ಉಡುಪಿ: ಯಕ್ಷಗಾನ ಕಲಾವಿದರಿಗೆ ಬಸ್‌ಪಾಸ್ ವಿತರಣೆ

Update: 2022-12-19 15:19 GMT

ಉಡುಪಿ: ಯಕ್ಷಗಾನ ಕಲಾರಂಗ, ಕೆನರಾ ಬಸ್ ಮಾಲಕರ ಸಂಘದ ಸಹಕಾರದಿಂದ ಕಳೆದ ಹಲವು ವರ್ಷಗಳಿಂದ ಕರಾವಳಿಯ ವೃತಿಪರ ಮೇಳಗಳ ಕಲಾವಿದರಿಗೆ ಶೇ.50ರಷ್ಟು ರಿಯಾಯಿತಿ ದರದಲ್ಲಿ ವಿತರಿಸುತ್ತಿರುವ ಬಸ್ ಪಾಸ್‌ಗಳನ್ನು ರವಿವಾರ ಕಲಾರಂಗದ ಕಚೇರಿಯಲ್ಲಿ ವಿತರಿಸಲಾಯಿತು.

ಕೆನರಾ ಬಸ್ಸು ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ಮೇಳದ ಪ್ರತಿನಿಧಿಗಳಿಗೆ ಪಾಸ್‌ಗಳನ್ನು ವಿತರಿಸಿ ಮಾತನಾಡಿ, ಕಲಾವಿದರಿಗೆ ಅನುಕೂಲವಾಗುವಂತೆ ಮುಂದೆ ಅಕ್ಟೋಬರ್ ತಿಂಗಳ 31ರವರೆಗೆ ವಿಸ್ತರಿಸುವುದಾಗಿ ಭರವಸೆ ನೀಡಿದರು.

ಸೌಕೂರು ಮೇಳದ ಆನಂದ ರಾವ್, ಗೋಳಿಗರಡಿ ಮೇಳದ ಕೃಷ್ಣ ಸಂತೆಕಟ್ಟೆ ಮತ್ತು ಶನೀಶ್ವರ ಮೇಳದ ಪ್ರವೀಣ ಬಲ್ಯಾಯ ಸಾಂಕೇತಿಕವಾಗಿ ಪಾಸ್‌ಗಳನ್ನು ಸ್ವೀಕರಿಸಿದರು. ಕರಾವಳಿಯ 25 ವಿವಿಧ ಮೇಳಗಳ 400ಕ್ಕೂ ಮಿಕ್ಕಿದ ಕಲಾವಿದರು ಈ ಪಾಸ್ ಸೌಲಭ್ಯ ಪಡೆಯಲಿದ್ದಾರೆ.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಪದಾಧಿಕಾರಿ ಗಳಾದ ಪಿ. ಕಿಶನ್ ಹೆಗ್ಡೆ, ಪ್ರೊ.ನಾರಾಯಣ ಎಂ. ಹೆಗಡೆ, ಹೆಚ್.ಎನ್. ಶೃಂಗೇಶ್ವರ, ಕಿಶೋರ್ ಸಿ. ಉದ್ಯಾವರ, ವಿಶ್ವನಾಥ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

Similar News