ಮತದಾನದ ಘನತೆ ಕಾಯುವುದು ಎಲ್ಲರ ಹೊಣೆಯಾಗಬೇಕಿದೆ

ಇಂದು ರಾಷ್ಟ್ರೀಯ ಮತದಾರರ ದಿನ

Update: 2023-01-24 18:42 GMT

ಮತದಾನ ಎಂಬುದು ಪ್ರಜಾಸಮೂಹದ ಗಟ್ಟಿದನಿ. ಪ್ರಜಾತಂತ್ರ ದೇಶದಲ್ಲಿನ ಜನರ ಪ್ರಮುಖ ಹಕ್ಕು ಇದು. ತಮ್ಮನ್ನು ಆಳುವ ಪ್ರತಿನಿಧಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಹಕ್ಕು.

ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಭಾರತದಲ್ಲಿ ಪ್ರತೀವರ್ಷ ಜನವರಿ 25ರಂದು ಆಚರಿಸಲಾಗುತ್ತದೆ. ಭಾರತದ ಚುನಾವಣಾ ಆಯೋಗ ಸ್ಥಾಪನೆಯಾಗಿದ್ದು 1950ರ ಜನವರಿ 25ರಂದು. ಈ ದಿನದ ನೆನಪಿಗಾಗಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.

