ರಾಜ್ಯ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ 3,000 ಕೋಟಿ ರೂ. ಮೀಸಲಿಡುವಂತೆ ಐವನ್ ಡಿಸೋಜಾ ಒತ್ತಾಯ

Update: 2023-02-04 10:23 GMT

ಮಂಗಳೂರು, ಫೆ.4: ಗೃಹ ಜ್ಯೋತಿ ಯೋಜನೆಯಲ್ಲಿ ಪ್ರತಿ ಮನೆಗೂ ಮಾಸಿಕ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಮನೆಯ ಯಜಮಾನಿಗೆ 2,000 ರೂ. ನೀಡಲಾಗುವುದು ಎಂದು ವಿಧಾನ ಪರಿಷತ್ತಿನ ಮಾಜಿ ಗೃಹ ಸಚೇತಕರಾದ ಐವನ್ ಡಿಸೋಜಾ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಐಟಿ ಮತ್ತು ಗಾರ್ಮೆಂಟ್ ಇಂಡಸ್ಟ್ರಿ ಪಾರ್ಕ್ ಸ್ಥಾಪನೆ ಮಾಡುವ ಜೊತೆಗೆ ಒಂದು ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೇವೆ. ಮೀನುಗಾರರಿಗೆ ತಲ 10 ಲಕ್ಷ ರೂ. ಮೊತ್ತದ ವಿಮಾ ಯೋಜನೆ, ಮೀನುಗಾರ ಮಹಿಳೆಯರಿಗೆ 1 ಲಕ್ಷ ರೂ. ತನಕ ಬಡ್ಡಿ ರಹಿತ ಸಾಲ ಮತ್ತು ದೋಣಿಯನ್ನು ಖರೀದಿಸಲು ಶೇ.25 ಸಬ್ಸಿಡಿಯೊಂದಿಗೆ 25 ಲಕ್ಷ ರೂ.ವರೆಗೆ ಸಾಲ ನೀಡಲಾಗುವುದು. ವಂಚಿತ ಸಮುದಾಯಗಳಿಗೆ ಆದ್ಯತೆ ಮೇರೆಗೆ ಡಿಸಿ ಮನ್ನಲ್ಯಾಂಡ್ ವಿತರಿಸಲಾಗುವುದು ಎಂದು ಅವರು ಹೇಳಿದರು.

ಕರಾವಳಿ ಪ್ರದೇಶದ ಅಭಿವೃದ್ಧಿ ಮೊದಲ ಆದ್ಯತೆಯಾಗಿದ್ದು, ಉದ್ಯೋಗ, ಹೂಡಿಕೆ, ಪ್ರವಾಸೋದ್ಯಮ ಬೆಳವಣಿಗೆ ದೃಷ್ಟಿಯಿಂದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮೇಲ್ದರ್ಜೆಗೇರಿಸಿ 2,500 ಕೋಟಿ ರೂ. ವಾರ್ಷಿಕ ಬಜೆಟ್ ನೀಡಬೇಕು. ಕಾಂಗ್ರೆಸ್ ಸರಕಾರ ರಚನೆಯಾದ 6 ತಿಂಗಳೊಳಗೆ ಮಲ್ಪೆ ಮೀನುಗಾರಿಕಾ ಬಂದರು, ಗಂಗೊಳ್ಳಿ ಮೀನುಗಾರಿಕಾ ಬಂದರು ಮತ್ತು ಮಂಗಳೂರು ಮೀನುಗಾರಿಕೆ ಬಂದರಿನ ಹೂಳೆತ್ತುವ ಕೆಲಸವನ್ನು ಮಾಡಲಾಗುವುದು ಎಂದವರು ಹೇಳಿದರು.

ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ವಾರ್ಷಿಕ 250 ಕೋಟಿ ರೂ.ನಂತೆ 5 ವರ್ಷಗಳಲ್ಲಿ 1,250 ರೂ. ಕೋಟಿ ಅನುದಾನ, ಬಂಟ್ಸ್ ಅಭಿವೃದ್ಧಿ ನಿಗಮ ಸ್ಥಾಪಿಸಿ ವಾರ್ಷಿಕ 250 ರೂ. ಕೋಟಿಯಂತೆ 5 ವರ್ಷಗಳಲ್ಲಿ 1,250 ಕೋಟಿ ರೂ. ಅನುದಾನ ಹಾಗೂ 2013ರಲ್ಲಿ ಆರಂಭಿಸಿದ್ದ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಗೆ ಮೀಸಲಿಟ್ಟಿದ್ದ 3,150 ಕೋಟಿ ರೂ. ಮೊತ್ತದ ಯೋಜನೆ ಮರುಸ್ಥಾಪನೆ ಮಾಡುತ್ತೇವೆ. ಹಳದಿ ರೋಗದಿಂದ ಬಾಧಿತರಾದ ಅಡಕೆ ಬೆಳೆಗಾರರ ಕುಟುಂಬದ ಸಮಸ್ಯೆಗಳನ್ನು ಪರಿಹರಿಸಲು 50 ಕೋಟಿ ರೂ. ಮಂಜೂರು ಮಾಡಲಾಗುವುದು ಎಂದರು.

ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಸ್ವಾಮಿ ವಿವೇಕಾನಂದ ಕೋಮು ಮತ್ತು ಸಾಮಾಜಿಕ ಸಾಮರಸ್ಯ ಸಮಿತಿ ಸ್ಥಾಪನೆ ಮಾಡಿ ಸೂಕ್ತ ಅನುದಾನ ಮತ್ತು ಕಾರ್ಯಕ್ರಮವನ್ನು ನಡೆಸುವುದು. ಕರ್ನಾಟಕ ರಾಜ್ಯ ಸೂಕ್ಷ್ಮ ಹಿಂದುಳಿದ ಸಮುದಾಯಗಳ ಅಭಿವೃದ್ಧಿ ನಿಗಮದ ರಚನೆ ಮತ್ತು ಅವರು ಎದುರುಸುತ್ತಿರುವ ನೋವು ಮತ್ತು ಸಮಸ್ಯೆಗಳನ್ನು ಪರಿಹರಿಸಲು, ರಾಜ್ಯದ ಎಲ್ಲಾ ಸೂಕ್ಷ್ಮ ಹಿಂದುಳಿದ ಸಮುದಾಯಗಳ ಕಲ್ಯಾಣಕ್ಕಾಗಿ ವಾರ್ಷಿಕ 250 ಕೋಟಿ ರೂ. ಅಂದರೆ 5 ವರ್ಷಗಳಲ್ಲಿ 1,250 ರೂ.ಕೋಟಿ ಮೀಸಲಿಡುವುದು ಎಂದರು.

ಈ ಬಾರಿ ಸರಕಾರ ಬಜೆಟ್ ನಲ್ಲಿ 3,000 ರೂ. ಕೋಟಿ ಅಲ್ಪಸಂಖ್ಯಾತರಿಗೆ ನೀಡಬೇಕು. ಕ್ರೈಸ್ತ ಅಭಿವೃದ್ಧಿ ನಿಗಮಕ್ಕೆ 300 ರೂ. ಕೋಟಿ ಮೀಸಲಿರಿಸಿ ಅದಕ್ಕೆ ಅಧ್ಯಕ್ಷರನ್ನು ತಕ್ಷಣ ನೇಮಕ ಮಾಡಬೇಕು. ಕಚ್ಚಾ ತೈಲದ ಬೆಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಶೇ. 32 ಕಡಿಮೆಯಾಗಿದ್ದು, ನಮ್ಮ ದೇಶದಲ್ಲಿ 5 ಪೈಸೆ ಕಡಿಮೆಯಾಗಿಲ್ಲ. ಸರಕಾರ ಜನರನ್ನು ಕಡೆಗಣಿಸುತ್ತಿದೆ ಎಂದು ಐವನ್ ಡಿಸೋಜಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ನವೀನ್ ಡಿ, ಸೋಜ, ಶಾಹುಲ್ ಹಮೀದ್, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿ ಶುಭೋದ್ ಆಳ್ವ, ಮಾಜಿ ಕಾರ್ಪೊರೇಟರ್ ಸಬಿತಾ, ಸಿ.ಎಂ. ಮುಸ್ತಫ, ಸಲೀಂ ಉಪಸ್ಥಿತರಿದ್ದರು.

Similar News