ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಗೆ ದೇವದಾರಿಯಲ್ಲಿ ಗಣಿಗಾರಿಕೆಗೆ ಅನುಮತಿ: ಟಿ.ಸಾಮಿನಾಥನ್

Update: 2023-02-03 09:39 GMT

ಮಂಗಳೂರು, ಫೆ.3: ಕುದುರೆಮುಖ ಕಬ್ಬಿಣದ ಅದಿರು (ಕೆಐಒಸಿಎಲ್ )ಕಂಪನಿಗೆ ದೇವದಾರಿ ಕಬ್ಬಿಣದ ಅದಿರು ಪ್ರದೇಶದಲ್ಲಿ, ಕಬ್ಬಿಣದ ಅದಿರು ಮತ್ತು ಮ್ಯಾಂಗನೀಸ್ ಅದಿರಿನ ಗಣಿಗಾರಿಕೆ ಮಾಡಲು ಕರ್ನಾಟಕದ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಗಣಿಗಾರಿಕೆಗೆ ಅನುಮತಿ ದೊರೆತಿದೆ ಎಂದು ಕೆಐಒಸಿಎಲ್ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಟಿ.ಸಾಮಿನಾಥನ್ ತಿಳಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, 388 ಹೆಕ್ಟೇರ್ ಪ್ರದೇಶದಲ್ಲಿ 50 ವರ್ಷಗಳ ಅವಧಿಗೆ, ಕರ್ನಾಟಕದ ಸರ್ಕಾರದ ಗಣಿ ಮತ್ತು ಭೂವಿಜ್ಞಾನದ ನಿರ್ದೇಶಕರೊಂದಿಗೆ 02.01.2023ರಂದು ಗಣಿಗಾರಿಕೆ ಗುತ್ತಿಗೆಗೆ  ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

( ಕಂಪೆನಿಯು ಜ.18,2023ರಂದು ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರೂ 329,17 ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕ ಜಮಾಯಿಸಿ, ದೇವದಾರಿ ಕಬ್ಬಿಣದ ಅದಿರು ಗಣಿಗಾರಿಕೆ ಗುತ್ತಿಗೆ ನೋಂದಾಯಿಸಿದೆ) ಎಂದು ಅವರು ಮಾಹಿತಿ ನೀಡಿದರು.

ದೇವದಾರಿ ಗಣಿ ಕಬ್ಬಿಣದ ಅದಿರು ಮತ್ತು ಮ್ಯಾಂಗನೀಸ್ ಅದಿರು ಗಣಿಗಾರಿಕೆ ಯೋಜನೆಗೆ 470 ಹೆಕ್ಟೇರ್ ಪ್ರದೇಶದಲ್ಲಿ 388 ಹೆಕ್ಟೇರ್ ಅರಣ್ಯಭೂಮಿಯನ್ನು ತೆರವುಗೊಳಿಸಲು ಅಂತಿಮ ಹಂತ-IIರ ಅರಣ್ಯ ತೆರವು ಅನುಮೋದನೆಯನ್ನು ನೀಡಿದೆ. ಸ್ವಾಮಿಮಲೈ (SM) ಬ್ಲಾಕ್ ಫಾರೆಸ್ಟ್, ಸಂಡೂರ್ ತಾಲೂಕು, ಬಳ್ಳಾರಿ ಜಿಲ್ಲೆಯಲ್ಲಿ, 13.5761 ಹೆಕ್ಟೇರ್ ಜೊತೆಗೆ ಕನ್ವೇಯರ್ ಕಾರಿಡಾರ್, ಅಪ್ರೋಚ್ ರೋಡ್, ಪವರ್ ಟ್ರಾನ್ಸ್‌ ಮಿಷನ್ ಲೈನ್/ವಾಟರ್ ಲೈನ್, ಒಟ್ಟು 401.5761 ಹೆಕ್ಟೇರ್‌ ನೀಡಿದೆ ಎಂದು ಅವರು ಮಾಹಿತಿ ನೀಡಿದರು.

