ಬಿಜೆಪಿಯಿಂದ ಮಾತ್ರ ದೇಶಕ್ಕೆ ಉಜ್ವಲ ಭವಿಷ್ಯ ಸಾಧ್ಯ: ಮುಖ್ಯಮಂತ್ರಿ ಬೊಮ್ಮಾಯಿ

''5 ವರ್ಷಗಳಲ್ಲಿ ಸಿದ್ದರಾಮಯ್ಯ 2 ಲಕ್ಷ ಕೋಟಿ ರೂ.ಸಾಲ ಮಾಡಿದ್ದಾರೆ''

Update: 2022-12-31 16:40 GMT

ಬೆಂಗಳೂರು, ಡಿ. 31: ಭಾರತ ದೇಶವನ್ನು ಉಳಿಸಿ-ಬೆಳಸಲು, ಉಜ್ವಲ ಭವಿಷ್ಯ ನೀಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು  ತಿಳಿಸಿದ್ದಾರೆ.

ಶನಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಬಿಜೆಪಿಯಿಂದ ಏರ್ಪಡಿಸಿದ್ದ ಬೂತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ 2 ಸಾವಿರ ಪಕ್ಷಗಳಿದ್ದು ಬಿಜೆಪಿ ಸದಸ್ಯರಾಗಿ ಕೆಲಸ ಮಾಡುತ್ತಿರುವುದು ನಮ್ಮೆಲ್ಲರ ಅದೃಷ್ಟ. ವಿಶ್ವದ ಅತಿದೊಡ್ಡ ಪಕ್ಷ ಬಿಜೆಪಿ. ಚೈನಾದ ಕಮ್ಯುನಿಸ್ಟ್ ಪಕ್ಷಕ್ಕಿಂತ ಅತಿಹೆಚ್ವು ಸದಸ್ಯರನ್ನು ಹೊಂದಿದೆ ಎಂದು ಹೇಳಿದರು.

ದೇಶಕ್ಕಾಗಿ ತ್ಯಾಗ ಮಾಡಲೂ ಸಿದ್ದ ಎನ್ನುವ ದೇಶಭಕ್ತರ ಪಕ್ಷ. ಕಾಂಗ್ರೆಸ್ ಕೇವಲ ಅಧಿಕಾರಕ್ಕಾಗಿ ಇರುವ ರಾಷ್ಟ್ರೀಯ ಪಕ್ಷ. ಇದು ನಮ್ಮ ಮತ್ತು ಅವರ ನಡುವಿನ ವ್ಯತ್ಯಾಸ. ನಾವು ಭಾರತ್ ಮಾತಾ ಕಿ ಜೈ ಎಂದರೆ, ಅವರು ಸೋನಿಯಾ ಮಾತಾ ಕಿ ಜೈ ಅನ್ನುತ್ತಾರೆ. ಅವರ ನಿಷ್ಠೆ ಇಟಲಿಯ ನಾಯಕರಿಗೆ ಇದ್ದರೆ, ನಮ್ಮ ಭಕ್ತಿ ಭಾರತ ಮಾತೆಗೆ ಎಂದು ಹೇಳಿದರು.

ಕರ್ನಾಟಕ ಪ್ರಗತಿಪರ ರಾಜ್ಯ. ಇದನ್ನು ಅತ್ಯಂತ ಹಿಂದುಳಿದ ರಾಜ್ಯವನ್ನಾಗಿ ಮಾಡುವ ಕೆಲಸವನ್ನು ಕಾಂಗ್ರೆಸ್ 5 ವರ್ಷ ಮಾಡಿತು. ಸಿದ್ದರಾಮಯ್ಯ 5 ವರ್ಷಗಳಲ್ಲಿ 2 ಲಕ್ಷ ಕೋಟಿ ರೂ.ಸಾಲ ಮಾಡಿದ್ದಾರೆ. ಕೋವಿಡ್ ಸೋಂಕು ಇರಲಿಲ್ಲ. ಸಿದ್ದರಾಮಯ್ಯ ಬರುವವರೆಗೂ 1ಲಕ್ಷ ಕೋಟಿ ರೂ.ಸಾಲವಿತ್ತು. ಅವರು ಬಂದ ನಂತರ ಸಾಲದ ಮೊತ್ತ ಹೆಚ್ಚಾಯಿತು ಎಂದು ಟೀಕಿಸಿದರು.

ಜನರ ಬಳಿಗೆ ಹೋಗಬೇಕು: ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆ ಸಹಿತ ರೈತ ವಿದ್ಯಾನಿಧಿ, ಕೂಲಿಕಾರರು, ಮೀನುಗಾರರು, ನೇಕಾರರ ಮಕ್ಕಳಿಗೆ ವಿದ್ಯಾನಿಧಿ, ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ವಿವೇಕಾನಂದ ಯೋಜನೆ, ಸ್ತ್ರೀ ಸಾಮಥ್ರ್ಯ ಯೋಜನೆಗಳ ಮೂಲಕ 5 ಲಕ್ಷ ಮಹಿಳೆಯರು ಹಾಗೂ 5 ಲಕ್ಷ ಯುವಕರಿಗೆ ಈ ಯೋಜನೆಗಳಿಂದ ಸ್ವಯಂ ಉದ್ಯೋಗ ಕಲ್ಪಿಸಲಾಗುತ್ತಿದೆ ಎಂದರು.

ನಮ್ಮ ಸರಕಾರ ಮಾಡಿರುವ ಕೆಲಸಗಳ ರಿಪೋರ್ಟ್ ಕಾರ್ಡ್ ಹಿಡಿದು ಸಕಾರಾತ್ಮಕವಾಗಿ ಜನರ ಬಳಿಗೆ ಹೋಗಬೇಕು. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವ ಮೂಲಕ ನವಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡುವ ಆತ್ಮವಿಶ್ವಾಸವನ್ನು ಈ ಕಾರ್ಯಕ್ರಮ ನೀಡಿದೆ ಎಂದು ಅವರು ನುಡಿದರು.

Similar News