ಹಸಿದವರ ತಟ್ಟೆಯಿಂದ ಆಹಾರವನ್ನು ಕಸಿದರೆ?

Update: 2023-01-13 04:20 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಕೊರೋನೋತ್ತರ ದಿನಗಳಲ್ಲಿ ಭಾರತದಲ್ಲಿ ಬಡತನ ಮತ್ತು ಹಸಿವು ಹೆಚ್ಚಿದೆ ಎನ್ನುವುದನ್ನು ವಿಶ್ವಸಂಸ್ಥೆ ಈಗಾಗಲೇ ಗುರುತಿಸಿದೆ. ಅಪೌಷ್ಟಿಕತೆಯ ಕಾರಣದಿಂದ ಮಕ್ಕಳು ರೋಗ ಪೀಡಿತರಾಗುತ್ತಿರುವ ಪ್ರಕರಣಗಳೂ ಇದರ ಜೊತೆ ಜೊತೆಗೆ ಹೆಚ್ಚಿರುವುದು ಕೂಡ ಬೆಳಕಿಗೆ ಬಂದಿದೆ. ಕ್ಷಯ, ಎಚ್‌ಐವಿಯಂತಹ ಪ್ರಕರಣಗಳಲ್ಲೂ ಏರಿಕೆ ಕಂಡು ಬಂದಿದೆ. ನಗರಗಳಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ನರೇಗಾ ಯೋಜನೆಯಲ್ಲಾಗಿರುವ ಕೆಲವು ಹಿನ್ನಡೆಗಳು ಕಾರ್ಮಿಕರನ್ನು ಅತಂತ್ರಕ್ಕೀಡು ಮಾಡಿದೆ. ಇಂತಹ ಸಂದರ್ಭದಲ್ಲಿ ಜನರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಆದ್ಯತೆಯಲ್ಲಿ ಆಹಾರ ವಿತರಿಸುವುದು ಸರಕಾರದ ಹೊಣೆಗಾರಿಕೆಯಾಗಿದೆ. ಲಸಿಕೆ ವಿತರಣೆಯಲ್ಲಿ ತೋರಿಸುವ ಆಸಕ್ತಿಗಿಂತ ದುಪ್ಪಟ್ಟು ಆಸಕ್ತಿಯನ್ನು ಸರಕಾರ ಆಹಾರ ವಿತರಣೆಗೆ ತೋರಿಸಬೇಕು. ವಿಪರ್ಯಾಸವೆಂದರೆ, ಸರಕಾರ ಉಚಿತ ಆಹಾರ ಕೊಡುವ ಯೋಜನೆಯನ್ನು ಮುಂದಿಟ್ಟು, ದೇಶದ ಶೇ. 81 ಕೋಟಿ ಜನರಿಗೆ ಆಹಾರದ ವಿತರಣೆಯ ಪ್ರಮಾಣವನ್ನು ಶೇ.50ರಷ್ಟು ಕಡಿತಗೊಳಿಸಲು ಮುಂದಾಗಿದೆ.

