ಬೆಂಗಳೂರು: ಎಟಿಎಂಗೆ ತುಂಬಿಸಬೇಕಿದ್ದ 1 ಕೋಟಿ ರೂ. ಹಣದೊಂದಿಗೆ ನೌಕರ ಪರಾರಿ

Update: 2023-02-07 12:43 GMT

ಬೆಂಗಳೂರು, ಫೆ.7: ಎಟಿಎಂಗೆ ತುಂಬಿಸಬೇಕಿದ್ದ ಹಣದ ಜೊತೆ ಕಂಪೆನಿ ನೌಕರ ಪರಾರಿಯಾಗಿರುವ ಘಟನೆ ವರದಿಯಾಗಿದೆ.

ಇಲ್ಲಿನ ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ರಾಜೇಶ್ ಮೆಸ್ತಾ ಎಂಬಾತ 1 ಕೋಟಿ 3 ಲಕ್ಷದೊಂದಿಗೆ ನಾಪತ್ತೆಯಾದ ಆರೋಪ ಕೇಳಿ ಬಂದಿದೆ.

ಎಟಿಎಂ ಯಂತ್ರಗಳಿಗೆ ಹಣ ತುಂಬಿಸುವ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ ಸಂಸ್ಥೆಯ ನೌಕರನಾಗಿದ್ದ ರಾಜೇಶ್ ಮೆಸ್ತಾ, ಕಳೆದ 11 ವರ್ಷಗಳಿಂದಲೂ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಆದರೆ ಜನವರಿ ಅಂತ್ಯದಲ್ಲಿ ಮೊಬೈಲ್ ಸಂಪರ್ಕ ಕಡಿತ ಮಾಡಿರುವ ರಾಜೇಶ್ ನಾಪತ್ತೆಯಾಗಿದ್ದ ಎನ್ನಲಾಗಿದೆ. ಅನುಮಾನಗೊಂಡ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಸಂಸ್ಥೆಯವರು ರಾಜೇಶ್ ಹಣ ತುಂಬಿಸುತ್ತಿದ್ದ ಎಟಿಎಂಗಳ ಪರಿಶೀಲನೆ ನಡೆಸಿದಾಗ 1 ಕೋಟಿ 3 ಲಕ್ಷ ರೂಪಾಯಿ ಹಣದ ವ್ಯತ್ಯಾಸ ಕಂಡುಬಂದಿದೆ. 

ಸದ್ಯ ಕಂಪೆನಿಯವರು ನೀಡಿರುವ ದೂರಿನನ್ವಯ ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

Similar News