×
Ad

ಸೋಲಿನ ಭಯದಿಂದಲೇ ಬಾದಾಮಿಯಿಂದ ಕೋಲಾರಕ್ಕೆ ರನ್ನಿಂಗ್ ರೇಸ್ ಮಾಡುತ್ತಿರುವ ಸಿದ್ದರಾಮಯ್ಯ: ಬಿಜೆಪಿ ಲೇವಡಿ

Update: 2023-02-24 18:40 IST

ಬೆಂಗಳೂರು, ಫೆ. 24: ‘ಗೆದ್ದೆತ್ತಿನ ಬಾಲ ಹಿಡಿದು ಓಡುವ ಬಾದಾಮಿ ಶಾಸಕ ಸಿದ್ದರಾಮಯ್ಯನವರು ತಮ್ಮ ಹಳೆ ಚಾಳಿ ಮುಂದುವರಿಸಿದ್ದಾರೆ. ಸೋಲುವ ಭಯದಲ್ಲಿ ಚಾಮುಂಡೇಶ್ವರಿ ಬಿಟ್ಟು ಬಾದಾಮಿಗೆ ಓಡಿದ್ದರು. ಬಾದಾಮಿಯಲ್ಲಿ ಸೋಲುವ ಆತಂಕದಲ್ಲಿ ಕೋಲಾರಕ್ಕೆ ರನ್ನಿಂಗ್ ರೇಸ್ ಮಾಡುತ್ತಿದ್ದಾರೆ. ಇದಕ್ಕೆ ಇವರು ಕೊಟ್ಟ ಸಬೂಬು ಕ್ಷೇತ್ರ ಬಹು ದೂರ ದೂರ’ ಎಂದು ಬಿಜೆಪಿ ಟೀಕಿಸಿದೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಮೈಸೂರಿನಿಂದ 550 ಕಿ.ಮಿ, ಬೆಂಗಳೂರಿನಿಂದ 460 ಕಿ.ಮಿ ದೂರುವಿರುವ ಬಾದಾಮಿ ಅಂದು ಸಿದ್ದರಾಮಯ್ಯನವರಿಗೆ ಬಹಳ ಸಮೀಪವಾಗಿತ್ತು. ಇಂದು ಬಾದಾಮಿಗೆ ಹೋಗಲು ವಯಸ್ಸಾಗಿದೆ ಎನ್ನುತ್ತ ಸಿಎಂ ಕನಸು ಕಾಣುವವರು ಕರ್ನಾಟಕದ 1,91,791 ಚದರ ಕಿಲೋ ಮೀಟರ್ ವ್ಯಾಪ್ತಿಯನ್ನು ಸುತ್ತಿ ಅಭಿವೃದ್ಧಿ ಮಾಡುತ್ತಾರೆ ಎನ್ನುವುದು ಹಗಲು ಗನಸು’ ಎಂದು ಲೇವಡಿ ಮಾಡಿದೆ.

‘ಸಿದ್ದರಾಮಯ್ಯನವರು ಬಾದಾಮಿ ದೂರ ಎನ್ನುವ ಕುಂಟು ನೆಪದಿಂದ ಕ್ಷೇತ್ರವನ್ನು 5 ವರ್ಷ ಕಡೆಗಣಿಸಿದರು. ಈ ಪರಿಣಾಮವೇ ಇಂದು ಸೋಲಿನ ಭಯ ಕನಸ್ಸಿನಲ್ಲೂ ಕಾಡಿದೆ. ನಿಮಗೆ ನಿಜಕ್ಕೂ ತಾಕತ್ತು ಧಮ್ಮು ಇದ್ದರೆ ಬದಾಮಿಯಲ್ಲಿ ಸ್ಪರ್ಧಿಸಿ ಗೆದ್ದು ಇಡೀ ರಾಜ್ಯದ ಜನರಿಗೆ ನೀವೊಬ್ಬ ಜನನಾಯಕ ಎನ್ನುವುದನ್ನು ಸಾಬೀತುಪಡಿಸಿ’ ಎಂದು ಬಿಜೆಪಿ ಸವಾಲು ಹಾಕಿದೆ.

‘ಚಾಮುಂಡೇಶ್ವರಿಯಿಂದ ವರುಣಾ, ವರುಣಾದಿಂದ ಚಾಮುಂಡೇಶ್ವರಿ, ಚಾಮುಂಡೇಶ್ವರಿಯಿಂದ ಬಾದಾಮಿ, ಬಾದಾಮಿಯಿಂದ ಕೋಲಾರ. ಸಿದ್ದರಾಮಯ್ಯನವರೇ, ಇದುವರೆಗೂ ಒಂದೇ ಒಂದು ಕ್ಷೇತ್ರದ ಜನರಿಗೆ ಪ್ರಿಯವಾಗದ ನೀವು, ಇಡೀ ರಾಜ್ಯದಲ್ಲಿ ಎಲ್ಲೇ ನಿಂತರೂ ಗೆಲ್ಲುತ್ತೇನೆ ಎನ್ನುವ ದಾಷ್ಟ್ರ್ಯವನ್ನು ತೋರುತ್ತಿರುವುದು ವಿಪರ್ಯಾಸ’ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Similar News