ಬಾಲಕ ನಾಪತ್ತೆ
ಮಂಗಳೂರು, ಫೆ.23: ನಗರದ ಬಾಲಮಂದಿರಕ್ಕೆ ದಾಖಲಾಗಿದ್ದ ಬಾಗಲಕೋಟೆ ಮೂಲದ ಬಸವರಾಜ್ (17) ಎಂಬಾತನನ್ನು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಆತ ಅಲ್ಲಿಂದ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೋಂದೆಲ್ ಕೃಷ್ಣನಗರ ಬಾಲಮಂದಿರಕ್ಕೆ ಫೆ.20ರಂದು ಈತನನ್ನು ದಾಖಲಿಸಲಾಗಿತ್ತು. ಅಂದು ರಾತ್ರಿ 7ಕ್ಕೆ ಸಾಬೂನು ತಿಂದು ಅಸ್ವಸ್ಥನಾಗಿದ್ದ. ತಕ್ಷಣ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಾಗ ಪರೀಕ್ಷಿಸಿದ ವೈದ್ಯರು ಆರೋಗ್ಯದ ಮೇಲೆ ನಿಗಾ ಇರಿಸಲು ಒಳರೋಗಿಯಾಗಿ ದಾಖಲಿಸಿದ್ದರು. ಫೆ.21ರಂದು ರಾತ್ರಿ 7:15ರ ವೇಳೆಗೆ ಕೈ ತೊಳೆಯಲಿದೆ ಎಂದು ಹೇಳಿ ಹೊರಗಡೆ ಬಂದ ಆತ, ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ.
ಆಸ್ಪತ್ರೆಯ ಕಾವಲುಗಾರರನ್ನು ವಿಚಾರಿಸಿ ಸುತ್ತಮುತ್ತ ಹುಡುಕಿದರೂ ಪತ್ತೆಯಾಗಿಲ್ಲ. ಅಲ್ಲಿಂದ ಮನೆಗೂ ಹೋಗದೆ ನಾಪತ್ತೆಯಾಗಿದ್ದಾನೆ. ಈ ಕುರಿತು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 5 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ನೀಲಿ ಬಣ್ಣದ ಉದ್ದ ಕೈ ಟಿ-ಶರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದು, ಕನ್ನಡ ಭಾಷೆ ಬಲ್ಲವನಾಗಿದ್ದಾನೆ. ಈತನ ಬಗ್ಗೆ ಮಾಹಿತಿ ಇದ್ದಲ್ಲಿ ಪಾಂಡೇಶ್ವರ ಠಾಣೆ (0824-2220518) ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.