ನ್ಯಾಯಾಧೀಶರಿಗೆ ಆತ್ಮಸಾಕ್ಷಿಯೇ ಕಾವಲುಗಾರ, ಪ್ರಮಾಣ ವಚನವೇ ಧರ್ಮ: ನ್ಯಾ.ಶಿವರಾಜ್ ವಿ.ಪಾಟೀಲ್

''ಜನರ ವಿಶ್ವಾಸವೇ ನ್ಯಾಯಾಂಗದ ನಿಜವಾದ ಶಕ್ತಿ''

Update: 2023-02-03 16:27 GMT

ಬೆಂಗಳೂರು, ಫೆ.3: ನ್ಯಾಯಾಧೀಶರಿಗೆ ಆತ್ಮಸಾಕ್ಷಿಯೇ ಕಾವಲುಗಾರ, ಪ್ರಮಾಣವಚನವೇ ಧರ್ಮ. ಈ ಎರಡೂ ಅಂಶಗಳನ್ನು ನಡೆಸಿಕೊಂಡರೆ ಆತನಿಂದ ಉತ್ತಮ ವ್ಯವಸ್ಥೆ ನಿರ್ಮಾಣವಾಗಿ ಜನರಲ್ಲಿ ಭರವಸೆ ಮೂಡುತ್ತದೆ ಎಂದು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್ ತಿಳಿಸಿದ್ದಾರೆ.

