ವಿಟ್ಲ: ಜಾತ್ರೆಯಲ್ಲಿ ವ್ಯಾಪಾರಿಗೆ ಹಲ್ಲೆ ಆರೋಪ: 6 ಮಂದಿಯ ವಿರುದ್ದ ದೂರು ದಾಖಲು

Update: 2023-01-19 15:52 GMT

ವಿಟ್ಲ: ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಶ್ರೀ ಪಂಚಲಿಗೇಶ್ವರ ದೇವಸ್ಥಾನದ ಪಕ್ಕದಲ್ಲಿ ಜಾತ್ರೆಯ ಸಂದರ್ಭ ದೇವಸ್ಥಾನದ ಅನುಮತಿಯಂತೆ ಫ್ಯಾನ್ಸಿ ಮಳಿಗೆ ಇಟ್ಟು ವ್ಯಾಪಾರ ಮಾಡಿಕೊಂಡಿದ್ದ ಸುರೇಶ್‌ ದಾಸ್‌ ಎಂಬವರಿಗೆ ಆರು ಮಂದಿ ಆರೋಪಿಗಳು ಹಲ್ಲೆ ನಡೆಸಿದ್ದಾರೆನ್ನಲಾದ ಘಟನೆ ನಡೆದಿದೆ.

ಆರೋಪಿಗಳನ್ನು ಗಣೇಶ್‌ ಕಡಂಬು, ಮಂಜುನಾಥ ಮತ್ತು ಇತರ ನಾಲ್ಕು ಮಂದಿ ಎಂದು ಗುರುತಿಸಲಾಗಿದೆ.

ಸುರೇಶ್‌ ದಾಸ್‌ ಎಂಬವರು ದೇವಸ್ಥಾನದ ಅನುಮತಿಯಂತೆ ಫ್ಯಾನ್ಸಿ ಮಳಿಗೆ ಇಟ್ಟು ವ್ಯಾಪಾರ ಮಾಡಿಕೊಂಡಿದ್ದು, ರಾತ್ರಿ 12.30ಕ್ಕೆ ವ್ಯಾಪಾರ ಮುಗಿಸಿ ಮಳಿಗೆಯನ್ನು ಮುಚ್ಚುವ ಸಮಯದಲ್ಲಿ ಗಣೇಶ್‌ ಕಡಂಬು, ಮಂಜುನಾಥ ಮತ್ತು ಇತರ ನಾಲ್ಕು ಯುವಕರು ಬಂದು ಅಂಗಡಿ ಏಕೆ ಬಂದ್‌ ಮಾಡುತ್ತಿಯಾ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು,  ಹಲ್ಲೆ ನಡೆಸಿರುವುದಾಗಿ ದೂರು ನೀಡಲಾಗಿದೆ.

ಇನ್ನು ಅಂಗಡಿಯಲ್ಲಿದ್ದ ಸುರೇಶ್‌ ದಾಸ್‌ ಅವರ ಪತ್ನಿ ರಾಜೀವಿ ಗಂಡನಿಗೆ ಹೊಡೆಯುವುದನ್ನು ತಡೆಯಲು ಬಂದಾಗ ಅವರ ಮೇಲೂ ಹಲ್ಲೆ ನಡೆಸಿದ್ದಲ್ಲದೇ ಕೊಲೆ ಬೆದರಿಕೆಯನ್ನೂ ಹಾಕಿರುವುದಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ತುಮಕೂರು: ಮನೆಯಲ್ಲಿ ಮೂವರು ಸೋದರಿಯರ ಆತ್ಮಹತ್ಯೆ

Similar News