'ಸಮ್ಮೇದ ಶಿಖರ್ಜಿ ಬಚಾವೋ' ಆಗ್ರಹಿಸಿ ಡಿ.28ರಂದು ಮೆರವಣಿಗೆ: ಅಭಯಚಂದ್ರ ಜೈನ್

Update: 2022-12-26 06:02 GMT

ಮಂಗಳೂರು, ಡಿ‌.26: ಜೈನರಿಗೆ ಅತ್ಯಂತ ಪವಿತ್ರ ಸ್ಥಳವಾದ ಸಮ್ಮೇದ ಶಿಖರ್ಜಿಯನ್ನು ಅಲ್ಲಿನ ಜಾರ್ಖಂಡ್ ರಾಜ್ಯ ಸರಕಾರ ಪ್ರವಾಸಿ ತಾಣವನ್ನಾಗಿ ಮಾಡಲು ಆದೇಶಿಸಿರುವುದನ್ನು ಖಂಡಿಸಿ ಡಿ.28ರಂದು ವಿಶ್ವಪ್ರಸಿದ್ಧ ತಿಭುವನತಿಲಕ ಚೂಡಾಮಣಿ ಬಸದಿ(ಸಾವಿರಕಂಬದ ಬಸದಿ)ಯಿಂದ ಮೂಡುಬಿದಿರೆ ಸ್ವರಾಜ್ಯ ಮೈದಾನದ ತನಕ ಮೌನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ತಿಳಿಸಿದ್ದಾರೆ.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡುಬಿದಿರೆ ಶ್ರೀ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ಮತ್ತು ಕಾರ್ಕಳ ಶ್ರೀ ಜೈನ ಮಠದ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಈ ಮೆರವಣಿಗೆ ನಡೆಯಲಿದೆ ಎಂದರು.

ಜೈನ ಸಂಪ್ರದಾಯದಂತೆ ಸಮ್ಮೇದ ಶಿಖರ್ಜಿ ಕ್ಷೇತ್ರವು ಭೂತಕಾಲ-ವರ್ತಮಾನ ಮತ್ತು ಭವಿಷ್ಯತ್‌ ಕಾಲದ ಎಲ್ಲಾ ತೀರ್ಥಂಕರರು ಸಾಧನೆ ಮಾಡಿ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳುವ ಶಾಶ್ವತ ಸಿದ್ಧಕ್ಷೇತ್ರವಾಗಿರುತ್ತದೆ. ವರ್ತಮಾನ ಕಾಲದ 24 ತೀರ್ಥಂಕರರ ಪೈಕಿ 20  ತೀರ್ಥಂಕರರು ಈ ಬೆಟ್ಟದ ಮೇಲೆ ಪುರುಷಾರ್ಥ ಮಾಡಿ ಸಿದ್ಧಪದವಿ ಪ್ರಾಪ್ತಿ ಮಾಡಿರುತ್ತಾರೆ. ದಿನಂಪ್ರತಿ ಸಾವಿರಾರು ಜನ ಜೈನರು ಭಕ್ತಿ ಶ್ರದ್ಧೆಯಿಂದ ಈ ಕ್ಷೇತ್ರದ ದರ್ಶನ ಮಾಡಿಕೊಳ್ಳುತ್ತಾರೆ. ದಿಗಂಬರ ಮತ್ತು ಶ್ವೇತಾಂಬರ ಪಂಥದ ಮುನಿಗಳು, ಆರ್ಯಿಕೆಯರು, ಕ್ಷುಲ್ಲಕರು ಮತ್ತು ಐಲಕರು ಕೂಡಾ ಇಂದಿಗೂ ಅಲ್ಲಿನ ದರ್ಶನ ಮಾಡಿ ಜನ್ಮ ಸಾರ್ಥಕ ಮಾಡುತ್ತಿದ್ದಾರೆ ಎಂದರು‌.