ಕೇಂದ್ರ ಸರಕಾರವು ಇತ್ತೀಚೆಗೆ 2023ರ ಜನವರಿಯಿಂದ ಮೊದಲ್ಗೊಂಡು ಒಂದು ವರ್ಷದವರೆಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ)ಯಡಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಾಗುವುದೆಂದು ಘೋಷಿಸಿದೆ. ಆ ಪ್ರಕಾರ ಒಂದು ವರ್ಷದವರೆಗೆ 3 ಕೆ.ಜಿ. ಅಕ್ಕಿ ಹಾಗೂ 2 ಕೆ.ಜಿ. ಗೋಧಿ ಉಚಿತವಾಗಿ ನೀಡಲಾಗುತ್ತದೆ. ಆದರೆ ಉಚಿತವಾಗಿ ಕೊಡುತ್ತಿರುವುದನ್ನು ಮುನ್ನೆಲೆಗೆ ತಂದಿರುವ ಸರಕಾರ, ಇದೇ ಸಂದರ್ಭದಲ್ಲಿ ಕಡಿತಗೊಳಿಸಿರುವ ಸಬ್ಸಿಡಿ ದರದ ಅಕ್ಕಿ ಗೋಧಿಯ ಪ್ರಮಾಣವನ್ನು ಮಾತ್ರ ಮರೆ ಮಾಚಿದೆ. 2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ)ಯಡಿ, ಎಲ್ಲಾ ಆದ್ಯತಾ ಶ್ರೇಣಿಯ ಪಡಿತರ ಕಾರ್ಡ್‌ದಾರರು ಪ್ರತಿ ವ್ಯಕ್ತಿಗೆ 5 ಕೆ.ಜಿ. ಧಾನ್ಯ ಹಾಗೂ ಅಂತ್ಯೋದಯ ಶ್ರೇಣಿಯ ಪಡಿತರ ಕಾರ್ಡ್‌ದಾರರು 35 ಕೆ.ಜಿ. ಧಾನ್ಯಕ್ಕೆ ಅರ್ಹರಾಗುತ್ತಾರೆ. ಎನ್‌ಎಫ್‌ಎಸ್‌ಎ ಪಡಿತರ ಧಾನ್ಯಗಳ ಮೇಲಿನ ದರಗಳನ್ನು ಅಕ್ಕಿಗೆ ಪ್ರತೀ ಕೆ.ಜಿ.ಗೆ 3 ರೂ. ಹಾಗೂ ಗೋಧಿಗೆ ಪ್ರತೀ ಕೆ.ಜಿ.ಗೆ 2 ರೂ. ಮಿತಿಯನ್ನು ವಿಧಿಸಿದೆ. 2020ರ ಎಪ್ರಿಲ್‌ನಲ್ಲಿ ತಲೆದೋರಿದ ತೀವ್ರ ಆರ್ಥಿಕ ಸಂಕಷ್ಟದ ಪರಿಣಾಮವಾಗಿ ಕೇಂದ್ರ ಸರಕಾರವು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆವೈ)ಯಡಿ ಪ್ರತಿಯೊಬ್ಬ ಪಡಿತರ ಕಾರ್ಡ್‌ದಾರನಿಗೆ ಆತನಿಗೆ ಕಡಿಮೆ ದರಗಳಲ್ಲಿ ನೀಡಲಾಗುವ 5ಕೆ.ಜಿ. ಆಹಾರಧಾನ್ಯದಜೊತೆಗೆ ಹೆಚ್ಚುವರಿಯಾಗಿ 5 ಕೆ.ಜಿ. ಉಚಿತ ಆಹಾರಧಾನ್ಯವನ್ನು ನೀಡುತ್ತ್ತಿತ್ತು. ಹೀಗಾಗಿ ಪಡಿತರ ಕಾರ್ಡ್‌ದಾರರು 2020ರ ಎಪ್ರಿಲ್ ತಿಂಗಳಿನಿಂದೀಚೆಗೆ ಪ್ರತೀ ವ್ಯಕ್ತಿಗೆ 10 ಕೆ.ಜಿ.ಯಂತೆ ಪಡಿತರ ಆಹಾರಧಾನ್ಯಗಳನ್ನು ಪಡೆಯಲು ಅರ್ಹರಾಗಿದ್ದರು.

