ಸಿಎ ಪರೀಕ್ಷೆಯಲ್ಲಿ ಮಂಗಳೂರಿನ ರಮ್ಯಶ್ರೀಗೆ ದ್ವಿತೀಯ ರ್ಯಾಂಕ್
ಮಂಗಳೂರು: ಅಖಿಲ ಭಾರತೀಯ ಲೆಕ್ಕಪರಿಶೋಧಕ ಸಂಸ್ಥೆಯು 2022ರ ನವೆಂಬರ್ನಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಸುರತ್ಕಲ್ ಸಮೀಪದ ಹೊಸಬೆಟ್ಟುವಿನ ರಮ್ಯಶ್ರೀ ದೇಶದಲ್ಲೇ ದ್ವಿತೀಯ ರ್ಯಾಂಕ್ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಲ್ಕಿಯ ಭಾರತೀಯ ಜೀವವಿಮಾ ನಿಗಮದ ಉದ್ಯೋಗಿ ರಮೇಶ್ ರಾವ್ ಮತ್ತು ಮಂಗಳೂರು ನ್ಯಾಷನಲ್ ಇನ್ಸೂರೆನ್ಸ್ ಉದ್ಯೋಗಿ ಮೀರಾ ದಂಪತಿ ಪುತ್ರಿಯಾಗಿರುವ ರಮ್ಯಶ್ರೀ ನಗರದ ಕಾಮತ್ ಆ್ಯಂಡ್ ರಾವ್ ಹಾಗೂ ಎಂಆರ್ಪಿಎಲ್ ಸಂಸ್ಥೆಯ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದರು ಎಂದು ತಿಳಿದುಬಂದಿದೆ.
ಸಿಎ ಇಂಟರ್ ಪರೀಕ್ಷೆಗೆ ತ್ರಿಶಾದಲ್ಲಿ ತರಬೇತಿ ಪಡೆದುಕೊಂಡಿದ್ದ ರಮ್ಯಶ್ರೀ ಅಂತಿಮ ಪರೀಕ್ಷೆಗೆ ಸ್ವಯಂ ಅಧ್ಯಯನ ನಡೆಸಿದ್ದರು.
‘ನನಗೆ ರ್ಯಾಂಕ್ ನನ ನಿರೀಕ್ಷೆ ಇರಲಿಲ್ಲ. ಇದೀಗ ದೇಶದಲ್ಲೇ ದ್ವಿತೀಯ ರ್ಯಾಂಕ್ ಲಭಿಸಿರುವುದರಿಂದ ಸಂತೋಷವಾಗಿದೆ. ದಿನಂಪ್ರತಿ 12 ಗಂಟೆ ಸಿಎ ಪರೀಕ್ಷೆಗೆ ಅಭ್ಯಾಸ ಮಾಡುತ್ತಿದ್ದೆ. ಈ ಹಿಂದೆ ನಾನು ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್, ಪಿಯುಸಿಯಲ್ಲಿ 5ನೇ ರ್ಯಾಂಕ್ ಮತ್ತು ಸಿಎ ಇಂಟರ್ ಪರೀಕ್ಷೆಯಲ್ಲಿ ದೇಶದಲ್ಲಿ 16ನೇ ರ್ಯಾಂಕ್ ಪಡೆದುಕೊಂಡಿದ್ದೆ’ ಎಂದು ರಮ್ಯಶ್ರೀ ತಿಳಿಸಿದ್ದಾರೆ.