ಸುಮಾರು 9 ಕಿ.ಮೀ. ನಡೆದು ಬೆಟ್ಟವನ್ನು ಏರಿ ಅಲ್ಲಿರುವ ಚರಣ 9 ಪಾದುಕೆಗಳನ್ನು ದರ್ಶನ ಮಾಡಿ 9 ಕಿ.ಮೀ. ಇಳಿದು ಒಂದೇ ದಿನದಲ್ಲಿ ತೀರ್ಥ ಕ್ಷೇತ್ರದ ದರ್ಶನವನ್ನು ಕಾಲ್ನಡಿಗೆಯಿಂದ ಮಾಡಬೇಕಾಗಿದೆ. ಆದಿವಾಸಿಗಳಿಂದ ತುಂಬಿದ ಅಲ್ಲಿನ ಸ್ಥಳೀಯ ಜನರು ಕೂಡ ಈ ತೀರ್ಥ ಕ್ಷೇತ್ರಕ್ಕೆ ಭಕ್ತಿಯಿಂದ ನಡೆದುಕೊಳ್ಳುತ್ತಿರುವುದು ವಿಶೇಷವಾಗಿದೆ ಎಂದರು.

ಪ್ರವಾಸಿ ತಾಣವನ್ನಾಗಿ ಮಾಡುವ ಜಾರ್ಖಂಡ್ ರಾಜ್ಯ ಸರಕಾರದ ನಿಲುವಿನಿಂದ ಅಲ್ಪಸಂಖ್ಯಾತ ಜೈನರ ಭಾವನೆಗಳಿಗೆ ಧಕ್ಕೆ ಉಂಟಾಗಲಿದೆ. ಜೈನರ ಮೇಲಿನ ದಬ್ಬಾಳಿಕೆಯನ್ನು ನಿಲ್ಲಿಸಿ ಅನಾದಿಕಾಲದಿಂದ ಇರುವ ಪುಣ್ಯಭೂಮಿಯ ಪಾವಿತ್ರ್ಯತೆಯನ್ನು ರಕ್ಷಿಸಿ ಈ ಹಿಂದಿನ ಹಾಗೆ ಜೈನರ ಶಾಶ್ವತ ಕ್ಷೇತ್ರವಾಗಿ ಮುಂದಕ್ಕೂ ಅವಕಾಶ ಮಾಡಿಕೊಡುವಂತೆ ಮತ್ತು ಈಗಾಗಲೇ ಪ್ರವಾಸಿ ತಾಣವನ್ನಾಗಿ ಮಾಡಲು ಉದ್ದೇಶಿಸಿರುವ ಅಧಿಸೂಚನೆಯನ್ನು ಹಿಂಪಡೆಯುವಂತೆ ರಾಷ್ಟ್ರಪತಿ, ಪ್ರಧಾನಿಗೆ ಹಾಗೂ ಜಾರ್ಖಂಡ್‌ ರಾಜ್ಯ ಸರಕಾರಕ್ಕೆ ಒತ್ತಾಯ ಮಾಡಲು ಮೌನಮೆರವಣಿಗೆ ಆಯೋಜಿಸಲಾಗಿದೆ ಎಂದು ಅಭಯಚಂದ್ರ ಜೈನ್ ಹೇಳಿದರು.

'ಸಮ್ಮೇದ ಶಿಖರ್ಜಿ ಬಚಾವೋ' ಎಂಬ ಶೀರ್ಷಿಕೆಯೊಂದಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಧರ್ಮಬಂಧುಗಳು ಸೇರಿ ಪವಿತ್ರ ತೀರ್ಥಕ್ಷೇತ್ರಗಳನ್ನು ಮೋಜು-ಮಸ್ತಿ ಕೇಂದ್ರಗಳನ್ನಾಗಿ ಪರಿವರ್ತಿಸದಂತೆ ಒತ್ತಾಯಿಸಿ ಪ್ರಧಾನಿಗೆ ಅಂತರ್ದೇಶೀಯ ಪತ್ರ ಬರೆಯುವ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೈನ ಸಮುದಾಯದ ಪ್ರಮುಖರಾದ ಪುಷ್ಪರಾಜ ಜೈನ್, ಪ್ರವೀಣ್‌ಚಂದ್ರ ಜೈನ್, ಸುದರ್ಶನ ಜೈನ್, ಯುವರಾಜ ಜೈನ್, ಪದ್ಮಪ್ರಸಾದ ಜೈನ್, ಕೆ.ಕೃಷ್ಣಪ್ರಸಾದ ಹೆಗ್ಡೆ, ಎಂ.ಆದರ್ಶ ಜೈನ್ ಉಪಸ್ಥಿತರಿದ್ದರು.

Similar News