ಉಳ್ಳಾಲ| ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು; ಮತ್ತೋರ್ವ ಗಾಯಾಳು ಮೃತ್ಯು

Update: 2023-01-30 14:41 GMT

ಉಳ್ಳಾಲ: ಇಲ್ಲಿನ ಠಾಣಾ ವ್ಯಾಪ್ತಿಯ ಅಡ್ಕ ಬಳಿ ರವಿವಾರ ರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಮತ್ತೋರ್ವ ಗಾಯಾಳು ಮೃತಪಟ್ಟಿದ್ದು, ಮೃತರ ಸಂಖ್ಯೆ ಎರಡಕ್ಕೇರಿದೆ. 

ಕಾಸರಗೋಡು ಜಿಲ್ಲೆ ಕುಂಜತ್ತೂರು  ನಿವಾಸಿ ಅಬ್ದುಲ್ ರಿಫಾಯಿ(24)  ಮತ್ತು ಉಪ್ಪಳ ಹಿದಾಯತ್ ನಗರ ನಿವಾಸಿ ಬಶರ್ ಅಹ್ಮದ್(22) ಮೃತಪಟ್ಟವರು.

ರವಿವಾರ ರಾತ್ರಿ ಕಾಸರಗೋಡು ಕಡೆ ಸಂಚರಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಅಡ್ಕ ಬಳಿ ಡಿವೈಡರ್  ಏರಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕುಂಜತ್ತೂರು ನಿವಾಸಿ ಅಬ್ದುಲ್ ರಿಫಾಯಿ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಪ್ಪಳ ಹಿದಾಯತ್ ನಗರ ನಿವಾಸಿ ಬಶರ್ ಅಹ್ಮದ್(22) ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.

ವಿದ್ಯಾರ್ಥಿನಿಯರಾದ ಕೇರಳ ಕಣ್ಣೂರು ನಿವಾಸಿ ಫಾತಿಮ ಹಾಗೂ ರೇವತಿ ಎಂಬವರಿಗೆ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಲ್ವರಿದ್ದ ಕಾರು ಮಂಗಳೂರಿಂದ ಕಾಸರಗೋಡು ಕಡೆ ತೆರಳುತ್ತಿದ್ದ ವೇಳೆ ಅಡ್ಕ ಬಳಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ.

ಗಲ್ಫ್ ನಲ್ಲಿ ಉದ್ಯೋಗಿಯಾಗಿದ್ದ ಅಬ್ದುಲ್ ರಿಫಾಯಿ ಶನಿವಾರ ಮನೆಗೆ ಮರಳಿದ್ದರು. ಬಶರ್ ಅಹ್ಮದ್ , ಫಾತಿಮಾ ಮತ್ತು ರೇವತಿ ಮೂವರು ನಗರದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳಾಗಿದ್ದರು ಎಂದು ತಿಳಿದು ಬಂದಿದೆ

ಅಪಘಾತ ನಡೆದ ಸ್ಥಳಕ್ಕೆ ಸಂಚಾರಿ ಪೊಲೀಸರು ತಡವಾಗಿ ಆಗಮಿಸಿದ್ದರು ಎಂದು ಆರೋಪಿಸಿ ಸಾರ್ವಜನಿಕರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನಟ ಅರವಿಂದ ಬೋಳಾರ್‌ಗೆ ಗಾಯ

Similar News