ಬಿ.ಇ ವಿದ್ಯಾರ್ಥಿ ಹತ್ಯೆ: ಆರೋಪಿಗೆ ಕೋರ್ಟ್ ನಿಂದ ಜೀವಾವಧಿ ಶಿಕ್ಷೆ

Update: 2023-02-08 15:55 GMT

ಬೆಂಗಳೂರು, ಫೆ.8: ಚಿನ್ನದ ಸರ ಕಳ್ಳತನ ವೇಳೆ ಮಹಿಳೆಯ ಸಹಾಯಕ್ಕೆ ಹೋಗಿದ್ದ ಸಾಯಿಚರಣ್(22) ಎನ್ನುವವರನ್ನು ಹತ್ಯೆ ಮಾಡಿದ್ದ ಅಪರಾಧಿ ಜಾನ್ಸನ್‍ಗೆ(21) ನಗರದ 29ನೆ ಸಿಸಿಎಚ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಎಚ್‍ಎಎಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಕೇಸ್‍ನ ವಿಚಾರಣೆಯನ್ನು ನಡೆಸಿದ ಸಿಸಿಎಚ್ ಕೋರ್ಟ್‍ನ ನ್ಯಾಯಪೀಠ, ಈ ಆದೇಶ ನೀಡಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಜಹಿದಾ ಬಾನು ವಾದಿಸಿದ್ದರು.

ವಿಭೂತಿಪುರ ನಿವಾಸಿ ಜಾನ್ಸನ್, ಅಪರಾಧ ಹಿನ್ನೆಲೆಯುಳ್ಳ ಈತ, ನಗರದಲ್ಲಿ ಸುತ್ತಾಡಿ ಮಹಿಳೆಯರ ಚಿನ್ನದ ಸರಗಳನ್ನು ಕಳವು ಮಾಡುತ್ತಿದ್ದ. ಈತನ ವಿರುದ್ಧ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಹತ್ಯೆಯಾಗಿದ್ದ ಸಾಯಿಚರಣ್ ಆಂಧ್ರಪ್ರದೇಶದವರು. ಬಿ.ಇ ವ್ಯಾಸಂಗಕ್ಕಾಗಿ ನಗರಕ್ಕೆ ಬಂದಿದ್ದರು. ವಿಜ್ಞಾನನಗರದಲ್ಲಿ ಹೊರಟಿದ್ದ ಮಹಿಳೆಯೊಬ್ಬರನ್ನು ಹಿಂಬಾಲಿಸಿದ್ದ ಜಾನ್ಸನ್, ಚಿನ್ನದ ಸರ ಕಿತ್ತುಕೊಂಡು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದ್ದ. ಸಹಾಯಕ್ಕಾಗಿ ಮಹಿಳೆ ಕೂಗಾಡಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ.

ಸ್ನೇಹಿತರ ಜೊತೆ ನಿಂತಿದ್ದ ಸಾಯಿಚರಣ್, ಮಹಿಳೆ ಕೂಗಾಟ ಕೇಳಿ ಸಹಾಯಕ್ಕೆ ಹೋಗಿದ್ದರು. ತಮ್ಮ ಬೈಕ್‍ನಲ್ಲಿ ಜಾನ್ಸನ್‍ನನ್ನು ಬೆನ್ನಟ್ಟಿದ್ದರು. ಕಗ್ಗದಾಸಪುರ ಮುಖ್ಯರಸ್ತೆಯಲ್ಲಿ ಜಾನ್ಸನ್‍ನನ್ನು ಅಡ್ಡಗಟ್ಟಿ, ಹಿಡಿದುಕೊಳ್ಳಲು ಮುಂದಾಗಿದ್ದರು. ಇದೇ ವೇಳೆಯೇ ಅಪರಾಧಿ, ಚಾಕುವಿನಿಂದ ಇರಿದು ಸಾಯಿಚರಣ್ ಅವರನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದ ಎಂದು ಮೂಲಗಳು ತಿಳಿಸಿವೆ. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಜೀವಾವಧಿ ಶಿಕ್ಷೆ ಜೊತೆಯಲ್ಲಿ ಅಪರಾಧಿಗೆ  2 ಲಕ್ಷ ದಂಡವನ್ನೂ ವಿಧಿಸಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

Similar News