ಗುರು ರಾಘವೇಂದ್ರ ಬ್ಯಾಂಕ್ ಅಕ್ರಮ ಸಿಬಿಐ ತನಿಖೆಗೆ ಒಪ್ಪಿಸಲಿ: ಯು.ಬಿ.ವೆಂಕಟೇಶ್

Update: 2023-01-21 15:48 GMT

ಬೆಂಗಳೂರು, ಜ.21: ಗುರು ರಾಘವೇಂದ್ರ ಬ್ಯಾಂಕ್ ನಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ನಾವು ಹೋರಾಟ ಮಾಡಿದ್ದಕ್ಕೆ ಸಿಬಿಐ ತನಿಖೆಗೆ ನೀಡುವುದಾಗಿ ಸಹಕಾರ ಸಚಿವರು ಭರವಸೆ ನೀಡಿದ್ದಾರೆ. ಆದರೆ, ನಿನ್ನೆಯ ಸಂಪುಟ ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಆಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ತಿಳಿಸಿದರು.

ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯವಾಗುವುದೆ ಎಂದು ಕಾಯುತ್ತಿದ್ದೇವೆ. ಸರಕಾರ ಸಿಬಿಐ ತನಿಖೆಗೊಪ್ಪಿಸಿದರೆ, ನಾವು ನಮ್ಮ ಬಳಿ ಇರುವ ಸಾಕ್ಷಿ ನೀಡುತ್ತೇವೆ ಎಂದರು.

ಸಚಿವರು ಸದನದಲ್ಲಿ ಬ್ಯಾಂಕ್ ನ ಸಾವಿರ ಕೋಟಿ ರೂ.ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದು, ಸಿಐಡಿ ಬಳಿ ಇದೆ. ಹೂಡಿಕೆದಾರರಿಗೆ ನ್ಯಾಯ ಕೊಡಿಸುತ್ತೇವೆ. ಮುಖ್ಯಮಂತ್ರಿ ಜತೆ ಚರ್ಚೆ ಮಾಡಿ ಸಿಬಿಐ ತನಿಖೆಗೆ ನೀಡುವುದಾಗಿ ಹೇಳಿದ್ದರು. ಈ ಬ್ಯಾಂಕ್ ಮುಚ್ಚಿ 3 ವರ್ಷವಾಗಿದೆ ಇಲ್ಲಿಯವರೆಗೆ ಒಂದು ರೂಪಾಯಿ ವಸೂಲಿ ಆಗಿಲ್ಲ. ಆದರೆ ನಷ್ಟ 1294 ಕೋಟಿ ರೂ.ಆಗಿದೆ ಎಂದು ವೆಂಕಟೇಶ್ ಹೇಳಿದರು. 

ಇಲ್ಲಿ ಮೊದಲ ತಪ್ಪಿತಸ್ಥರು ಆರ್‍ಬಿಐ ನವರು. ಅವರು ಹೇಳಿದಂತೆ ಬ್ಯಾಂಕ್ ನಡೆಯುತ್ತಿದೆ. ಪಿಎಂಸಿ ಬ್ಯಾಂಕ್ 8 ಸಾವಿರ ಕೋಟಿ ರೂ.ನಷ್ಟವಾದರೂ ಸರಕಾರ ಎಷ್ಟು ಬೇಗ ಸಮಸ್ಯೆ ಬಗೆಹರಿಸಿದೆ. ಆದರೆ ಇಲ್ಲಿ 1294 ಕೋಟಿ ರೂ.ನಷ್ಟವಾಗಿದ್ದು, ಸಮಸ್ಯೆ ಬಗೆಹರಿಸಲಿಲ್ಲ. ಇದುವರೆಗೂ ಅನೇಕ ಮಂದಿ ಠೇವಣಿದಾರರು ಸತ್ತಿದ್ದು, ಇನ್ನು ಎಷ್ಟು ಮಂದಿ ಸಾಯುತ್ತಾರೋ ಗೊತ್ತಿಲ್ಲ ಎಂದು ಅವರು ತಿಳಿಸಿದರು. 

