ಉಳ್ಳಾಲ ಠಾಣೆ ಇನ್ ಸ್ಪೆಕ್ಟರ್, ಎಸ್ಸೈ ವಿರುದ್ಧ ಭ್ರಷ್ಟಾಚಾರ ಆರೋಪ: ತನಿಖಾ ವರದಿಗೆ ಲೋಕಾಯುಕ್ತ ಸೂಚನೆ

ಫೆ.14ರೊಳಗೆ ವರದಿ ಸಲ್ಲಿಸಲು ಮಂಗಳೂರು ಪೊಲೀಸ್ ಕಮಿಷನರ್ ರಿಗೆ ನೋಟಿಸ್

Update: 2023-01-28 07:49 GMT

ಮಂಗಳೂರು, ಜ.28: ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿರುವುದಾಗಿ ಆರೋಪಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಗೆ ಲೋಕಾಯುಕ್ತ ನೋಟಿಸ್ ಜಾರಿಗೊಳಿಸಿದೆ. ಫೆ.14ರೊಳಗೆ ತನಿಖಾ ವರದಿ ಹಾಗೂ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿದೆ.

ಉಳ್ಳಾಲ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಸಂದೀಪ್, ಎಸ್ಸೈ ಪ್ರದೀಪ್ ರಿಂದ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಉಳ್ಳಾಲದ ಮುಹಮ್ಮದ್ ಕಬೀರ್ ಎಂಬವರು ರಾಜ್ಯ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು.

ಈ ಇಬ್ಬರು ಪೊಲೀಸ್ ಅಧಿಕಾರಿಗಳು ಯಾವುದೇ ಪ್ರಕರಣಗಳಿಗೆ ಸಂಬಂಧಿಸಿ ಉಳ್ಳಾಲ ಠಾಣೆಗೆ ಬರುವವರಿಂದ ಹಣ ವಸೂಲು ಮಾಡಲು ಹಮೀದ್ ಎಂಬ ಬ್ರೋಕರ್ ನ್ನು ಇಟ್ಟುಕೊಂಡಿದ್ದಾರೆ. ಗಾಂಜಾ ಮಾಫಿಯ, ಮರಳು ಮಾಫಿಯ, ಹೊಟೇಲ್ ಮಾಲಕರುಗಳಿಂದ ಹಣಕ್ಕೆ ಬೇಡಿಕೆಯಿಡುತ್ತಿದ್ದಾರೆ. ಇಬ್ಬರು ಅಧಿಕಾರಿಗಳು ಉಳ್ಳಾಲಕ್ಕೆ ಬಂದ ಬಳಿಕ ಕೋಟ್ಯಂತರ ರೂ. ಸಂಪಾದನೆ ಬಗ್ಗೆ ಮಾಡಿದ್ದಾರೆ ಎಂದು ಕಬೀರ್ ದೂರಿನಲ್ಲಿ ಆರೋಪಿಸಿದ್ದಾರೆ.

ಇತ್ತೀಚೆಗೆ ಮಂಜೇಶ್ವರದ ಹೊಸಂಗಡಿಯಲ್ಲಿ ಜ್ಯುವೆಲ್ಲರಿಯೊಂದರಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿಗಳ ಬಂಧನದ ವೇಳೆ ಜಪ್ತಿ ಮಾಡಿದ 14 ಕೆಜಿ ಬೆಳ್ಳಿ, ಬೆಲೆಬಾಳುವ ವಾಚ್ ಹಾಗೂ ಲಕ್ಷಾಂತರ ರೂ. ನಗದನ್ನು ನ್ಯಾಯಾಲಯಕ್ಕೆ ಒಪ್ಪಿಸದೆ ಉಳ್ಳಾಲ ಠಾಣೆಯ ಇನ್ ಸ್ಪೆಕ್ಟರ್ ಸಂದೀಪ್ ಮತ್ತು ಎಸ್ಸೈ ಪ್ರದೀಪ್ ತಾವೇ ಹಂಚಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ವಿರುದ್ಧವೂ ಭ್ರಷ್ಟಾಚಾರದ ಬಗ್ಗೆ ಕಬೀರ್ ದೂರು ದಾಖಲಿಸಿದ್ದಾರೆ. ಶಶಿಕುಮಾರ್ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಬಳಿಕ ಕಮಿಷನರೇಟ್ ವ್ಯಾಪ್ತಿಯ ಠಾಣೆಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಪೊಲೀಸ್ ಆಯುಕ್ತರ ಬೆಂಬಲದಿಂದಲೇ ಇದು ನಡೆಯುತ್ತಿದೆ ಎಂದು ಕಬೀರ್ ಆಪಾದಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಮತ್ತು ಉಳ್ಳಾಲ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್, ಎಸ್ಸೈ ವಿರುದ್ಧ ಅಧಿಕಾರ ದುರುಪಯೋಗ ಮತ್ತು ಲಂಚದ ಆಪಾದನೆ ಕೇಳಿಬಂದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಕಲಂ.9 ರಡಿಯಲ್ಲಿ ತನಿಖೆ ನಡೆಸಲುದ್ದೇಶಿಸಿದ್ದಾರೆ. ಫೆ.14ರ ಒಳಗೆ  ಸೂಕ್ತ ದಾಖಲೆಗಳೊಂದಿಗೆ ಹಾಜರಾಗುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಗೆ ಜಾರಿ ಮಾಡಿರುವ ನೋಟೀಸ್ ನಲ್ಲಿ ತಿಳಿಸಲಾಗಿದೆ.


ವಿಚಾರಣೆ ನಡೆಯುತ್ತಿದೆ: ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ದೂರಿಗೆ ಸಂಬಂಧಿಸಿ ಲೋಕಾಯುಕ್ತರ ಸೂಚನೆಯ ಹಿನ್ನೆಲೆಯ ದಕ್ಷಿಣ ಎಸಿಪಿ ಅವರಿಂದ ತನಿಖಾ ವರದಿ ಕೇಳಲಾಗಿದೆ. ವಿಚಾರಣಾ ಹಂತದಲ್ಲಿದೆ ಎಂದು ಹೇಳಿದ್ದಾರೆ.

ತನಗೆ ಯಾವುದೇ ನೋಟಿಸ್ ಬಂದಿಲ್ಲ. ಬದಲಾಗಿ ದೂರಿನ ಬಗ್ಗೆ ಪರಿಶೀಲನೆ ಮಾಡಲು ಸೂಚಿಸಲಾಗಿದೆ. ಕೆಲವು ಸುದ್ದಿ ಮಾಧ್ಯಮಗಳಲ್ಲಿ ತನಗೆ ನೋಟಿಸ್ ಜಾರಿಯಾಗಿದೆ ಎಂದು ತಪ್ಪಾಗಿ ಪ್ರಕಟವಾಗಿವೆ ಮತ್ತು ಪ್ರಸಾರವಾಗಿವೆ. ಆದರೆ ತನಗೆ ಯಾವುದೇ ನೋಟಿಸ್ ಜಾರಿಯಾಗಿಲ್ಲ ಎಂದು ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.

Similar News