×
Ad

ಬೆಂಗಳೂರಿನಲ್ಲಿ ಅಪರಾಧ ಪ್ರಕರಣ ಇಳಿಕೆ: ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

Update: 2023-01-04 23:43 IST

ಬೆಂಗಳೂರು, ಜ.4: ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ಗಂಭೀರ ಅಪರಾಧ ಪ್ರಕರಣಗಳ ಸಂಖ್ಯೆ ಬಹಳಷ್ಟು ಇಳಿಮುಖವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಬುಧವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2022ರಲ್ಲಿ ಒಟ್ಟು 9,281 ಪ್ರಕರಣಗಳು ದಾಖಲಾಗಿದ್ದು, 2,728 ಪ್ರಕರಣಗಳನ್ನು ಭೇದಿಸಲಾಗಿದೆ. ಹಾಗೇ, 2019ರಲ್ಲಿ ಬೆಂಗಳೂರಿನಲ್ಲಿ 9,962 ಪ್ರಕರಣಗಳು ದಾಖಲಾಗಿದ್ದು 4,123 ಪ್ರಕರಣಗಳನ್ನು ಭೇದಿಸಿದ್ದರು. 2020ರಲ್ಲಿ 6,980 ಪ್ರಕರಣಗಳು ದಾಖಲಾಗಿದ್ದವು, ಈ ಪೈಕಿ 3,149 ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದರು. 2021ರಲ್ಲಿ 7,574 ಪ್ರಕರಣಗಳು ದಾಖಲಾಗಿದ್ದು, 3,580 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದರು ಎಂದರು.

2020-21ನೆ ಸಾಲಿನಲ್ಲಿ ಕೋವಿಡ್ 19 ಕಾರಣದಿಂದ ಲಾಕ್‍ಡೌನ್, ರಾತ್ರಿ ಸಂಚಾರ ನಿರ್ಬಂಧ ಇರುವದರಿಂದ ಪ್ರಕರಣಗಳ ಸಂಖ್ಯೆ ಕಡಿಮೆ ವರದಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಗಮನಿಸಿದಾಗ ಕಳೆದ ವರ್ಷ ದಾಖಲಾದ ಪ್ರಕರಣಗಳ ಸಂಖ್ಯೆಗಳಲ್ಲಿ ಇಳಿಮುಖವಾಗಿದೆ. 2020ರಲ್ಲಿ 31 ಪ್ರಕರಣ, 2021ರಲ್ಲಿ 36 ಡಕಾಯಿತಿ ಪ್ರಕರಣಗಳು ದಾಖಲಾದರೆ 2022ರಲ್ಲಿ 23 ಪ್ರಕರಣಗಳು ದಾಖಲಾಗಿವೆ.

2020ರಲ್ಲಿ 152 ಹಾಗೂ 2021ರಲ್ಲಿ 166 ಸರಗಳ್ಳತನ ಪ್ರಕರಣದ ದೂರು ದಾಖಲಾಗಿದ್ದರೆ, 2022ರಲ್ಲಿ 151 ಪ್ರಕರಣ ದಾಖಲಾಗಿವೆ. ಅದೇ ರೀತಿ 2020ರಲ್ಲಿ 177 ಕೊಲೆ ಪ್ರಕರಣ ದಾಖಲಾದರೆ 2021ರಲ್ಲಿ 154 ಕೊಲೆ ಪ್ರಕರಣಗಳು ದಾಖಲಾಗಿವೆ. 2022ರಲ್ಲಿ 172 ಕೊಲೆ ಪ್ರಕರಣ ದಾಖಲಾಗಿವೆ ಎಂದು ಅವರು ವಿವರಿಸಿದರು.

2022ರಲ್ಲಿ ನಗರದಲ್ಲಿ 579 ಮಾದಕ ಪದಾರ್ಥ ಸರಬರಾಜುಗಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದ್ದು 3448 ವ್ಯಸನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಇಬ್ಬರು ಮಾದಕ ವಸ್ತು ಸರಬರಾಜುಗಾರರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಜರುಗಿಸಲಾಗಿದೆ ಎಂದ ಅವರು, 2022ರಲ್ಲಿ 8,773 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 7,734 ಪ್ರಕರಣಗಳನ್ನು ಪೂರ್ಣಗೊಳಿಸಿ 13.06 ಕೋಟಿ ರೂ.ಹಣವನ್ನು ವಂಚಕರ ಕೈ ಸೇರದಂತೆ ತಡೆಹಿಡಿಯಲಾಗಿದೆ ಎಂದರು.

ಅನಧಿಕೃತವಾಗಿ ನೆಲೆಸಿದ್ದ 600 ವಿದೇಶಿಗರ ಪೈಕಿ 34 ಜನರನ್ನು ಪತ್ತೆಹಚ್ಚಿ ಅವರವರ ದೇಶಕ್ಕೆ ಕಳಿಸಲಾಗಿದೆ. 50 ವಿದೇಶಿ ಜನರನ್ನು ಬಂಧನ ಕೇಂದ್ರದಲ್ಲಿ ಇರಿಸಲಾಗಿದ್ದು, ಶೀಘ್ರದಲ್ಲೇ ವಾಪಸ್ ಕಳಿಸಲಾಗುವುದುಎಂದು ಅವರು ಹೇಳಿದರು.

Similar News