ಮಕ್ಕಳನ್ನು ಕಾಡುವ ಜಂತು ಹುಳಗಳು

ಇಂದು ರಾಷ್ಟ್ರೀಯ ಜಂತು ಹುಳ ನಿರ್ಮೂಲನಾ ದಿನ

Update: 2023-02-10 06:09 GMT

ಪ್ರತೀ ವರ್ಷ ಫೆಬ್ರವರಿ 10ರಂದು ರಾಷ್ಟ್ರೀಯ ಜಂತು ಹುಳ ನಿರ್ಮೂಲನ ದಿನ ಎಂದು ಆಚರಿಸಿ ಜಂತು ಹುಳಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆಯ ವತಿಯಿಂದ ಈ ಆಚರಣೆ ತರಲಾಗಿದ್ದು ದೇಶದಲ್ಲಿನ ಪ್ರತಿಯೊಬ್ಬ ಮಗುವೂ ಕೂಡಾ ಜಂತು ಹುಳಗಳ ಕಾಟದಿಂದ ವಿಮುಖ್ತಿಗೊಳಿಸುವ ಮಹದಾಶೆಯನ್ನು ಈ ಆಚರಣೆ ಹೊಂದಿದೆ. ಇದೊಂದು ದೇಶದ ಐತಿಹಾಸಿಕ ಕಾರ್ಯಕ್ರಮವಾಗಿದ್ದು ಲಕ್ಷಾಂತರ ಮಕ್ಕಳನ್ನು ಏಕಕಾಲಕ್ಕೆ ಅತ್ಯಂತ ಕಡಿಮೆ ಅವಧಿಯಲ್ಲಿ ತಲುಪುವ ಉದ್ದೇಶ ಹೊಂದಿದೆ. ವಿಶ್ವದಾದ್ಯಂತ ಪ್ರತಿವರ್ಷ 850 ಮಿಲಿಯನ್ ಮಕ್ಕಳು ಈ ಜಂತುಹುಳದ ಬಾಧೆಗೆ ಒಳಗಾಗುತ್ತಾರೆ. ವಿಶ್ವಸಂಸ್ಥೆಯ ವರದಿಗಳ ಪ್ರಕಾರ 300 ಮಿಲಿಯನ್ ಮಕ್ಕಳು (1ರಿಂದ 14 ವರ್ಷದೊಳಗಿನ) ಈ ಹುಳಗಳ ಬಾಧೆಯಿಂದ ಬಳಲುತ್ತಾರೆ ಎಂದು ತಿಳಿದುಬಂದಿದೆ. 

ರಕ್ತ ಹೀರಿ ಜೀವ ಹಿಂಡುವ ಜಂತು ಹುಳಗಳು

ಜಂತು ಹುಳಗಳ ಸಮಸ್ಯೆ ಇಂದು ನಿನ್ನೆಯದಲ್ಲ. ಮನುಷ್ಯನ ದೇಹದೊಳಗೆ ಸೇರಿಕೊಳ್ಳುವ ಹುಳಗಳು ಮನುಷ್ಯನ ರಕ್ತವನ್ನು ಹೀರಿ, ರಕ್ತಹೀನತೆಯನ್ನುಂಟು ಮಾಡಿ ಹತ್ತು ಹಲವು ರೋಗಗಳಿಗೆ ರಹದಾರಿ ಮಾಡಿಕೊಡುತ್ತದೆ. ಮೂಲಭೂತ ಸೌಕರ್ಯಗಳ ಕೊರತೆ, ಅಪೌಷ್ಟಿಕತೆ, ಕೊಳಚೆ ಪ್ರದೇಶಗಳು, ಬಡತನ, ಅಜ್ಞಾನ, ಅನಕ್ಷರತೆ, ಸ್ವಚ್ಛತೆಯ ಕೊರತೆ, ಶುದ್ಧ ನೀರು ಮತ್ತು ಸ್ವಚ್ಛವಾದ ಆಹಾರದ ಕೊರತೆ ಇತ್ಯಾದಿಗಳಿಂದಾಗಿ ಜಂತು ಹುಳಗಳ ಕಾಟ ಹೆಚ್ಚಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಕಲುಷಿತ ನೀರಿನ ಮತ್ತು ಆಹಾರದ ಮುಖಾಂತರ ದೇಹವನ್ನು ಪ್ರವೇಶಿಸುವ ಈ ಜಂತು ಹುಳಗಳು, ರಕ್ತಹೀನತೆ, ಅಜೀರ್ಣ, ಅಲರ್ಜಿ ಉಂಟುಮಾಡಿ, ದೇಹದ ಬೆಳವಣಿಗೆಯನ್ನು ಕುಂಠಿತಗೊಳಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಏನಿದು ಜಂತು ಹುಳಗಳು?

