ಮಂಗಳೂರು | ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್‌ ಕೊಲಾಸೊರಿಗೆ ನಾಗರಿಕ ಸನ್ಮಾನ

Update: 2023-02-24 10:46 GMT

ಮಂಗಳೂರು, ಫೆ.24: ಲಂಡನ್‌ನ ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌ ನಿಂದ ಶ್ರೇಷ್ಠತಾ ಪ್ರಮಾಣಪತ್ರ ಪಡೆದ ಕೊಡುಗೈ ದಾನಿ, ಸಮಾಜ ಸೇವಾಸಕ್ತ ಡಾ.ರೊನಾಲ್ಡ್‌ ಕೊಲಾಸೊ ಹಾಗೂ ಅವರ ಪತ್ನಿ ಜೀನ್ ಕೊಲಾಸೊ ಅವರನ್ನು ನಗರದ ಫಾದರ್ ಮುಲ್ಲರ್ ಕನ್ವೆನ್ಶನ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಬೆಂಗಳೂರು ಕ್ರೈಸ್ತ ಧರ್ಮಪ್ರಾಂತದ ಆರ್ಚ್ ಬಿಷಪ್ ಅತಿ ವಂ.ಡಾ.ಪೀಟರ್‌ ಮಚಾದೋ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅದ್ದೂರಿ ಕಾರ್ಯಕ್ರಮಕ್ಕೆ ಡಾ.ರೊನಾಲ್ಡೊ ಕೊಲಾಸೋರನ್ನು ಗಣ್ಯರ ಸಮ್ಮುಖ ಭವ್ಯ ಮೆರವಣಿಗೆಯಲ್ಲಿ ಸಭಾ ಕಾರ್ಯಕ್ರಮದ ವೇದಿಕೆಗೆ ಕರೆತರಲಾಯಿತು. ಅದಲ್ಲದೆ ಡಾ. ರೊನಾಲ್ಡೊ ಕೊಲಾಸೋ ಸಮಾಜಸೇವಾ ಕಾರ್ಯ ಸಹಿತ ನಾನಾ ಕ್ಷೇತ್ರದ ಸಾಧನೆಗಳ ಬಗ್ಗೆ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ಅಭಿನಂದನಾ ಭಾಷಣ ಮಾಡಿದ ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಬಿಷಪ್ ಅತಿ ವಂ. ಡಾ.ಪೀಟರ್‌ ಪೌಲ್‌ ಸಲ್ದಾನ, "ನನ್ನಲ್ಲಿ ಏನೂ ಇಲ್ಲ ಎನ್ನದೆ ಎಲ್ಲರೂ ನನ್ನವರು ಎಂಬ ಭಾವನೆಯ ನಿಷ್ಕಲ್ಮಶ ಮನಸ್ಸಿನ ಡಾ.ರೊನಾಲ್ಡ್ ಕೊಲಾಸೋ ತನ್ನ ಸಂಪತ್ತನ್ನು ಕೂಡಿಡದೆ ಅರ್ಹರಿಗೆ ಹಂಚಿಕೊಂಡು ಬದುಕುವ ಗುಣ ಸ್ವಭಾವದವರು. ಯಾರು ಯಾವಾಗ ಬೇಕಾದರೂ ಅವರ ಬಳಿ ಹೋದರೆ ಮುಗುಳ್ನಗೆಯಿಂದ ಹಿಂದಿರುಗುವಂತೆ ಮಾಡುತ್ತಾರೆ‌. ಅದು ಅವರ ವ್ಯಕ್ತಿತ್ವಕ್ಕೆ ಸಾಕ್ಷಿ ಎಂದರು.

