ಬೆಂಗಳೂರು ನಗರ ಮೂಲಸೌಕರ್ಯ ವಿಚಾರದಲ್ಲಿ ಬಿಜೆಪಿ ಸರಕಾರ ವಿಫಲ: ಬಿ.ಕೆ.ಹರಿಪ್ರಸಾದ್

Update: 2023-02-04 12:34 GMT

ಬೆಂಗಳೂರು, ಫೆ.4: ನಗರದ ಮೂಲಭೂತ ಸೌಕರ್ಯ ವಿಚಾರದಲ್ಲಿ ಬಿಜೆಪಿ ಸರಕಾರ ಸಂಪೂರ್ಣವಾಗಿ ವಿಫಲವಾಗಿರುವುಲ್ಲದೆ, ಎರಡು ವರ್ಷಗಳಿಂದ ಬಿಬಿಎಂಪಿ ಚುನಾವಣೆಯನ್ನೂ ನಡೆಸಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ.

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ನಗರಕ್ಕೆ ಹೊಸದಾಗಿ ಸೇರ್ಪಡೆಯಾದ 108 ಹಳ್ಳಿಗಳು ಹಾಗೂ ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಬೆಂಗಳೂರು ಚಿನ್ನದ ಮೊಟ್ಟೆ ಇಡುವ ಕೋಳಿ ಆಗಿದ್ದು, ಇದರ ಅಭಿವೃದ್ಧಿ ವಿಚಾರದಲ್ಲಿ ಸರಕಾರ ನಿರ್ಲಕ್ಷ ವಹಿಸಿದೆ ಎಂದು ಆರೋಪಿಸಿದರು.

ಬೆಂಗಳೂರಿನ ಹಳೆಯ 12 ಕ್ಷೇತ್ರಗಳನ್ನು 28 ಕ್ಷೇತ್ರ ಮಾಡಲಾಗಿದೆ. ಈ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರೀತಿಯ ಯೋಜನೆ ರೂಪಿಸಿಲ್ಲ. ಮಲ್ಲೇಶ್ವರಂ ಸ್ಯಾಂಕಿ ಟ್ಯಾಂಕ್ ರಸ್ತೆ ವಿಸ್ತರಣೆ ಹಾಗೂ ಫ್ಲೈ ಓವರ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಟ್ಯಾಂಕ್ ರಸ್ತೆಯಲ್ಲಿ ಹಲವು ವಿದ್ಯಾಸಂಸ್ಥೆಗಳು ಇವೆ. ಇಲ್ಲಿ ಏಕಾಏಕಿ ರಸ್ತೆ ಅಗಲೀಕರಣ ಮಾಡುತ್ತೇವೆ ಎನ್ನುತ್ತಿದ್ದಾರೆ. ಸ್ಯಾಂಕಿ ಟ್ಯಾಂಕ್ ಹಳೆ ಟ್ಯಾಂಕ್ ಆಗಿದೆ. ಈ ಕೆರೆ ಉಳಿಸುವ ಕೆಲಸ ಮಾಡಬೇಕು. ಇಲ್ಲಿ ರಸ್ತೆ ಅಗಲೀಕರಣ ಮಾಡಿದರೆ ಕೆರೆಗೆ ತೊಂದರೆಯಾಗಲಿದೆ. 2011ರಿಂದ ನಿರಂತರವಾಗಿ ಈ ಪ್ರಯತ್ನ ನಡೆಯುತ್ತಿದೆ. ಯಾವುದೇ ಮುಂದಾಲೋಚನೆ ಇಲ್ಲದೆ ಈ ಯೋಜನೆಗೆ ಮುಂದಾಗಿದ್ದು, ಅಲ್ಲಿ 100ರಿಂದ 150 ವರ್ಷಗಳ ಹಳೆ ಮರಗಳಿವೆ. ಅವುಗಳನ್ನು ತೆಗೆದು ರಸ್ತೆ ಅಗಲೀಕರಣ ಮಾಡುವ ಅಗತ್ಯವಿಲ್ಲ ಎಂದರು.

ರಸ್ತೆ ಅಗಲೀಕರಣ ವಿಚಾರದ ಬಗ್ಗೆ ಅಲ್ಲಿನ ಸಾರ್ವಜನಿಕರು, ಬೇರೆ ಬೇರೆ ಸಂಸ್ಥೆಗಳ ಜತೆ ಮಾತನಾಡಬೇಕು. ಅವರು ಕೊಟ್ಟ ಸಲಹೆ ಪಾಲಿಸಬೇಕಿತ್ತು. ಇಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು. ಅದನ್ನು ಬಿಟ್ಟು ತರಾತುರಿಯಲ್ಲಿ ಈ ಯೋಜನೆಗೆ ಮುಂದಾಗಿದ್ದಾರೆ ಎಂದ ಅವರು, ಈ ಕಾಮಗಾರಿ ಮರು ಯೋಜನೆ ರೂಪಿಸುವುದು ಉತ್ತಮ. ಹಿಂದೆ ಕಾಂಗ್ರೆಸ್ ಸರಕಾರ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ಮುಂದಾದಾಗ ಸಾರ್ವಜನಿಕರಿಂದ ಒಪ್ಪಿಗೆ ಸಿಗದ ಕಾರಣ ಅದನ್ನು ಕೈಬಿಟ್ಟಿದ್ದೇವೆ ಎಂದು ಹರಿಪ್ರಸಾದ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.

Similar News