ಮಂಗಳೂರು: ಹೊರಗುತ್ತಿಗೆ ನೌಕರರ ಪ್ರತಿಭಟನೆ ಅಂತ್ಯ

Update: 2023-02-02 14:42 GMT

ಮಂಗಳೂರು: ಕರ್ನಾಟಕ ರಾಜ್ಯ ಹೊರಗುತ್ತಿಗೆ ನೌಕರರ ಸಂಘ ಹಾಗೂ ಮಂಗಳೂರು ಸಫಾಯಿ ಕರ್ಮಚಾರಿಗಳ ಸಂಘ (ರಿ)ದ ಆಶ್ರಯದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹೊರಗುತ್ತಿಗೆ ನೌಕರರು ನಗರದ ಹಂಪನಕಟ್ಟೆಯ ಬಳಿಯಿರುವ ಮಂಗಳೂರು ಮಿನಿ ಸೌಧದ ಮುಂದೆ ನಡೆಸುತ್ತಿರುವ ಪ್ರತಿಭಟನೆ ಗುರುವಾರ ಅಂತ್ಯಗೊಂಡಿವೆ.

ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆಯಲ್ಲಿ ದುಡಿಯುತ್ತಿರುವ ವಾಹನ ಚಾಲಕರು, ನೀರು ಸರಬರಾಜು ಕಾರ್ಮಿಕರು, ಡಾಟಾ ಎಂಟ್ರಿ ಆಪರೇಟರ್, ಒಳ ಚರಂಡಿ ಕಾರ್ಮಿಕರು ಶೀಘ್ರವೇ ನೇರ ಪಾವತಿ  ಮತ್ತು ನೇರ  ನೇಮಕಾತಿಗೊಳಿಸುವಂತೆ ಒತ್ತಾಯಿಸಿ ಹಾಗೂ ಕನಿಷ್ಠ ವೇತನ, ಬೆಳಗ್ಗಿನ ಉಪಹಾರ, ಸಂಕಷ್ಟ ಭತ್ತೆ, ವಿಶೇಷ ರಜಾ ಸೌಲಭ್ಯ, ಬಟ್ಟೆ ಬದಲಿಸಲು ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಬುಧವಾರ ಆರಂಭಗೊಂಡ ಧರಣಿಯು ಗುರುವಾರವೂ ಮುಂದುವರಿದಿತ್ತು.

ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಯ ಜೊತೆ ಸಂಘದ ರಾಜ್ಯ ಮುಖಂಡರು ಚರ್ಚೆ ನಡೆಸಿದ್ದು, ಸಂಜೆಯ ವೇಳೆಗೆ ರಾಜ್ಯ ಮುಖಂಡರ ಸೂಚನೆಯ ಮೇರೆಗೆ ಧರಣಿಯನ್ನು ಹಿಂದಕ್ಕೆ ಪಡೆಯಲಾಯಿತು ಎಂದು ಪ್ರತಿಭಟನೆ ನಿರತ ಸಂಘಟನೆಗಳ ಜಿಲ್ಲಾ ಮುಖಂಡರು ತಿಳಿಸಿದ್ದಾರೆ.

ಹೊರಗುತ್ತಿಗೆ ನೌಕರರ ಸಂಘದ ಕರಾವಳಿ ವಿಭಾಗದ ಸಂಚಾಲಕ ಅಣ್ಣಪ್ಪ ಕಾರೆಕಾಡು, ಮಂಗಳೂರು ಸಫಾಯಿ ಕರ್ಮಚಾರಿಗಳ ಸಂಘ (ರಿ)ದ ಅಧ್ಯಕ್ಷ ನಾರಾಯಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Similar News