ಸಹಾಯ ಮಾಡುವಾಗ ಯಾವತ್ತೂ ಗಡಿ, ಭಾಷೆ, ಜಾತಿ, ಧರ್ಮ ನೋಡದೆ ಎಲ್ಲರಿಗೂ ನೆರವು ನೀಡುವ ಡಾ.ರೊನಾಲ್ಡ್ ಕೊಲಾಸೋ ನಮ್ಮ ಮಣ್ಣಿನ ಮಗ ಎನ್ನಲು ಹೆಮ್ಮೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಉಡುಪಿ ಕ್ರೈಸ್ತ ಧರ್ಮಪ್ರಾಂತದ ಬಿಷಪ್‌ ಅತಿ ವಂ.ಡಾ.ಜೆರಾಲ್ಡ್‌ ಐಸಾಕ್‌ ಲೋಬೊ, ಬೆಳ್ತಂಗಡಿ ಧರ್ಮಪ್ರಾಂತದ ಬಿಷಪ್ ಡಾ. ಲಾರೆನ್ಸ್‌ ಮುಕ್ಕುಝಿ, ಶಿವಮೊಗ್ಗ ಧರ್ಮಪ್ರಾಂತದ ಬಿಷಪ್ ಅತಿ ವಂ.ಡಾ. ಫ್ರಾನ್ಸಿಸ್‌ ಸೆರ್ರಾವೋ, ರಾಮಕೃಷ್ಣ ಮಠ ಮಂಗಳೂರು ಇದರ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್, ಯೆನೆಪೊಯ ವಿಶ್ವವಿದ್ಯಾನಿಲಯದ ಚಾನ್ಸಲರ್ ಡಾ.ಯೆನೆಪೊಯ ಅಬ್ದುಲ್ಲ ಕುಂಞಿ,  ತೇಜಸ್ವಿನಿ ಆಸ್ಪತ್ರೆಯ ಅಧ್ಯಕ್ಷ ಡಾ.ಶಾಂತರಾಮ ಶೆಟ್ಟಿ, ಬ್ರಹ್ಮ ಕುಮಾರಿ ಸೆಂಟರ್‌ನ ಬಿ.ಕೆ.ವಿಶ್ವೇಶ್ವರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ಫಾ.ಅಲೋಶಿಯಸ್ ‌ಕುವೆಲ್ಲೋ, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಂಗಳೂರು ನಾಗರಿಕ ಸನ್ಮಾನ ಸಮಿತಿಯ ಸದಸ್ಯರಾದ ಸುರೇಶ್ ಬಲ್ಲಾಳ್, ಯು.ಟಿ.ಇಫ್ತಿಕಾರ್ ಅಲಿ, ವಾಲ್ಟರ್ ನಂದಳಿಕೆ, ಲೂಯಿ ಪಿಂಟೊ, ಡೆನ್ನಿಸ್ ಡಿಸಿಲ್ವ, ಸಂತೋಷ್ ಡಿಕೋಸ್ತ ಮತ್ತಿತರರು ಉಪಸ್ಥಿತರಿದ್ದರು.

ಮಂಗಳೂರು ನಾಗರಿಕ ಸನ್ಮಾನ ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ಜೆ.ಆರ್.ಲೋಬೋ ಸ್ವಾಗತಿಸಿದರು. ಚಿತ್ರನಟಿ ಅಪರ್ಣಾ ಕಾರ್ಯಕ್ರಮ ನಿರೂಪಿಸಿದರು.


ಡಾ.ರೊನಾಲ್ಡ್ ಕೊಲಾಸೊ - ಯಶಸ್ವಿ ಉದ್ಯಮಿ, ಅನನ್ಯ ಸಮಾಜ ಸೇವಕ, ಅಪರೂಪದ ವ್ಯಕ್ತಿತ್ವ

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯವರಾದ ಡಾ.ರೊನಾಲ್ಡ್ ಕೊಲಾಸೊ  1975ರಲ್ಲಿ ಒಮನ್ ದೇಶದಲ್ಲಿ ಅಕೌಂಟೆಂಟ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದರು. ತಮ್ಮ ದಕ್ಷತೆ ಹಾಗೂ ನಿಷ್ಠಾವಂತ ದುಡಿಮೆಯಿಂದಾಗಿ ಗಲ್ಫ್ ನ ಎಂಟು ಹಾಗೂ ಯುರೋಪ್ ನ ಹಲವು ದೇಶಗಳಲ್ಲಿ ಅಕೌಂಟ್ಸ್ ಮುಖ್ಯಸ್ಥರಾಗಿ, ಆಡಳಿತ ವ್ಯವಸ್ಥಾಪಕರಾಗಿ , ಫೈನಾನ್ಸಿಯಲ್ ಕಂಟ್ರೋಲರ್ ಆಗಿ ಭಡ್ತಿ ಪಡೆಯುತ್ತಾ ಹೋದರು. ಗ್ರೀಸ್ ನ ಅಥೆನ್ಸ್ ನಲ್ಲಿರುವ ಸಿಸಿಐಸಿಎಲ್, ಜರ್ಮನಿಯ ಮನ್ನೆಸ್ ಮನ್ ಹಾಗೂ ಮಿಲಾನೊದ ಸೈಪೇಮ್ ಎಂಬ ಮೂರು ಬೃಹತ್ ಬಹುರಾಷ್ಟ್ರೀಯ ಕಂಪೆನಿಗಳ ಒಕ್ಕೂಟದ ಕಮರ್ಷಿಯಲ್ ಸಿಇಒ ಆದರು.