ಭಾರತದ ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಭಾರತದಲ್ಲಿ ಶಾಸಕಾಂಗದ ಎಲ್ಲಾ ಹಂತಗಳಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿದೆ. 2011ರಲ್ಲಿ ಮೊದಲ ಬಾರಿಗೆ ದೇಶಾದ್ಯಂತ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. 2011ರಲ್ಲಿ ಅಂದಿನ ರಾಷ್ಟ್ರಪತಿ ಪ್ರತಿಭಾ ದೇವಿ ಪಾಟೀಲ್ ಅವರು ಭಾರತದ ಚುನಾವಣಾ ಆಯೋಗದ 61ನೇ ಸಂಸ್ಥಾಪನಾ ದಿನದಂದು ಈ ರಾಷ್ಟ್ರೀಯ ಮತದಾರರ ದಿನಕ್ಕೆ ಚಾಲನೆ ಒದಗಿಸಿದರು. ಗ್ರಾಮೀಣ ಪ್ರದೇಶಗಳಿಂತ ನಗರ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ಮತದಾನವಾಗುತ್ತಿದೆ. ವಿದ್ಯಾವಂತರು ಹೆಚ್ಚಿರುವ ನಗರ ಪ್ರದೇಶದಲ್ಲಿ ಮತದಾನವನ್ನು ನಿರ್ಲಕ್ಷಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಮತದಾನ ಜವಾಬ್ದಾರಿಯ ಅರಿವಿದ್ದೂ ದೂರ ಉಳಿಯುವ ವಿದ್ಯಾವಂತರಿಗೆ ಹಾಗೂ ಅರಿವಿಲ್ಲದೆ ದೂರ ಉಳಿಯುವ ಅವಿದ್ಯಾವಂತರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವುದು, 18 ವರ್ಷ ಮೇಲ್ಪಟ್ಟ ಎಲ್ಲ ಪ್ರಜೆಗಳೂ ಚುನಾವಣಾ ಸಂದರ್ಭದಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕೆಂಬ ಸಂದೇಶ ಸಾರುವುದಕ್ಕಾಗಿ ಹಾಗೂ ಅವರಲ್ಲಿ ಮತದಾನದ ಹಕ್ಕು ಪಡೆಯುವಂತೆ ಸ್ಫೂರ್ತಿ ನೀಡುವುದು, ಆ ಹಕ್ಕಿನ ಕುರಿತು ಜಾಗೃತಿ ಮೂಡಿಸುವುದು ರಾಷ್ಟ್ರೀಯ ಮತದಾರರ ದಿನದ ಉದ್ದೇಶವಾಗಿದೆ.
ಹೊಸ ಮತದಾರರನ್ನು ಪ್ರೋತ್ಸಾಹಿಸುವುದು ಕೂಡ ಈ ದಿನದ ಆಚರಣೆಯ ಮತ್ತೊಂದು ಉದ್ದೇಶ. ಪ್ರಜಾಪ್ರಭುತ್ವದ ಕೇಂದ್ರ ಸ್ತಂಭವೇ ಮತದಾನವಾಗಿದೆ. ಭಾರತವು 1951ರಲ್ಲಿ ತನ್ನ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಮತದಾನಕ್ಕೆ ನಿಗದಿತ ವಯೋಮಾನದ ತತ್ವವನ್ನು ಅಳವಡಿಸಿಕೊಂಡಿದೆ.
ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಶಾಸಕಾಂಗ ಸಂಸ್ಥೆಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ನಾಗರಿಕರು ಪ್ರತೀ ಐದು ವರ್ಷಗಳಿಗೊಮ್ಮೆ ಮತ ಚಲಾಯಿಸುತ್ತಾರೆ. ಒಂದೊಂದು ಮತಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಜನರು ತಮ್ಮ ಭವಿಷ್ಯದಲ್ಲಿ ತಮ್ಮನ್ನು ಆಳುವ ಆಡಳಿತವನ್ನು ಈ ಮತದ ಮೂಲಕ ಆಯ್ಕೆ ಮಾಡುತ್ತಾರೆ. ಮತದಾನವು ಒಂದು ದೇಶದ ಸರಕಾರವನ್ನು ರಚಿಸಲು ಸಹಾಯ ಮಾಡುವ ಮೂಲಭೂತ ಪ್ರಕ್ರಿಯೆಯಾಗಿದೆ. ಮತದಾನದ ಹಕ್ಕು ಸಮಸ್ಯೆಗಳ ಬಗ್ಗೆ ಸರಕಾರವನ್ನು ಪ್ರಶ್ನಿಸುವ ಜನರ ಹಕ್ಕುಗಳಿಗೆ ಇನ್ನಷ್ಟು ಬಲತುಂಬುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾನವು ಪ್ರಮುಖವಾಗಿದೆ.