ಗುಂಡುಹುಳ (ಪಿನ್ ವರ್ಮ್), ದುಂಡು ಹುಳ (ರೌಂಡ್ ವರ್ಮ್), ಕೊಕ್ಕೆಹುಳ (ಹುಕ್‌ವರ್ಮ್), ಚಾವಟಿಹುಳ (ವಿಪ್ ವರ್ಮ), ಗಿನಿಯಾ ಹುಳ, ಲಾಡಿ ಹುಳ (ಟೇಪ್ ವರ್ಮ್) ಎಂಬುದಾಗಿ ಹತ್ತು ಹಲವು ಬಗೆಯ ಜಂತು ಹುಳಗಳು ನಮ್ಮ ದೇಹದಲ್ಲಿ ಕಾಣಸಿಗುತ್ತದೆ. ದುಂಡು ಹುಳಗಳು ಹೆಚ್ಚಾಗಿ ಹದಿಹರೆಯದ ಮಕ್ಕಳಲ್ಲಿ ಕಂಡು ಬರುತ್ತದೆ. ಗುಂಪು ಗುಂಪಾಗಿ ಹಾಸ್ಟೆಲುಗಳಲ್ಲಿ ಮತ್ತು ಶಿಬಿರಗಳಲ್ಲಿ ಜೀವಿಸುವ ಮಕ್ಕಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಗಿನಿಯಾ ಹುಳಗಳ ಕಾಟ ಈಗ ಬಹಳ ಕಡಿಮೆಯಾಗಿದ್ದು, ಲಾಡಿಹುಳ ಹೆಚ್ಚಾಗಿ ಮಾಂಸಾಹಾರಿಗಳಲ್ಲಿ ಕಾಣಸಿಗುತ್ತದೆ. ಮೀನು, ಮಾಂಸದ ಮುಖಾಂತರ ದೇಹಕ್ಕೆ ಸೇರಿಕೊಳ್ಳಬಹುದು. ಸರಿಯಾಗಿ ಬೇಯಿಸದೆ ಮಾಂಸಾಹಾರ ತಯಾರಿಸಿದಲ್ಲಿ ಈ ರೀತಿ ತೊಂದರೆ ಕಾಣಿಸಿಕೊಳ್ಳುತ್ತದೆ. ಚಾವಟಿ ಹುಳಗಳು ಹೆಚ್ಚಾಗಿ ಕರುಳಿನ ಒಳಭಾಗದ ಪದರವನ್ನು ಗಟ್ಟಿಯಾಗಿ ಕಚ್ಚಿಕೊಂಡು ರಕ್ತ ಹೀರುವುದರಿಂದ ರಕ್ತಹೀನತೆ, ರಕ್ತಸ್ರಾವ ಮತ್ತು ಕರುಳಿನ ಉರಿಯೂತ ಕಾಣಿಸಿಕೊಳ್ಳಬಹುದು. ದುಂಡು ಹುಳಗಳು ಜಗತ್ತಿನ ಸುಮಾರು ಶೇ. 25-30 ಮಂದಿಯನ್ನು ಕಾಡುತ್ತದೆ. ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳಿಲ್ಲದಿದ್ದರೂ, ಈ ದುಂಡುಹುಳಗಳ ಸಂಖ್ಯೆ ಕರುಳಲ್ಲಿ ಜಾಸ್ತಿಯಾದಾಗ ಅಜೀರ್ಣ, ಹಸಿವಿಲ್ಲದಿರುವುದು, ಪದೇ ಪದೇ ಹೊಟ್ಟೆನೋವು, ಬೆಳವಣಿಗೆ ಕುಂಠಿತವಾಗುವುದು, ಚರ್ಮದಲ್ಲಿ ಅಲರ್ಜಿ ತುರಿಕೆ, ದಡಿಕೆ ಕಾಣಿಸಿಕೊಳ್ಳುತ್ತದೆ. ಕೊಕ್ಕೆಹುಳ ನಮ್ಮ ಭಾರತದಲ್ಲಿ ಅತೀ ಹೆಚ್ಚಾಗಿ ಕಾಣಸಿಗುತ್ತದೆ. ಏನಿಲ್ಲವೆಂದರೂ ಭಾರತವೊಂದರಲ್ಲೇ ಸುಮಾರು 30 ಕೋಟಿ ಜನರು ಈ ಕೊಕ್ಕೆ ಹುಳದ ಬಾಧೆಯಿದ ಬಳಲುತ್ತಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಕೊಕ್ಕೆ ಹುಳಗಳ ಮರಿಗಳು ಮತ್ತು ಮೊಟ್ಟೆಗಳು ಮಣ್ಣಿನಲ್ಲಿ ಹೇರಳವಾಗಿದ್ದು, ಪಾದದ ಚರ್ಮದ ಮುಖಾಂತರ ಶರೀರವನ್ನು ಪ್ರವೇಶಿಸುತ್ತದೆ. ಕೊಕ್ಕೆ ಹುಳದ ಪೀಡಿತರು ಹೆಚ್ಚಾಗಿ ರಕ್ತಹೀನತೆಯಿಂದ ಬಳಲುತ್ತಾರೆ.

