ಯುಕೆಜಿ ವಿದ್ಯಾರ್ಥಿನಿಯನ್ನು ಅನುತ್ತೀರ್ಣಗೊಳಿಸಿದ ಬೆಂಗಳೂರಿನ ಶಾಲೆ: ಪೋಷಕರಿಂದ ಆಕ್ರೋಶ

ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮಕ್ಕೆ ಮಾಜಿ ಶಿಕ್ಷಣ ಸಚಿವರ ಆಗ್ರಹ

Update: 2023-02-09 07:15 GMT

ಬೆಂಗಳೂರು, ಫೆ.9: ಬೆಂಗಳೂರಿನ ಶಾಲೆಯೊಂದು ಯುಕೆಜಿ ವಿದ್ಯಾರ್ಥಿನಿಯನ್ನು ಎರಡು ರೈಮ್ಸ್ ಹೇಳಲು ವಿಫಲವಾದಳೆಂದು ಸೆಮಿಸ್ಟರ್ ಪರೀಕ್ಷೆಯಲ್ಲಿ  ಅನುತ್ತೀರ್ಣಗೊಳಿಸಿದ್ದು, ಇದರಿಂದ ಆಕ್ರೋಶಗೊಂಡ ಪೋಷಕರು ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ವೃತ್ತಿಯಲ್ಲಿ ಬ್ಯಾಂಕ್ ವ್ಯವಸ್ಥಾಪಕರಾದ ವಿದ್ಯಾರ್ಥಿನಿಯ ತಂದೆ ಮನೋಜ್ ಬಾದಲ್, "ಶಾಲೆಯ ಆ್ಯಪ್‌ನಲ್ಲಿ ನಮ್ಮ ಪುತ್ರಿಯ ಅಂಕಪಟ್ಟಿ ನೋಡಿ ಆಘಾತಗೊಂಡೆವು. ಆಕೆ 160 ಅಂಕಗಳ ಪೈಕಿ 100 ಅಂಕ ಗಳಿಸುವಲ್ಲಿ ಯಶಸ್ವಿಯಾಗಿದ್ದಳು. ಆದರೆ, 40 ಅಂಕದ ಪೈಕಿ ಕನಿಷ್ಠ 14 ಅಂಕ ಗಳಿಸಬೇಕಿದ್ದ ರೈಮ್ಸ್‌ನಲ್ಲಿ ಕೇವಲ 4 ಅಂಕ ಗಳಿಸಿದ್ದಳು" ಎಂದು ಹೇಳಿದ್ದಾರೆ.

''ನನ್ನ ಪುತ್ರಿಯು 2022ರಿಂದ ಆನೇಕಲ್‌ನ ದೀಪಾಹಳ್ಳಿಯಲ್ಲಿರುವ ಸೇಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿ ಆಫ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ'' ಎಂದು ಅವರು ತಿಳಿಸಿದ್ದಾರೆ.

"ಆಕೆ ನಮಗೊಬ್ಬಳೇ ಮಗಳು. ವ್ಯಾಸಂಗದಲ್ಲಿ ಆಕೆ ಅತ್ಯಂತ ಪ್ರತಿಭಾನ್ವಿತೆ. ಆಕೆಯ ಅಂಕಪಟ್ಟಿಯನ್ನು ನೋಡಿದರೆ, ಆಕೆ ಇಂಗ್ಲಿಷ್‌ನಲ್ಲಿ 40 ಅಂಕಗಳ ಪೈಕಿ 31, ಗಣಿತದಲ್ಲಿ 40 ಅಂಕಗಳ ಪೈಕಿ 35, ಪರಿಸರ ವಿಜ್ಞಾನದಲ್ಲಿ 40 ಅಂಕಗಳ ಪೈಕಿ 28 ಅಂಕ ಗಳಿಸಿರುವುದನ್ನು ನೀವು ನೋಡಬಹುದು. ರೈಮ್ಸ್‌ ಅನ್ನೂ ಕೂಡಾ ಆಕೆ ಮನೆಯಲ್ಲೂ ಹೇಳಬಲ್ಲಳು ಹಾಗೂ ರೈಮ್ಸ್ ಶಿಕ್ಷಕಿ ಎದುರೂ ಹೇಳಬಲ್ಲಳು. ದುರದೃಷ್ಟವಶಾತ್, ಮೌಖಿಕ ಪರೀಕ್ಷೆಯಲ್ಲಿ ರೈಮ್ಸ್ ಕಂಠಪಾಠ ಒಪ್ಪಿಸುವಲ್ಲಿ ವಿಫಲಳಾಗಿದ್ದಾಳೆ" ಎಂದು ಬಾದಲ್ ಮಾಹಿತಿ ನೀಡಿದ್ದಾರೆ.

ಮನೋಜ್ ಬಾದಲ್ ಅವರ ಪತ್ನಿ ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಮೂಲತಃ ಬಿಹಾರದವರಾದ ಈ ದಂಪತಿ ಕಳೆದ ವರ್ಷವಷ್ಟೇ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದರೆನ್ನಲಾಗಿದೆ.

► ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್

ಈ ವಿಚಾರಕ್ಕೆ ಸಂಬಂಧಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನ ಮಾಡಿರುವ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್, ''UKG ತರಗತಿಯಲ್ಲಿ ಓದುತ್ತಿರುವ ಈ ಎಳೆಯ ಮಗುವನ್ನು "#ಫೇಲ್" ಮಾಡಿರುವ ಶಿಕ್ಷಣ ಸಂಸ್ಥೆಗೆ ತಲೆಯೂ ಇಲ್ಲ, ಹೃದಯ ಮೊದಲೇ ಇಲ್ಲ. ಆ ಮಗುವನ್ನು ಏನು ಮಾಡಲು ಹೊರಟಿದೆ ಈ ಮಹಾ ಶಿಕ್ಷಣ ಸಂಸ್ಥೆ! ನನ್ನ ಗಮನಕ್ಕೆ ಈ "ಮಹಾಕೃತ್ಯ" ಬಂದ ಕೂಡಲೇ ಶಿಕ್ಷಣ ಇಲಾಖೆಯ ಆ ತಾಲೂಕಿನ ಪ್ರಮುಖರಿಗೆ ತಲುಪಿಸಿ ಈ ಶಾಲೆಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿ ಮನವಿ ಮಾಡಿದ್ದೇನೆ. ನಾನು ಕೂಡ ಈ ಮಹಾ ಶಾಲೆಗೆ ಸದ್ಯದಲ್ಲಿಯೇ ಒಮ್ಮೆ ಭೇಟಿ ನೀಡಿ "ಪಾವನ" ನಾಗಲು ಬಯಸಿದ್ದೇನೆ'' ಎಂದು ಬರೆದುಕೊಂಡಿದ್ದಾರೆ. 

Full View

Similar News