ಬೆಂಗಳೂರು | ಕರೆ ಮಾಡಬೇಕು ಎಂದು ಹೇಳಿ ಮೊಬೈಲ್ ಪಡೆದಿದ್ದ ವ್ಯಕ್ತಿಯಿಂದ ಬ್ಲ್ಯಾಕ್ ಮೇಲ್: ಆರೋಪಿ ಸೆರೆ

Update: 2023-01-03 15:58 GMT

ಬೆಂಗಳೂರು, ಜ.3: ಮೊಬೈಲ್ ಕಸಿದು ಪರಾರಿಯಾಗಿ, ಬೆದರಿಕೆವೊಡ್ಡಿದ್ದ ಆರೋಪ ಸಂಬಂಧ ಪವನ್ ಎಂಬಾತನನ್ನು ಯಶವಂತಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. 

ಡಿ.25ರಂದು ಮತ್ತಿಕೆರೆ ಬಳಿ ದೇವವ್ರತ್ ಸಿಂಗ್ ಎಂಬಾತನ ಬಳಿ ಬಂದಿದ್ದ ಆರೋಪಿ ಪವನ್, ನನ್ನ ಮೊಬೈಲ್ ಕೆಟ್ಟು ಹೋಗಿದೆ. ಒಂದು ಕರೆ ಮಾಡಬೇಕು ಎಂದು ಹೇಳಿ ಮೊಬೈಲ್ ಪಡೆದಿದ್ದ. ಬಳಿಕ ಮೊಬೈಲ್ ಪಡೆದ ಕ್ಷಣಾರ್ಧದಲ್ಲೇ ತನ್ನ ಬೈಕ್ ಹತ್ತಿ ಪರಾರಿಯಾಗಿದ್ದಾನೆ.

ನಂತರ ಮೊಬೈಲ್‍ನಲ್ಲಿದ್ದ ದೇವವ್ರತ್ ಹಾಗೂ ಆತನ ಪ್ರೇಯಸಿಯ ಖಾಸಗಿ ಫೋಟೋಗಳನ್ನ ಗಮನಿಸಿದ್ದ ಆರೋಪಿ, ದೇವವ್ರತ್ ಪ್ರೇಯಸಿಗೆ ಕರೆ ಮಾಡಿ 1 ಲಕ್ಷ ಹಣ ಕೊಡದಿದ್ದರೆ ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ದಾಖಲಾದ ದೂರಿನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Similar News