತ್ತಿರುತ್ತಾರೆ. ಇಂದು ಸಮಸ್ಯೆಗಳಿರುವುದು ಕೇವಲ ಅಂತರ್‌ಜಾತಿ ಅಥವಾ ಅಂತರ್ ಧರ್ಮೀಯ ದಂಪತಿಯ ನಡುವೆ ಮಾತ್ರವಲ್ಲ. ಒಂದೇ ಜಾತಿ, ಒಂದೇ ಧರ್ಮಕ್ಕೆ ಸೇರಿದ ದಂಪತಿಯೂ ಸಾವಿರ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ವರದಕ್ಷಿಣೆ ದೌರ್ಜನ್ಯಗಳು ವ್ಯಾಪಕವಾಗಿರುವುದು ಇಂತಹ ಸ್ವಜಾತಿ, ಸ್ವಧರ್ಮಕ್ಕೆ ಸೇರಿದ ಕುಟುಂಬಗಳಲ್ಲೇ. ಒಂದು ವೇಳೆ ನಿಜಕ್ಕೂ ಸರಕಾರಕ್ಕೆ ಕೌಟುಂಬಿಕ ಬದುಕಿನ ಬಗ್ಗೆ ಕಾಳಜಿಯಿದೆಯಾದರೆ ಎಲ್ಲ ಕುಟುಂಬಗಳನ್ನೂ ಸಂದರ್ಶಿಸಿ ಮಾಹಿತಿಗಳನ್ನು ಪಡೆದುಕೊಂಡು ಅವರ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸಲಿ. ಕೇವಲ ಅಂತರ್‌ಜಾತಿಯ ದಂಪತಿಯನ್ನೇ ಗುರಿಯಾಗಿಸಿಕೊಂಡು ಮಾಹಿತಿ ಸಂಗ್ರಹಿಸಲು ಹೊರಡುವುದು ಹತ್ತು ಹಲವು ಅನುಮಾನಗಳಿಗೆ ಕಾರಣವಾಗುತ್ತದೆ.

ಹಾಗೆಂದು ಅಂತರ್‌ಜಾತಿ ವಿವಾಹಗಳಲ್ಲೂ ಸಮಸ್ಯೆಗಳು ಇಲ್ಲ ಎಂದಿಲ್ಲ. ಇಂದು ಕೆಲವು ನಿರ್ದಿಷ್ಟ ಮೇಲ್‌ಜಾತಿಯ ಸಮುದಾಯದ ಜನರು ತಮ್ಮ ಗಂಡು ಮಕ್ಕಳಿಗೆ ತಮ್ಮ ಜಾತಿಯ ವಧುವಿನ ಕೊರತೆಯಿದೆ ಎನ್ನುವ ಕಾರಣಕ್ಕಾಗಿ, ಕೆಳಜಾತಿಯ ವಧುಗಳನ್ನು ದುಡ್ಡಿನ ಆಮಿಷದ ಮೂಲಕ ಕೊಂಡುಕೊಂಡು ಆ ಹೆಣ್ಣನ್ನು ಶುದ್ಧೀಕರಿಸಿ ಮದುವೆಯಾಗುವ ಕೆಟ್ಟ ಸಂಪ್ರದಾಯವಿದೆ. ತಮ್ಮ ಮೇಲ್‌ಜಾತಿಯ ಹಿರಿಮೆ ಮತ್ತು ದುಡ್ಡನ್ನು ಬಳಸಿಕೊಂಡು ಹೆಣ್ಣನ್ನಷ್ಟೇ ಶುದ್ಧೀಕರಿಸಿ ತಮ್ಮ ಮನೆಗೆ ಸೇರಿಸುವ ಇವರು ಆಕೆಯ ಕುಟುಂಬವನ್ನು ಶುದ್ಧೀಕರಿಸಿ ತಮ್ಮ ಕುಟುಂಬದ ಭಾಗವಾಗಿಸಲು ಸಿದ್ಧರಿಲ್ಲ. ಇಲ್ಲಿ ನಡೆಯುವುದು ಅಂತರ್‌ಜಾತಿ ವಿವಾಹವಲ್ಲ. ತಮ್ಮ ಜಾತಿಯಲ್ಲಿ ವಧು ಇಲ್ಲ ಎನ್ನುವ ಒಂದೇ ಅನಿವಾರ್ಯ ಕಾರಣಕ್ಕೆ ಇತರ ಕೆಳಜಾತಿಯ ಹೆಣ್ಣು ಮಕ್ಕಳನ್ನು ಹಣ ಇತ್ಯಾದಿ ಆಮಿಷಗಳ ಮೂಲಕ ತಮ್ಮ ಜಾತಿಗೆ ಶುದ್ಧೀಕರಿಸಿ ಮದುವೆ ನಡೆಸುತ್ತಿದ್ದಾರೆ. ನಿಜಕ್ಕೂ ಇದು ಬಲವಂತದ ಮತಾಂತರಕ್ಕೆ ಸಮವಾಗಿದೆ. ಇಂತಹ ಮದುವೆ ನಮ್ಮ ಸಮಾಜಕ್ಕೆ ಬಹುದೊಡ್ಡ ಅನಿಷ್ಠವಾಗಿದೆ. ಮೇಲ್‌ಜಾತಿಯ ಜನರಿಗೆ ವಧುವಿನ ಕೊರತೆಯಿದೆಯಾದರೆ, ಕೆಳಜಾತಿಯ ಯುವತಿಯನ್ನು ಯಾವುದೇ ಶುದ್ಧೀಕರಣವಿಲ್ಲದೆ ಮದುವೆಯಾಗಬೇಕು ಮಾತ್ರವಲ್ಲ, ಆಕೆಯ ಜೊತೆಗೆ ಆಕೆಯ ಕುಟುಂಬವನ್ನು ತಮ್ಮ ಕುಟುಂಬದ ಭಾಗವಾಗಿ ಸ್ವೀಕರಿಸಬೇಕು. ಆದರೆ ಈ ಶುದ್ಧೀಕರಣದ ಮದುವೆಯಲ್ಲಿ ಹೆಣ್ಣು ತನ್ನ ಕುಟುಂಬದಿಂದ ಶಾಶ್ವತವಾಗಿ ದೂರವಾಗಬೇಕಾಗುತ್ತದೆ. ಇಂತಹ ಮದುವೆಗಳ ಬಗ್ಗೆ ಸರಕಾರ ಮಾಹಿತಿ ಸಂಗ್ರಹಿಸುವ ಅಗತ್ಯ ಖಂಡಿತಾ ಇದೆ. ಉಳಿದಂತೆ ಸ್ವಯಂ ಇಚ್ಛೆಯಿಂದ ಅಂತರ್‌ಜಾತಿ ವಿವಾಹವಾದ ಜೋಡಿಗಳಿಗೆ ಮಾಹಿತಿ ಸಂಗ್ರಹಿಸುವ ನೆಪದಲ್ಲಿ ಕಿರುಕುಳ ನೀಡುವುದು ಸರಿಯಲ್ಲ.

Similar News