‘‘ಬುಲೆಟ್‌ಗಿಂತ ಮತಪತ್ರ ಬಲಿಷ್ಠವಾಗಿದೆ’’ ಎಂದು ಅಬ್ರಹಾಂ ಲಿಂಕನ್ ಹೇಳುತ್ತಾರೆ. ‘‘ಬದಲಾವಣೆಯನ್ನು ಬಯಸುವುದು ಮಾತ್ರವಲ್ಲ, ನೀವು ಹೋಗಿ ಮತ ಚಲಾಯಿಸುವ ಮೂಲಕ ಬದಲಾವಣೆಯನ್ನು ಮಾಡಬೇಕು’’ ಎಂದು ಟೇಲರ್ ಸ್ವಿಫ್ಟ್ ಹೇಳಿದ್ದಾರೆ. ‘‘ನಿಮ್ಮ ಮತದಾನದ ಹಕ್ಕಿಗಾಗಿ ಯಾರೋ ಹೋರಾಟ ನಡೆಸಿದ್ದಾರೆ. ಅದನ್ನು ಬಳಸಿ’’ ಎಂದು ಸುಸಾನ್ ಬಿ. ಆಂಥೋನಿ ತಿಳಿಸಿದ್ದಾರೆ. ‘‘ಮುಖ್ಯವಲ್ಲದ ಮತ ಎಂಬುದೇ ಇಲ್ಲ. ಎಲ್ಲಾ ಮತವು ಪ್ರಮುಖವೇ ಆಗಿದೆ’’ ಎಂದು ಬರಾಕ್ ಒಬಾಮಾ ಹೇಳಿದ್ದಾರೆ.
ಭಾರತದಲ್ಲಿ ಸಂವಿಧಾನವು ಜನರಿಗೆ ಕೊಟ್ಟಿರುವ ಅತ್ಯಂತ ಶಕ್ತಿಶಾಲಿ ಹಕ್ಕು ಮತದಾನ. ರಾಜರ ಕಾಲದಲ್ಲಿ, ಬ್ರಿಟಿಷರ ಕಾಲದಲ್ಲಿ ಇದ್ದಿರದ ಅವಕಾಶವೊಂದು ಸ್ವತಂತ್ರ ಭಾರತದಲ್ಲಿ ಜನರ ಪಾಲಿಗೆ ಒದಗಿಬಂತು. ಜನತಂತ್ರ ವ್ಯವಸ್ಥೆಯಿಂದಾಗಿ ಪ್ರತಿಯೊಬ್ಬ ಪ್ರಜೆಗೂ ಬೆಲೆ ಬಂತು.
ಮತದಾನದ ಹಕ್ಕು ಕೂಡ ದುರುಪಯೋಗಕ್ಕೆ ಒಳಗಾಗುವುದು ಎಲ್ಲವೂ ಭ್ರಷ್ಟವಾಗಿರುವ ಇವತ್ತಿನ ವ್ಯವಸ್ಥೆಯಲ್ಲಿ ಸಾಮಾನ್ಯವಾಗತೊಡಗಿದೆ. ಇದು ಅತಿ ವಿಷಾದದ ಸಂಗತಿ. ಚುನಾವಣೆಯ ಹೊತ್ತಿನಲ್ಲಿ ಹಣ, ಹೆಂಡದಂಥ ಆಮಿಷಗಳು ಮತದಾರರನ್ನು ಭ್ರಷ್ಟಗೊಳಿಸುತ್ತಿವೆ. ಮತದಾನವು ಹೀಗೆ ಯಾರದೋ ಸ್ವಾರ್ಥದ ಪ್ರಭಾವಕ್ಕೊಳಗಾಗುವುದು ತಂದಿಡುತ್ತಿರುವ ಪರಿಣಾಮಗಳೂ ಆಘಾತಕಾರಿ. ಹೇಗಾದರೂ ಗೆಲ್ಲಬೇಕೆಂಬ ರಾಜಕೀಯ ಪಕ್ಷಗಳ ಹುನ್ನಾರ ಕೂಡ ಮತದಾನವೆಂಬ ಅತಿ ಅಮೂಲ್ಯ ಪರಿಕಲ್ಪನೆಯನ್ನು ವ್ಯಾಪಾರದ ಮಟ್ಟಕ್ಕೆ ತಂದು ನಿಲ್ಲಿಸಿರುವ ದಿನಗಳನ್ನು ಕಾಣುತ್ತಿದ್ದೇವೆ. ನೀವು ನಮಗೆ ಮತ ಹಾಕಿಲ್ಲ. ಹಾಗಾಗಿ ನಿಮಗೆ ಸೌಲಭ್ಯಗಳನ್ನು ಒದಗಿಸಲಾರೆವು. ಯಾರಿಗೆ ಮತ ಹಾಕಿದ್ದೀರೊ ಅವರ ಬಳಿ ಹೋಗಿ ಕೇಳಿಕೊಳ್ಳಿ ಎಂದು ಜನರನ್ನು ರಾಜಕೀಯ ಪಕ್ಷಗಳು ತಿವಿಯುವಂತೆ ಮಾತನಾಡುತ್ತಿರುವ ಸಂದರ್ಭಗಳೂ ನಮ್ಮೆದುರಿಗಿವೆ. ಕೋವಿಡ್ ಸಾಂಕ್ರಾಮಿಕದಂಥ ಹೊತ್ತಿನ ಅಗತ್ಯ ಜವಾಬ್ದಾರಿಗಳನ್ನು ಸರಕಾರ ತನ್ನ ಲಾಭಕ್ಕೆ ಬಳಸಿಕೊಳ್ಳಲು ಯತ್ನಿಸಿದ್ದನ್ನು ಕೂಡ ನೋಡಬೇಕಾಗಿ ಬಂದಿತೆಂಬುದು ವಿಷಾದನೀಯ.
ಮತದಾನವೆಂಬುದು ಇಂಥ ಎಲ್ಲ ಕ್ಷುಲ್ಲಕಗಳನ್ನು ಮೀರಿದ್ದಾಗಿದೆ. ಅದರ ಘನತೆಯನ್ನು ಪ್ರತಿಯೊಬ್ಬ ಪ್ರಜೆಯೂ ಕಾಪಾಡಿಕೊಳ್ಳಬೇಕಾಗಿದೆ. ಮಾತ್ರವಲ್ಲ, ಅದನ್ನು ಗೌರವಿಸುವುದು ಯಾವುದೇ ರಾಜಕೀಯ ಪಕ್ಷಗಳ ಜವಾಬ್ದಾರಿಯೂ ಆಗಿದೆ.

Similar News