2023ರ ಜನವರಿ 1ರಿಂದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನಾ (ಪಿಎಂಜಿಕೆಎವೈ) ವನ್ನು ರದ್ದುಪಡಿಸಲಾಗುವುದೆಂದು 2022ರ ಡಿಸೆಂಬರ್ 23ರಂದು ಕೇಂದ್ರ ಸರಕಾರವು ಪ್ರಕಟಿಸಿತ್ತು. ಈ ವರ್ಷದ ಜನವರಿಯಿಂದ ಜನತೆಯ ಪಡಿತರ ಆಹಾರದ ಲಭ್ಯತೆಯ ಹಕ್ಕನ್ನು ಅರ್ಧಕ್ಕಿಳಿಸಲಾಗಿದೆ. ಇದರಿಂದಾಗಿ ಪ್ರತೀ ವ್ಯಕ್ತಿಗೆ ಈವರೆಗೆ ದೊರೆಯುತ್ತಿದ್ದ 10 ಕೆ.ಜಿ. ಆಹಾರಧಾನ್ಯದ ಬದಲಿಗೆ ಕೇವಲ 5 ಕೆ.ಜಿ. ಪಡಿತರ ಆಹಾರವನ್ನು ಪಡೆಯುವ ಅರ್ಹತೆಯನ್ನು ಹೊಂದಿದ್ದಾರೆ. ಎನ್‌ಎಫ್‌ಎಸ್‌ಎ ಪಡಿತರದ ವಿತರಣೆಯನ್ನು ಉಚಿತವೆಂದು ಪ್ರಕಟಿಸಿದ ಪರಿಣಾಮವಾಗಿ ಪ್ರತೀ ವ್ಯಕ್ತಿಯ ಒಟ್ಟು ಉಳಿತಾಯವು ಮಾಸಿಕವಾಗಿ ಕೇವಲ 11 ರೂ.ಗಳಷ್ಟು ಉಳಿತಾಯವಾಗಲಿದೆ (4 ಕೆ.ಜಿ.ಗೋಧಿಗೆ 2 ರೂ. ಹಾಗೂ 1 ಕೆ.ಜಿ. ಅಕ್ಕಿಗೆ 4 ರೂ.). ಇದರ ಜತೆಗೆ ಹೆಚ್ಚುವರಿಯಾಗಿ 5 ಕೆ.ಜಿ. ಧಾನ್ಯ ಖರೀದಿಸಬೇಕಾದರೆ ಆತ ಅಕ್ಕಿಗೆ 150 ರೂ.ಗಳಿಂದ 175 ರೂ.ವರೆಗೆ ಖರ್ಚು ಮಾಡಬೇಕಾಗಿದೆ. ಅದೇ ರೀತಿ ಗೋಧಿಗೆ ಮಾರುಕಟ್ಟೆ ಯಲ್ಲಿ ಪ್ರತೀ ಕೆ.ಜಿ.ಗೆ 30ರಿಂದ 35 ರೂ. ಬೆಲೆ ಇದೆ. ಪ್ರಸಕ್ತ ಪಡಿತರದ ಮೂಲಕ ಲಭ್ಯವಾಗುತ್ತಿರುವಷ್ಟು ಪ್ರಮಾಣದ ಆಹಾರಧಾನ್ಯವನ್ನು ಮಾರುಕಟ್ಟೆಯಲ್ಲಿ ಖರೀದಿಸಬೇಕಾದರೆ ಆತ ತಿಂಗಳಿಗೆ 750ರಿಂದ 900 ರೂ.ವರೆಗೆ ಅನಿವಾರ್ಯವಾಗಿ ಖರ್ಚು ಮಾಡಲೇಬೇಕಾಗುತ್ತದೆ. ಎನ್‌ಎಫ್‌ಎಸ್ ಅಡಿ ದೊರೆಯುತ್ತಿದ್ದ ಪಡಿತರವನ್ನು ಈಗ ಉಚಿತವಾಗಿ ನೀಡುವುದರಿಂದ ಅವರಿಗೆ ಕೇವಲ 55 ರೂ. ಉಳಿತಾಯವಾಗುತ್ತದೆ. ಪಡಿತರ ಆಹಾರ ವಿತರಣೆಯ ಪ್ರಮಾಣವನ್ನು ಅರ್ಧದಷ್ಟಿಳಿಸಿರುವುದರಿಂದ, ಶ್ರೀಸಾಮಾನ್ಯನು ಆಹಾರಧಾನ್ಯಗಳಿಗೆ ಮಾಡುವ ವೆಚ್ಚದಲ್ಲಿ ಆಗಾಧ ಏರಿಕೆಯಾಗುವುದರಿಂದ, ಕೇಂದ್ರ ಸರಕಾರ ತನ್ನ ಉಚಿತ ಯೋಜನೆಯನ್ನು ಹಾಡಿ ಹೊಗಳುವುದರಲ್ಲಿ ಯಾವ ಅರ್ಥವೂ ಇಲ್ಲ.

 ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ, ರಾಷ್ಟ್ರೀಯ ಆಹಾರ ಭದ್ರತೆಯ ಕಾಯ್ದೆಯ ಬಗ್ಗೆ ಚರ್ಚೆಯಾದ ಸಂದರ್ಭದಲ್ಲಿ ಪ್ರತೀ ವ್ಯಕ್ತಿಗೆ ಕೇವಲ 5 ಕೆ.ಜಿ. ಪಡಿತರ ಅಕ್ಕಿಯನ್ನು ನೀಡುವುದು ತೀರಾ ಕಡಿಮೆಯಾಗುತ್ತದೆ ಎಂದು ಪ್ರತಿಪಾದಿಸಿದ್ದರು. ಅಲ್ಲದೆ ಆಹಾರಭದ್ರತಾ ಕಾಯ್ದೆಯು ಓರ್ವ ವ್ಯಕ್ತಿಗೆ ದಿನಕ್ಕೆ ಎರಡು ಊಟವನ್ನು ಖಾತರಿಪಡಿಸುವುದಿಲ್ಲವೆಂಬ ಬಗ್ಗೆ ಗಮನಸೆಳೆಯಲು ನನಗೆ ನೋವಾಗುತ್ತದೆ. ವ್ಯಕ್ತಿಗೆ ಆಹಾರದ ಭದ್ರತೆಯನ್ನು ಈ ಕಾಯ್ದೆಯು ಹೇಗೆ ಖಚಿತಪಡಿಸುತ್ತದೆ ಎಂಬುದನ್ನು ತಿಳಿಯಲು ನಾನು ವಿಫಲನಾಗಿದ್ದೇನೆ. ಮಾಸಿಕವಾಗಿ ಪ್ರತಿ ವ್ಯಕ್ತಿಗೆ 5 ಕೆ.ಜಿ. ಅಕ್ಕಿಯ ಲಭ್ಯತೆಯು ಪ್ರತೀ ದಿನ ಪ್ರತೀ ವ್ಯಕ್ತಿಗೆ ಕೇವಲ 165 ಗ್ರಾಂ ಆಹಾರದ ಪೂರೈಕೆಯನ್ನು ಖಚಿತಪಡಿ ಸುತ್ತದೆ. ಕಾರ್ಮಿಕ ಕೇಂದ್ರಿತ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಕನಿಷ್ಠ 2,500 ಕ್ಯಾಲೊರಿಯ ಅಗತ್ಯವಿರುತ್ತದೆ ಎಂದವರು ಹೇಳಿದ್ದರು.

ಅವರದೇ ಮಾತುಗಳನ್ನು ಗಮನಕ್ಕೆ ತೆಗೆದುಕೊಂಡಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಕನಿಷ್ಠ 10 ಕೆ.ಜಿ. ಪಡಿತರ ಆಹಾರಧಾನ್ಯವನ್ನು ಖಾತರಿಪಡಿಸಬೇಕಾಗಿದೆ. ಅಷ್ಟೇ ಅಲ್ಲದೆ ಜನಸಾಮಾನ್ಯರಿಗೆ ವಿತರಿಸುವ ಪಡಿತರ ಆಹಾರಧಾನ್ಯಗಳಲ್ಲಿ ಸಿರಿಧಾನ್ಯಗಳು ಹಾಗೂ ದ್ವಿದಳ ಧಾನ್ಯಗಳು, ಖಾದ್ಯತೈಲವನ್ನು ಕೂಡಾ ಸೇರ್ಪಡೆಗೊಳಿಸಬೇಕಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರಿಕರಣಗೊಳಿಸಬೇಕಾಗಿದೆ ಹಾಗೂ ಪಡಿತರವನ್ನು ಅಪೇಕ್ಷಿಸುವ ಪ್ರತಿಯೊಬ್ಬರಿಗೂ ಅದು ಲಭ್ಯವಾಗುವುದನ್ನು ಖಾತರಿಪಡಿಸಬೇಕಾಗಿದೆ.

Similar News