ಇಲ್ಲಿ ಬಹುತೇಕ ಬೋಗಸ್ ಲೋನ್ ನೀಡಲಾಗಿದೆ. ಇವರು ಯಾರು ಎಂದು ಸರಕಾರಕ್ಕೂ ಗೊತ್ತಿದೆ. ವರದಕ್ಷಿಣೆ ಕಿರುಕುಳ ದೂರು ಬಂದರೆ ಇಡೀ ಮನೆಯವರನ್ನು ಪೊಲೀಸರು ಕರೆದೊಯ್ಯುತ್ತಾರೆ. ಆದರೆ ಇಲ್ಲಿ ಸಾಲ ಮಾಡಿರುವವರ ಮನೆಯವರು ಹಾಗೂ ಅವರ ಆಸ್ತಿ ಯಾಕೆ ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ? ಸರಿಯಾದ ತನಿಖೆ ಮಾಡಿದರೆ ಸರಕಾರ ಯಾರ ರಕ್ಷಣೆ ಮಾಡುತ್ತಿದೆ ಎಂದು ಗೊತ್ತಾಗುತ್ತದೆ ಎಂದು ವೆಂಕಟೇಶ್ ಹೇಳಿದರು.

ಕೆಪಿಸಿಸಿ ವಕ್ತಾರ ಶಂಕರ್ ಗುಹಾ ಮಾತನಾಡಿ, ನರಸಿಂಹ ಎಂಬುವವರಿಗೆ ಒಂದು ಬಾರಿ 51 ಕೋಟಿ, ಮತ್ತೊಂದು ಬಾರಿ 52 ಕೋಟಿ ಸಾಲ ನೀಡಲಾಗಿದೆ. ಬ್ಯಾಂಕ್ ಖಾತೆಯಿಂದ ಅವರ ಖಾತೆಗೆ ಹೋಗಿರುವ 8-10 ಕೋಟಿ ಮಾತ್ರ. ಎಂ.ಎಸ್.ಕೆ.ಷೆಲ್ಟರ್ಸ್ ಎಂಬ ಸಂಸ್ಥೆಯ ಸುರೇಶ್ ಕುಮಾರ್ ಗೆ 150 ಕೋಟಿ ಸಾಲ ನೀಡಲಾಗಿದ್ದು, ವರ್ಗಾವಣೆ ಆಗಿರುವುದು 10 ಕೋಟಿ ಮಾತ್ರ. ಉಳಿದ ಹಣ ಯಾರು ಬಳಸಿಕೊಂಡಿದ್ದಾರೆ? ಎಂದು ಪ್ರಶ್ನಿಸಿದರು.

ಸಿನೆಮಾ ನಿರ್ದೇಶಕರು 300 ಕೋಟಿ ಸಾಲ ಮಾಡಿದ್ದು, ಬಡ್ಡಿ ಎಲ್ಲ ಬೆಳೆದು 800 ಕೋಟಿ ಆಗಿದೆ. ಬಿಜೆಪಿ ಎಂಎಲ್ಸಿ 12 ಕೋಟಿ ಸಾಲ ಇದೆ. ಇವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಮುಖ್ಯಮಂತ್ರಿ ಆರ್‍ಬಿಐ ಅಥವಾ ಕೇಂದ್ರ ಹಣಕಾಸು ಮಂತ್ರಿ ಬಳಿ ಮಾತನಾಡುವುದಕ್ಕೂ ಹಾಗೂ ಸಂಸದರು ಮಾತನಾಡುವುದಕ್ಕೆ ಬಹಳ ವ್ಯತ್ಯಸವಿದೆ. ಈ ವಿಚಾರದಲ್ಲಿ ಸಂಸದರು ವಿಫಲರಾಗಿದ್ದಾರೆ ಎಂದು ಅವರು ಹೇಳಿದರು. 

ಕೆಪಿಸಿಸಿ ವಕ್ತಾರ ರಮೇಶ್ ಬಾಬು ಮಾತನಾಡಿ, ಬ್ಯಾಂಕ್ ಆಡಳಿತಾಧಿಕಾರಿ ಮಾಹಿತಿ ಪ್ರಕಾರ 2000 ಕೋಟಿ ರೂಪಾಯಿ ಮಾಹಿತಿ ನೀಡಿದ್ದೇವೆ. ಗುರು ರಾಘವೇಂದ್ರ ಬ್ಯಾಂಕ್ ಠೇವಣಿದಾರರ ಜೊತೆ ಚರ್ಚೆ ನಡೆಸಿ ಕ್ಲೇಮ್ ಮಾಡಬೇಕೆ ಹೊರತು ಈ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡಲಾಗುತ್ತಿದೆ. ಹೀಗಾಗಿ ಪಕ್ಷದ ನಾಯಕರಾದ ಯು.ಬಿ.ವೆಂಕಟೇಶ್, ಶಾಸಕಿ ಸೌಮ್ಯಾರೆಡ್ಡಿ ಹಾಗೂ ಶಂಕರ್ ಗುಹಾ ಹೋರಾಟ ಮುಂದುವರಿಸಿದ್ದಾರೆ ಎಂದರು.

Similar News