ಸೇನಾ ಸ್ಮಾರಕ ಉದ್ಘಾಟನೆಗೆ ರಾಜನಾಥ್ ಸಿಂಗ್ ಗೈರು: ನಿವೃತ್ತ ಸೇನಾಧಿಕಾರಿಗಳ ಆಕ್ರೋಶ

Update: 2023-02-17 02:58 GMT

ಬೆಂಗಳೂರು: ನಗರದಲ್ಲಿ ಫೆಬ್ರುವರಿ 14ರಂದು ನಡೆದ ರಾಷ್ಟ್ರೀಯ ಸೇನಾ ಸ್ಮಾರಕ ಉದ್ಘಾಟನಾ ಸಮಾರಂಭಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೈರುಹಾಜರಾಗಿರುವ ಬಗ್ಗೆ ಸೇನೆಯ ನಿವೃತ್ತ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಸೇನಾ ನಿವೃತ್ತರ ಸಂಘದ ಸಂಚಾಲಕ ಕರ್ನಲ್ ಎಸ್.ಎಸ್.ರಾಜನ್ ಈ ಬಗ್ಗೆ ಹೇಳಿಕೆ ನೀಡಿ, ರಕ್ಷಣಾ ಸಚಿವರ ಕ್ರಮವನ್ನು ಖಂಡಿಸಿದ್ದಾರೆ. ಸೇನಾ ನಿವೃತ್ತರ ಸಿಟ್ಟು ಹಾಗೂ ಆಕ್ರೋಶದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

2019ರಲ್ಲಿ ಪುಲ್ವಾಮಾ ದಾಳಿ ನಡೆದ ದಿನವಾದ ಫೆಬ್ರುವರಿ 14ರಂದೇ ಸೇನಾ ಸ್ಮಾರಕ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು. ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಯೋಧರಿಗೆ ಗೌರವ ಸಲ್ಲಿಸುವ ಸಂಕೇತವಾದ ಈ ಸ್ಮಾರಕವನ್ನು ವೀರಗಲ್ಲಿಗೆ ಪುಷ್ಪಗುಚ್ಛ ಇರಿಸುವ ಮೂಲಕ ಉದ್ಘಾಟಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಪುಲ್ವಾಮಾ ಹುತಾತ್ಮರ ಕುಟುಂಬದವರು ಹಾಗೂ ಭಾರತೀಯ ಸೇನೆಯ 100ಕ್ಕೂ ಅಧಿಕ ನಿವೃತ್ತ ಯೋಧರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಒಂದು ಗಂಟೆಗೂ ಕಾಲ ಎಲ್ಲರೂ ಕಾದ ಬಳಿಕ ಕರ್ನಾಟಕ ರಾಜ್ಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕರ್ನಲ್ ರಾಜನ್ ಅವರಿಗೆ ಮಾಹಿತಿ ನೀಡಿ ಕಾರ್ಯಕ್ರಮ ರದ್ದಾಗಿದೆ ಎಂದು ತಿಳಿಸಿದರು.

"ನನ್ನ ಆರಂಭಿಕ ಅಭಿಪ್ರಾಯವೆಂದರೆ ಗೌರವಾನ್ವಿತ ರಕ್ಷಣಾ ಸಚಿವರೇ, ನಿಮಗಿದು ನಾಚಿಕೆಗೇಡು. ತಮ್ಮ ಪ್ರಾಣ ತ್ಯಾಗ ಮಾಡಿ ಯೋಧರಿಗೆ ಮತ್ತು ಅವರ ವಿಧವಾ ಪತ್ನಿಯರಿಗೆ ನೀವು ಸಲ್ಲಿಸುವ ಗೌರವ ಇದುವೇ? ಈ ವೀರಗಲ್ಲು 22 ಸಾವಿರ ಯೋಧರ ಆತ್ಮವನ್ನು ಪ್ರತಿನಿಧಿಸುವಂಥದ್ದು. ಅವರ ಹೆಸರು ಕಲ್ಲಿನಲ್ಲಿ ಕೆತ್ತಲಾಗಿದೆ. ನಿಮಗೆ ಸೈನಿಕರು ಎಂದರೆ ಏನೂ ಅಲ್ಲ. ದೇಶಕ್ಕಾಗಿ ಸೈನಿಕರು ಬಲಿದಾನ ಮಾಡಿದ್ದು ಏನೂ ಅಲ್ಲ; ಸೈನಿಕರ ವಿಧವಾ ಪತ್ನಿಯರ ಬಗ್ಗೆಯೂ ಗೌರವ ಇಲ್ಲ. ವೀರಗಲ್ಲು ಉದ್ಘಾಟನೆಗೆ ನೀವು ಆಗಮಿಸುವ ಭರವಸೆ ನೀಡಿದ ಬಳಿಕ ನೀವು ಬರಲೇಬೇಕಿತ್ತು" ಎಂದು ಕರ್ನಲ್ ರಾಜನ್ ಹೇಳಿದ್ದಾರೆ.

ವನ್ ರ್ಯಾಂಕ್ ವನ್ ಪೆನ್ಷನ್ ಯೋಜನೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸೈನಿಕರನ್ನು ಚದುರಿಸಲು ದೆಹಲಿ ಪೊಲೀಸರನ್ನು ಅಂದು ಕಳಿಸಿದ್ದು ರಾಜನಾಥ್ ಎಂದು ಅವರು ಉಲ್ಲೇಖಿಸಿದ್ದಾರೆ. ನಿವೃತ್ತ ಯೋಧರನ್ನು ಚದುರಿಸಲು ಗೃಹಸಚಿವರಾಗಿ ಪೊಲೀಸ್ ಗೂಂಡಾಗಳನ್ನು ಕಳುಹಿಸಿದ್ದು ನಿವು ಎನ್ನುವುದನ್ನು ನಾವು ಮರೆತಿಲ್ಲ. ಅವರು ನಮ್ಮ ಪದಕಗಳನ್ನು ಕಿತ್ತರು, ಅಂಗಿ ಹರಿದರು, ನಿಮ್ಮಿಂದ ಹೆಚ್ಚಿನದೇನನ್ನು ನಿರೀಕ್ಷಿಸಲು ಸಾಧ್ಯ? ನೀವು ಒಳ್ಳೆಯ ರಾಜಕಾರಣಿ; ಆದರೆ ಹೆಚ್ಚು ದಿನ ರಾಜಕಾರಣದಲ್ಲಿ ಉಳಿಯುವುದಿಲ್ಲ, ಜೈಹಿಂದ್" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Similar News