ಆ ಸಂದರ್ಭದಲ್ಲಿ ಡಾ. ಕೊಲಾಸೊ ಅವರ ವೃತ್ತಿಪರತೆಯನ್ನು ಗಮನಿಸಿ  ಪ್ರಮುಖ ಪೆಟ್ರೋಲಿಯಮ್ ಹಾಗು ಗ್ಯಾಸ್ ಯೋಜನೆಗಳು, ಟೌನ್ ಶಿಪ್ ಗಳು ಹಾಗು ವಿಮಾನ ನಿಲ್ದಾಣ ನಿರ್ಮಾಣದಂತಹ ಬೃಹತ್ ಯೋಜನೆಗಳ ಉಸ್ತುವಾರಿಯನ್ನು ಅವರಿಗೆ ವಹಿಸಲಾಯಿತು. ತನಗೆ ವಹಿಸಿದ ಪ್ರತಿಯೊಂದು ಹುದ್ದೆಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ ರೊನಾಲ್ಡ್ ಕೊಲಾಸೊ ಉದ್ಯಮ ರಂಗಕ್ಕೆ ಕಾಲಿಟ್ಟರು. ಅಲ್ಲಿಂದ ಮತ್ತೆ ಅವರು ಹಿಂದಿರುಗಿ ನೋಡಲೇ ಇಲ್ಲ. ಅಪಾರ ಬುದ್ಧಿವಂತಿಕೆ, ನಿಷ್ಠೆ, ಕಠಿಣ ಪರಿಶ್ರಮ  ಹಾಗು ಶಿಸ್ತು ಅವರಿಗೆ ಉದ್ಯಮ ಕ್ಷೇತ್ರದಲ್ಲಿ ಭಾರೀ ಯಶಸ್ಸು ತಂದಿತು. ಅವರು ಕೈ ಹಾಕಿದ ಎಲ್ಲ ಉದ್ಯಮಗಳಲ್ಲೂ ಯಶಸ್ಸು ಅವರ ಪಾಲಾಯಿತು. 

ಉದ್ಯೋಗ, ಉದ್ಯಮ ಎರಡರಲ್ಲೂ ಅಸಾಮಾನ್ಯ ಯಶಸ್ಸು ಕಂಡ ರೊನಾಲ್ಡ್ ಕೊಲಾಸೋ ಅವರು ಸಮಾಜ ತನಗೆ ನೀಡಿದ ಹಾಗೆಯೇ ತಾನೂ ಸಮಾಜಕ್ಕೆ ನೀಡಬೇಕು ಎಂದು ಪಣತೊಟ್ಟು ಸೇವಾ ಚಟುವಟಿಕೆಗಳಿಗೆ ಧುಮುಕಿದರು. ಧರ್ಮ, ಜಾತಿ, ಭಾಷೆ, ಲಿಂಗ, ಪ್ರದೇಶಗಳ ಭೇದವಿಲ್ಲದೆ ಎಲ್ಲೆಲ್ಲಿ ಜನರಿಗೆ ಏನೇನು ಅಗತ್ಯವಿದೆಯೋ ಅದನ್ನು ಒದಗಿಸುತ್ತಾ ಹೋದರು. ಆ ಪೈಕಿ ಸಾರ್ವಜನಿಕರಿಗೆ ಪ್ರಯೋಜನವಾಗುವ ಮೂಲಭೂತ ಸೌಲಭ್ಯಗಳನ್ನು ನಿರ್ಮಿಸಿ ಕೊಡುವಲ್ಲಿ ಅವರು ಅಪಾರ ಕಾಳಜಿ ವಹಿಸಿದರು. ಅದೆಷ್ಟೋ ಜನರು, ಸಂಸ್ಥೆಗಳು, ಸಂಘಟನೆಗಳಿಗೆ ಕೊಲಾಸೋ ನೆರವು ನೀಡಿದ್ದಾರೆ.  ಸರಕಾರಕ್ಕೆ ಹಲವಾರು ಕಚೇರಿ, ಕಟ್ಟಡಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಮಂದಿರ, ಮಸೀದಿ, ಚರ್ಚ್ ಗಳನ್ನೂ ಕಟ್ಟಿಸಿಕೊಟ್ಟಿದ್ದಾರೆ. ಕರ್ನಾಟಕ, ಗೋವಾ, ಮಹಾರಾಷ್ಟ್ರಗಳಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಅವರ ಸೇವೆಯ ವ್ಯಾಪ್ತಿ ಹಬ್ಬಿದೆ. ಬೆಂಗಳೂರು ಹೊರವಲಯದ ದೇವನಹಳ್ಳಿಯನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವಲ್ಲಿ ಅವರ ಪಾತ್ರ ಇತಿಹಾಸದಲ್ಲಿ ದಾಖಲಾಗಲಿದೆ. ಕೊಲಾಸೊ ಅವರ ಸೇವಾ ಚಟುವಟಿಕೆಗಳ ವ್ಯಾಪ್ತಿ ಅದೆಷ್ಟು ವಿಶಾಲವಾಗಿತ್ತು ಎಂದರೆ ಅದನ್ನು ನೋಡಿ ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಸೇವಾ ಚಟುವಟಿಕೆಗಳನ್ನು ಯೋಜಿಸಿದವು. 

