ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2023-02-08 09:21 GMT

ಬೆಂಗಳೂರು, ಫೆ.8: ರೈತ ವಿರೋಧಿ ಹೇಳಿಕೆ ನೀಡಿರುವ ಬಿಜೆಪಿಯ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಬೆಂಗಳೂರಿನಲ್ಲಿಂದು ಪ್ರತಿಭಟನೆ ನಡೆಯಿತು.

ಯುಪಿಎ ಸರ್ಕಾರ ರೈತರ ಲಕ್ಷಾಂತರ ಕೋಟಿ ಹಣ ಸಾಲಮನ್ನಾ ಮಾಡಿದ್ದನ್ನ ಪ್ರಶ್ನಿಸಿ, ರೈತರಿಗೆ ಸಾಲ ಮನ್ನಾ ಮಾಡಿದರೆ ಯಾವುದೇ ರೀತಿಯ ಉಪಯೋಗ ಇಲ್ಲ ಎಂಬುವ ಹೇಳಿಕೆ ನೀಡುವ ಮೂಲಕ ತೇಜಸ್ವಿ ಸೂರ್ಯ ರೈತ ವಿರೋಧಿ ನೀತಿ ಅನುಸರಿಸಿರುವುದು ಬಯಲಾಗಿದೆ. ಇದರಿಂದ ಬಿಜೆಪಿಗರು ರೈತರ ವಿರೋಧಿಗಳೆಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಕೂಡಲೇ ಇಂತಹ ರೈತ ವಿರೋಧಿ ಹಾಗೂ ದೇಶದ್ರೋಹಿ ಸಂಸದ ತೇಜಸ್ವಿ ಸೂರ್ಯನನ್ನು  ಬಿಜೆಪಿ ತನ್ನ ಪಕ್ಷದಿಂದ ಹೊರ ಹಾಕಬೇಕು ಹಾಗೂ ಇವನನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

 ನರೇಂದ್ರ ಮೋದಿ ದೇಶದ ಜನಸಾಮಾನ್ಯರ ಹಣವನ್ನು ಲೂಟಿ ಮಾಡಿರುವ ಅದಾನಿ ಸಂಸ್ಥೆಗೆ ಲಕ್ಷಾಂತರ ಕೋಟಿ ಹಣ ಸಾಲ ಮನ್ನಾ  ಮಾಡುತ್ತಾರೆ. ಆದರೆ ರೈತರ ಬಗ್ಗೆ ನಿರ್ಲಕ್ಷ್ಯದ ಮಾತನಾಡಿರುವ ತೇಜಸ್ವಿ ಸೂರ್ಯ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಬಿಜೆಪಿಯ ಇಬ್ಬಗೆತನ ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಪಕ್ಷದ ಮುಖಂಡರುಗಳಾದ ಜಿ.ಜನಾರ್ದನ್,ಎ.ಆನಂದ್, ಮಂಜುನಾಥ್, ಪ್ರಕಾಶ್, ಸುಧೀರ್, ವೆಂಕಟೇಶ್, ಚಂದ್ರಶೇಖರ್, ಪುಟ್ಟರಾಜ, ಪ್ರಶಾಂತ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

Similar News