×
Ad

​ನಾರಾಯಣಗುರು ಅಭಿವೃದ್ಧಿ ನಿಗಮ ಮಾಡದೆ ಬಜೆಟ್‌ನಲ್ಲಿ ಬಿಲ್ಲವರಿಗೆ ಮೋಸ : ಪದ್ಮರಾಜ್ ಆರೋಪ

Update: 2023-02-17 21:05 IST

ಮಂಗಳೂರು: ಬಿಲ್ಲವ ಈಡಿಗದ ೨೬ ಒಳಜಾತಿಗಳುಳ್ಳ ಸಮುದಾಯಕ್ಕೆ  ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಬಜೆಟ್‌ನಲ್ಲಿ ಘೋಷಣೆ ಮಾಡದೆ ಸಮುದಾಯಕ್ಕೆ ಮುಖ್ಯಮಂತ್ರಿ ಸಹಿತ ಸಚಿವರು ಸಮುದಾಯಕ್ಕೆ ಮೋಸ ಮಾಡಿದ್ದಾರೆ ಎಂದು  ಶ್ರೀ ಗುರುಬೆಳದಿಂಗಳು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಪದ್ಮರಾಜ್ ಆರ್. ಆರೋಪಿಸಿದರು.

ನಗರದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾರಾಯಣಗುರು ನಿಗಮ ಸ್ಥಾಪನೆ ಮಾಡಬೇಕು ಎಂಬುದು ನಾಲ್ಕು ವರ್ಷಗಳಿಂದ ನಾವು ಹೋರಾಟ ಮಾಡಿಕೊಂಡು ಬಂದಿದ್ದೆವು. ಆದರೆ ಸರಕಾರ ಮುತುವರ್ಜಿ ವಹಿಸದಿದ್ದುದರಿಂದ ಜನವರಿಯಲ್ಲಿ ಸಮಾವೇಶ ಮಾಡಲು ತಯಾರಿ ಮಾಡಿದೆವು. ಆಗ ನಿಗಮವನ್ನು ಬಜೆಟ್‌ನಲ್ಲಿ ಘೋಷಣೆ ಮಾಡಲಾಗುತ್ತದೆ ಸಚಿವರು ಭರವಸೆ ನೀಡಿದ್ದರಿಂದ ಸಮಾವೇಶ ಕೈಬಿಟ್ಟಿದ್ದೆವು. ಜ.೫ರಂದು ಸಚಿವ ಸುನಿಲ್ ಕುಮಾರ್ ಮೂಲಕ ಸಿಎಂಗೆ ಮನವಿ ನೀಡಲಾಯಿತು. ನಿಗಮ ಘೋಷಣೆ ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದ್ದರು. ಆದರೆ ಇಂದಿನ ಬಜೆಟ್‌ನಲ್ಲಿ ನಿಗಮ ಘೋಷಣೆ ಮಾಡದೆ ಅನ್ಯಾಯ ಎಸಗಿದ್ದಾರೆ ಎಂದರು.

ನಾರಾಯಣ ಗುರು ವಿಚಾರ ವೇದಿಕೆಯ ರಾಜಾಧ್ಯಕ್ಷ ಸತ್ಯಜಿತ್ ಸುರತ್ಕಲ್‌ನ ಮಾತನಾಡಿ ೧೮ ವರ್ಷ ಹಿಂದೆ ಶೇಂದಿ ನಿಷೇಧ ಜಾರಿಯಾದಾಗಲೇ ನಿಗಮ ಆಗಬೇಕಿತ್ತು. ಮುಂದಿನ ಬಜೆಟಲ್ಲಿ ನಿಗಮ ಘೋಷಿಸುವುದಾಗಿ ಸಿಎಂ ತಿಳಿಸಿದ್ದರು. ಅವಾಗ ಬಿಜೆಪಿಯ  ರಾಜ್ಯಾಧ್ಯಕ್ಷರು, ಸಚಿವ ಸುನಿಲ್ ಕುಮಾರ್ ಕೂಡ ಇದ್ದರು. ಆದರೆ ಇಂದು ಬೊಮ್ಮಾಯಿ ಮಾತು ತಪ್ಪಿದ್ದಾರೆ. ಇತ್ತೀಚೆಗೆ ಪ್ರಣವ ಪಾದಯಾತ್ರೆ ಸಮಾರೋಪದಲ್ಲಿ ಕೂಡ ನಿಗಮ ಮಾಡುತ್ತೇವೆ ಎಂದು ಸಚಿವರು ಭರವಸೆ ನೀಡಿದ್ದರು. ಈ ಬಜೆಟ್‌ನಲ್ಲಿ ಘೋಷಣೆಯಾಗದ ನಿಗಮವು ಮುಂದೆ ಮರೀಚಿಕೆಯಾಗಿದೆ. ಬಜೆಟ್ ಘೋಷಣೆ ಮಾಡಿದ್ದರೆ ಸಾಕಿತ್ತು. ಮುಂದೆ ಯಾವ ಸರಕಾರ ಬಂದರೂ ನಿಗಮ ಅಧಿಕೃತವಾಗಿ ಇರುತ್ತಿತ್ತು ಎಂದರು.

ನಾರಾಯಣ ಗುರು ವಸತಿ ಶಾಲೆ ಎಲ್ಲ ಸಮಾಜಕ್ಕೆ ಸಂಬಂಧಿಸಿದ್ದಾಗಿದೆ. ಇದರಿಂದ ಬಿಲ್ಲವ ಸಮಾಜದ ಬದುಕಿನ ಏಳಿಗೆ ಆಗಲ್ಲ. ಶೈಕ್ಷಣಿಕ, ಆರ್ಥಿಕ ಏಳಿಗೆಗೆ ನಿಗಮ ಅಗತ್ಯವಾಗಿತ್ತು. ೧೫ ಜಿಲ್ಲೆಗಳಲ್ಲಿ ನಾರಾಯಣ ಗುರು ವಿಚಾರ ವೇದಿಕೆಯ ಸಂಘಟನೆ ಇದೆ. ರಾಜ್ಯಾದ್ಯಂತ ಹೋರಾಟದ ಶಕ್ತಿ ಇದೆ. ಹಾಗಾಗಿ ಹೋರಾಟ ಮುಂದುವರಿಸುತ್ತೇವೆ. ಅದಕ್ಕಿಂತ ಮೊದಲು ಸರಕಾರದಿಂದ ಆದ ಲೋಪ ಸರಿಪಡಿಸಬೇಕು. ಫೆ.೨೪ರವರೆಗೆ ನಡೆಯುವ ಅಧಿವೇಶನ ದಲ್ಲಿ ನಿಗಮ ಘೋಷಿಸಿ ೫೦೦ ಕೋ.ರೂ. ಮೀಸಲಿಡಬೇಕು. ಇಲ್ಲದಿದ್ದರೆ ಸರಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂಗಾರಪ್ಪ ಮತ್ತು ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಬೇಕು. ಅಲ್ಲದೆ ಸಮುದಾಯದ ಎಲ್ಲಾ ಬೇಡಿಕೆಗಳಿಗೆ ಮನ್ನಣೆ ನೀಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಲ್ಲವ ಸಮುದಾಯದ ಮುಖಂಡರಾದ ಅಕ್ಷಿತ್ ಸುವರ್ಣ, ದೇವೇಂದ್ರ ಪೂಜಾರಿ, ಸೂರ್ಯಕಾಂತ, ಜಯಶ್ರೀ ಸುವರ್ಣ, ರಾಜೇಂದ್ರ ಚಿಲಿಂಬಿ ಉಪಸ್ಥಿತರಿದ್ದರು.

Similar News