ಶುಕ್ರವಾರ ರಾಜ್ಯ ಸರಕಾರಿ ನೌಕರರ ಸಂಘದ ಕಟ್ಟಡದ ಸಭಾಂಗಣದಲ್ಲಿ ನ್ಯಾ.ಎಚ್.ಎನ್.ನಾಗಮೋಹನ್ ಅವರ ‘ನ್ಯಾಯಾಂಗ ಒಳನೋಟ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಜನರ ವಿಶ್ವಾಸವೇ ನ್ಯಾಯಾಂಗದ ನಿಜವಾದ ಶಕ್ತಿ. ನ್ಯಾಯಾಧೀಶರು ಬದ್ಧತೆಯಿಂದ, ಧೈರ್ಯದಿಂದ ಸ್ವತಂತ್ರರಾಗಿ ದೇಶದ ಜನರ ವಿಶ್ವಾಸವನ್ನು ಗಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ನ್ಯಾಯಾಧೀಶರಾಗಲಿ, ವಕೀಲರಾಗಲಿ ನ್ಯಾಯಾಲಯಕ್ಕೆ ಬರುವವರನ್ನು ಗೌರವದಿಂದ ಸಜ್ಜನಿಕೆಯಿಂದ ನಡೆಸಿಕೊಳ್ಳಬೇಕು. ನ್ಯಾಯದಾನದಲ್ಲಿ ಸಂಬಂಧ, ಸ್ನೇಹವನ್ನು ಬದಿಗೊತ್ತಿ ತೀರ್ಪು ನೀಡಬೇಕು. ಅಂತಹವರಿಂದ ನ್ಯಾಯಾಂಗದ ಗೌರವ ಹೆಚ್ಚುತ್ತದೆ. ಸಮಾಜದಲ್ಲಾಗುತ್ತಿರುವ ಅನ್ಯಾಯಗಳಿಗೆ ಜಾತಿ, ಅಪರಾಧ ಮತ್ತು ಭ್ರಷ್ಟಾಚಾರವೇ ಮೂಲ ಕಾರಣಗಳಾಗಿವೆ. ಇದರ ವಿರುದ್ಧವಾಗಿ ನಾವು ಸಾಮರ್ಥ್ಯ, ಪಾತ್ರ, ಬದ್ಧತೆ ಮತ್ತು ಹೊಂದಾಣಿಕೆ ಎಂಬ ಅಂಶಗಳನ್ನು ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಮಾತನಾಡಿ, ಇಂದು ಶಾಸಕಾಂಗ, ಕಾರ್ಯಾಂಗದ ಬಗ್ಗೆ ಜನಸಾಮಾನ್ಯರು ನಂಬಿಕೆಗಳನ್ನು ಕಳೆದುಕೊಂಡಿದ್ದು, ಒಂದಷ್ಟು ಪ್ರಮಾಣದ ನಂಬಿಕೆ ಉಳಿಸಿಕೊಂಡಿರುವುದು ನ್ಯಾಯಾಂಗ ಮಾತ್ರ. 73 ವರ್ಷಗಳಲ್ಲಿ ತೀರ್ಪುಗಳ ಮುಖಾಂತರ ಸಂವಿಧಾನವನ್ನು ರಕ್ಷಿಸಿ. ಅಂತರ್ಗತವಾಗಿರುವ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಜನತೆ ಮುಂದಿಟ್ಟಿದೆ. ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಿದೆ ಹೀಗೆ ಅನೇಕ ಕೆಲಸಗಳ ಮೂಲಕ ನ್ಯಾಯಾಂಗ ಜನರ ನಂಬಿಕೆಯನ್ನು ಉಳಿಸಿಕೊಂಡಿದೆ ಎಂದ ಅವರು, ಇಂದಿನ ಸರಕಾರ, ಜನಪ್ರತಿನಿಧಿಗಳ ಹೇಳಿಕೆಗಳನ್ನು ಗಮನಿಸಿದಾಗ ಈ ದೇಶದಲ್ಲಿ ಸ್ವತಂತ್ರವಾದ ನ್ಯಾಯಾಂಗವನ್ನು ಉಳಿಸಕೊಳ್ಳಲು ಸಾಧ್ಯವಿದೆಯಾ ಎನ್ನುವ ಪ್ರಶ್ನೆ ಕಾಡುತ್ತದೆ. ನ್ಯಾಯಾಂಗವನ್ನು ಸರಕಾರದ ಅಧೀನಕ್ಕೆ ತೆಗೆದುಕೊಳ್ಳುವಂತಹ ಪ್ರವೃತ್ತಿ ಪ್ರಾರಂಭವಾಗಿದೆ. ಇದು ಸರಿಯಾದ ಬೆಳವಣಿಗೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವವನ್ನು, ಸ್ವಾತಂತ್ರ್ಯವನ್ನು, ಹಕ್ಕುಗಳನ್ನು ಉಳಿಸಿಕೊಳ್ಳಬೇಕಾದರೆ ಸ್ವತಂತ್ರವಾದ ನ್ಯಾಯಾಂಗದಿಂದ ಮಾತ್ರ ಸಾಧ್ಯ. ಸ್ವತಂತ್ರವಾದ ನ್ಯಾಯಾಂಗ ಉಳಿಸಿಕೊಳ್ಳಲು ನ್ಯಾಯಾಧೀಶರು, ವಕೀಲರು, ಜನರು ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಬೇಕಿದೆ ಎಂದರು.

ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಮಾತನಾಡಿ, ನ್ಯಾಯಾಂಗದ ಬಗೆಗಿನ ಅರಿವು ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್, ಹೈಕೋರ್ಟ್‍ನ ನ್ಯಾಯಾಧೀಶರು, ಹಿರಿಯ, ಕಿರಿಯ ವಕೀಲರು, ಕಾನೂನು ವಿದ್ಯಾರ್ಥಿಗಳು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ನ್ಯಾಯಾಂಗ ಒಳನೋಟ ಪುಸ್ತಕವನ್ನು ಓದಬೇಕು. ನ್ಯಾಯವಾದಿಗಳು, ವಕೀಲರು, ವಿದ್ಯಾರ್ಥಿಗಳು ಸಮಾಜದಲ್ಲಿನ ಭ್ರಷ್ಟಾಚಾರವನ್ನು ಹೋಗಲಾಡಿಸಲು ಸಂಕಲ್ಪ ಮಾಡಬೇಕು ಎಂದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್, ಜನ ಪ್ರಕಾಶನದ ಬಿ.ರಾಜಶೇಖರಮೂರ್ತಿ ಉಪಸ್ಥಿತರಿದ್ದರು.

Similar News