ಸುಳ್ಯ: ನವ ವಿವಾಹಿತೆ ನಾಪತ್ತೆ

Update: 2023-01-22 15:08 GMT

ಸುಳ್ಯ, ಜ.22: ಔಷಧಿಗೆಂದು ತೆರಳಿದ ಪತ್ನಿ ಕೀರ್ತಿಶ್ರೀ (26) ಮರಳಿ ಮನೆಗೆ ಬಾರದೇ ತಾಯಿ ಮನೆಗೂ ಹೋಗದೇ ಶನಿವಾರ ನಾಪತ್ತೆಯಾದ ಘಟನೆ ನಡೆದಿದೆ.

ಮರ್ಕಂಜ ಗ್ರಾಮದ ರಾಜಶೇಖರ ಎಂಬವರೊಂದಿಗೆ ಕೀರ್ತಿಶ್ರೀ ಅವರ ವಿವಾಹ ಕಳೆದ ತಿಂಗಳು ಡಿ.26 ರಂದು ನಡೆದಿತ್ತು.

ಕೀರ್ತಿ ಶ್ರೀ ಶನಿವಾರ ಎಲಿಮಲೆಯ ಕ್ಲಿನಿಕ್‌ಗೆ ಔಷಧಕ್ಕೆಂದು ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ನಾನೇ ಆಕೆಯನ್ನು ಆಸ್ಪತ್ರೆಗೆ ಹೋಗಲೆಂದು ನನ್ನ ಮನೆಯಿಂದ ನನ್ನ ಜೀಪಿನಲ್ಲಿ ಬೆಳಿಗ್ಗೆ 10 ಗಂಟೆಗೆ ಆಕೆಯನ್ನು ಕರೆದುಕೊಂಡು ಹೋಗಿ ಬಸ್ಸಿನಲ್ಲಿ ಕಳಿಸಿದ್ದೆ. ನಂತರ ಅವಳ ಮೊಬೈಲ್ ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ನಾನು ಆಕೆಯ ತಾಯಿಯ ಮನೆ ದೇವಚಳ್ಳದ ಮಂಜೋಳ್ ಕಜೆಗೆ ಫೋನ್ ಮಾಡಿ ಕೇಳಿದಾಗ ಅಲ್ಲಿಗೂ ಕೂಡ ಆಕೆ ಹೋಗಿಲ್ಲ. ಎಲ್ಲಾ ಕಡೆಯೂ ವಿಚಾರಿಸಿದಾಗ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು  ರಾಜಶೇಖರ್  ಸುಳ್ಯ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News