ನಿಯಂತ್ರಣ ಹೇಗೆ?

  • ಶುದ್ಧವಾದ ಕುಡಿಯುವ ನೀರನ್ನೇ ಬಳಸಬೇಕು.
  • ಶರೀರದ ಸ್ವಚ್ಚತೆ ಮತ್ತು ಆಹಾರದ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು.
  • ಬಯಲು ಪ್ರದೇಶಗಳಲ್ಲಿ ಮಲವಿಸರ್ಜನೆ ಮಾಡಲೇಬಾರದು. ಮಲವಿಸರ್ಜನೆಗೆ ಪಾಯಿಖಾನೆಗಳನ್ನು ಬಳಸಬೇಕು.
  • ಹೊಲಗದ್ದೆಗಳಲ್ಲಿ, ಬಯಲು ಪ್ರದೇಶಗಳಲ್ಲಿ, ಗುಡ್ಡ ಕಾಡುಗಳಲ್ಲಿ ಅಲೆದಾಡುವಾಗ ಪಾದರಕ್ಷೆಯನ್ನು ಧರಿಸಬೇಕು.
  • ಕಾಲಕಾಲಕ್ಕೆ ಕುಟುಂಬ ವೈದ್ಯರ ಸಲಹೆ ಮತ್ತು ಮಾರ್ಗದರ್ಶನ ಅತೀ ಅಗತ್ಯ. ಚರ್ಮದಲ್ಲಿನ ತುರಿಕೆ, ಕಡಿತ ಮತ್ತು ಪದೇ ಪದೇ ಕಾಡುವ ಹೊಟ್ಟೆನೋವು, ಗುದದ್ವಾರದ ಬಳಿ ತುರಿಕೆ (ಮಲವಿಸರ್ಜನೆಯ ಸಮಯದಲ್ಲಿ), ಮಕ್ಕಳಲ್ಲಿ ಹಸಿವಿಲ್ಲದಿರುವುದು, ಅಜೀರ್ಣ ಮುಂತಾದ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣವೇ ಕುಟುಂಬ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಳ್ಳಬೇಕು.

Similar News