2022-23ರ ಹಣಕಾಸು ವರ್ಷದಲ್ಲಿ ಕಂಪನಿಯ ಕಾರ್ಯಕ್ಷಮತೆ ಕಬ್ಬಿಣದ ಉಂಡೆಗಳ ಮೇಲೆ (22.05.2022) ಭಾರತದ ಸರ್ಕಾರ 45% ರಫ್ತು ಸುಂಕವನ್ನು ವಿಧಿಸುವುದರೊಂದಿಗೆ ಕಂಪೆನಿಯ ಉತ್ಪಾದನಾಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. ಇದು ಕಂಪೆನಿಯ ಆರ್ಥಿಕ ಲಾಭದ ಮೇಲೆ ಪರಿಣಾಮ ಬೀರಿತ್ತು. ಭಾರತದ ಸರ್ಕಾರವು 19.11.2022ರಿಂದ ಕಬ್ಬಿಣದ ಅದಿರು ಉಂಡಗಳ ಮೇಲಿನ 45% ರಫ್ತು ಸುಂಕವನ್ನು ಹಿಂಪಡೆಯುವುದರೊಂದಿಗೆ ಕಂಪೆನಿಯ ಬೆಳವಣಿಗೆ ಮತ್ತು ಪ್ರಗತಿಯಲ್ಲಿ ಗಣನೀಯವಾಗಿ ಸಹಾಯ ಮಾಡಿತು. ಕಂಪೆನಿಯು ರಫ್ತು ಆಧಾರಿತ ಘಟಕವಾಗಿರುವುದರಿಂದ ಇದು ಕಂಪೆನಿಯ ಮೇಲೆ ಹೆಚ್ಚು ಪರಿಣಾಮ ಬೀರಿತು ಮತ್ತು ಶಂಪನಿಯ ಉತ್ಪಾದನಾ ಚಟುವಟಿಕೆಗಳನ್ನು ಕಾರ್ಯಸಾಧ್ಯವಲ್ಲದ ದೃಷ್ಟಿಯಿಂದ ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. ಸಪ್ಟೆಂಬರ್ 30, 2022ಕ್ಕೆ ಕೊನೆಗೊಂಡ ಅರ್ಧ ವರ್ಷದಲ್ಲಿ ಕಂಪೆನಿಯು ರೂ. 146 ಕೋಟಿಯ ನಷ್ಟವನ್ನು ಅನುಭವಿಸಿದೆ. ರಫ್ತು ಸುಂಕವನ್ನುತೆಗೆದುಹಾಕಿದ ನಂತರ, ಕಂಪನಿಯು ಸವಾಲುಗಳನ್ನು ಜಯಿಸಲು ಶ್ರಮಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಕೆಐಒಸಿಎಲ್ ಖಾಸಗಿ ಗಣಿ ಕಂಪನಿಗಳಿಗೆ ಖನಿಜ ಪರಿಶೋಧನೆ ಸೇವೆಗಳನ್ನು ವಿಸ್ತರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಹಾಗೂ ಕರ್ನಾಟಕ ರಾಜ್ಯ, ಕೇಂದ್ರದ ಖಾಸಗಿ ಉದ್ಯಮಗಳಿಂದ ಬೇಸ್ ಮೆಟಲ್ ಮತ್ತು ಹೆಚ್ಚುವರಿ ಖನಿಜ ಪರಿಶೋಧನೆ ಯೋಜನೆಗಳನ್ನು ಪಡೆಯಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಊದು ಕುಲುಮೆ ಘಟಕದ ವಿವರ: ಮಂಗಳೂರಿನ( ಬ್ಲಾಸ್ಟ್ ಫರ್ನೇಸ್) ಊದು ಕುಲುಮೆ ಘಟಕದಲ್ಲಿ 1.8 ಲಕ್ಷ ಟಿಪಿಎ ಸಾಮರ್ಥ್ಯದ ಕೋಕ್ ಓವನ್ ಪ್ಲಾಂಟ್ ನಿರ್ಮಾಣಕ್ಕೆ ಸಂಬಂಧಿಸಿದ ಚಟುವಟಿಕೆಗಳು ಪ್ರಗತಿಯಲ್ಲಿದೆ. ಸಿ.ಎಸ್.ಆರ್ ಚಟುವಟಿಕೆಗಳು 2022-23 ಸ್ಥಳೀಯ ಅಧಿಕಾರಿಗಳ ಸಹಯೋಗದೊಂದಿಗೆ ಸಿಎಸ್‌ಆರ್ ಎಲ್ಲಾ ಯೋಜನೆಗಳು ಮತ್ತು ಚಟುವಟಿಕೆಗಳ ಕಾರ್ಯಗತಗೊಳಿಸುವಿಕೆಯು ಸುಗಮವಾಗಿ ನಡೆಯುತ್ತಿದೆ. ಒಟ್ಟು ಬಜೆಟ್‌ನಲ್ಲಿ, ಕಂಪನಿಯು ದಕ್ಷಿಣ ಕನ್ನಡ ಜಿಲ್ಲೆಯ ಪ್ರದೇಶಗಳಲ್ಲಿ ವಿವಿಧ ಯೋಜನೆಗಳು ಚಟುವಟಿಕೆಗಳಿಗಾಗಿ 2.22 ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು ಎಂದು ಸಾಮಿನಾಥನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಐಒಸಿಎಲ್ ನಿರ್ದೇಶಕ (ಹಣಕಾಸು)ಬಿನಯ್ ಕೃಷ್ಣ ಮಹಾಪಾತ್ರ, ಹಿರಿಯ ವ್ಯವಸ್ಥಾಪಕ (ಎಚ್.ಆರ್) ಮುರುಗೇಶ್ ಉಪಸ್ಥಿತರಿದ್ದರು.

Similar News