ಜನರಿಗೆ ನೆರವಾಗುವುದು, ಅವರ ಜೊತೆ ನಮ್ಮ ಸಂಪತ್ತನ್ನು ಹಂಚಿಕೊಳ್ಳುವುದರಿಂದ ನನಗೆ ಬಹಳ ತೃಪ್ತಿ, ಸಂತಸ ಹಾಗು ನೆಮ್ಮದಿ ಸಿಕ್ಕಿದೆ. ಇದರಿಂದ ನಮಗೆ ಧರ್ಮ ಕಲಿಸುವ ಮೌಲ್ಯಗಳ ಸಮೀಪ ಇರುವುದು ನನಗೆ ಸಾಧ್ಯವಾಗಿದೆ ಎನ್ನುತ್ತಾರೆ ಕೊಲಾಸೊ. ಅವರ ಪತ್ನಿ ಜೀನ್ ಕೊಲಾಸೊ ಅವರು ಪತಿಯ ಸೇವೆಯ ಹಂಬಲಕ್ಕೆ ಆಸರೆಯಾಗಿ ನಿಂತಿದ್ದಾರೆ. 

ಕೊಲಾಸೊ ಅವರು ಭೇಟಿ ನೀಡದ ದೇಶಗಳಿಲ್ಲ, ಒಡನಾಡದ ಪ್ರಭಾವಿಗಳು, ಗಣ್ಯರಿಲ್ಲ ಎಂಬಷ್ಟು ಅವರು ಜಗತ್ತಿನೆಲ್ಲೆಡೆ -ರಾಜಕೀಯ  ಸಾಮಾಜಿಕ ವಲಯದಲ್ಲಿ  ಚಿರಪರಿಚಿತರು. ಅಮೆರಿಕದ, ಆಸ್ಟ್ರೇಲಿಯಾ, ಬ್ರಿಟನ್, ಯುಎಇಯಂತಹ  ದೇಶಗಳ ಅಧ್ಯಕ್ಷರು, ಪ್ರಧಾನಿಗಳ ಕಾರ್ಯಕ್ರಮಗಳಿಗೆ ಕೊಲಾಸೋ ಅವರಿಗೆ ವಿಶೇಷ ಆಹ್ವಾನವಿರುತ್ತದೆ. ಭಾರತದ ಎಲ್ಲ ರಾಜಕೀಯ ಪಕ್ಷಗಳ ವರಿಷ್ಠರು ಅವರ ಜೊತೆ ಒಡನಾಟ ಇಟ್ಟುಕೊಂಡು ಅವರೊಂದಿಗೆ ಸಲಹೆ ಪಡೆಯುತ್ತಾರೆ. ಅವರಿಗೆ ಬಂದಿರುವ ಅಂತರ್ ರಾಷ್ಟ್ರೀಯ ಪ್ರಶಸ್ತಿಗಳು, ಬಿರುದುಗಳು ಹಾಗೂ  ಸನ್ಮಾನಗಳು ಅಸಂಖ್ಯ.

Similar News