ಬೆಂಗಳೂರು | ದೇಶಿ ಪಿಸ್ತೂಲು, ಜೀವಂತ ಗುಂಡು ವಶಪಡಿಸಿಕೊಂಡ ಪೊಲೀಸರು: ಆರೋಪಿಯ ಬಂಧನ

Update: 2022-12-30 16:08 GMT

ಬೆಂಗಳೂರು, ಡಿ.30: ಎರಡು ದೇಶಿ ಪಿಸ್ತೂಲುಗಳು ಹಾಗೂ ಮೂರು ಜೀವಂತ ಗುಂಡುಗಳನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡಿದ್ದ ವ್ಯಕ್ತಿಯೋರ್ವನನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್‍ರೆಡ್ಡಿ ಅವರು, ಬಂಧಿತನನ್ನು ಸಮೀರುವುಲ್ಲಾ ಖಾನ್ ಎಂದು ಗುರುತಿಸಲಾಗಿದ್ದು, ಈತ ತನ್ನ ಕಾರಿನಲ್ಲಿ ಬಚ್ಚಿಟ್ಟಿದ್ದ 2 ದೇಶಿ ಪಿಸ್ತೂಲುಗಳು, 3 ಜೀವಂತ ಗುಂಡುಗಳು ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಆರೋಪಿ ವಿರುದ್ಧ ನ್ಯಾಯಾಲಯ ವಾರಂಟ್ ಹೊರಡಿಸಿದ್ದರೂ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದನು. ಆರೋಪಿಯು ಹಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ, ಕೊಲೆ ಯತ್ನ ಇನ್ನಿತರ ಕೇಸ್‍ಗಳಲ್ಲಿ ಭಾಗಿಯಾಗಿದ್ದು, ಶೇಷಾದ್ರಿಪುರಂ ಪೊಲೀಸರ ತಂಡವು ಕಾರ್ಯಾಚರಣೆ ನಡೆಸಿ ನವದೆಹಲಿಯಲ್ಲಿ ಬಂಧಿಸಿದ್ದಾರೆ. 

ಈ ಮೊಕದ್ದಮೆ ದಾಖಲಿಸಿಕೊಂಡಿರುವ ಶೇಷಾದ್ರಿಪುರಂ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

Similar News