ಬಿಎಂಟಿಸಿಗೆ 1,300 ವಿದ್ಯುತ್ ಚಾಲಿತ ಬಸ್ ಜೋಡಣೆ: ಸಿಎಂ ಬೊಮ್ಮಾಯಿ

Update: 2023-02-24 15:24 GMT

ಬೆಂಗಳೂರು, ಫೆ.24: ಕೇಂದ್ರ ಸರಕಾರದ ಸಹಯೋಗದೊಂದಿಗೆ 1,300 ವಿದ್ಯುತ್ ಚಾಲಿತ ಬಸ್‍ಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಸೇವೆಗೆ ಜೋಡಿಸಲಾಗುತ್ತಿದೆ. ಪರಿಸರ ಹಾನಿಯನ್ನು ತಡೆಗಟ್ಟುವ ಎಲೆಕ್ಟ್ರಿಕಲ್ ಬಸ್ ಸೇವೆ ಜನರಿಗೆ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಶುಕ್ರವಾರ ಬಿಎಂಟಿಸಿ ವತಿಯಿಂದ ನಿರ್ಮಿಸಿರುವ ಕಲಾಸಿಪಾಳ್ಯ ನೂತನ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಎಂಟಿಸಿ ನಗರದ ಜನರಿಗೆ ಉತ್ತಮ ಸೇವೆ ಸಲ್ಲಿಸುತ್ತಿದೆ. ಮುಂಬರುವ ದಿನಗಳಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಬಿಎಂಟಿಸಿ ಪ್ರಮುಖ ಪಾತ್ರ ವಹಿಸಲಿದ್ದು, ಬಿಎಂಟಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವುದರಿಂದ ಬೆಂಗಳೂರಿನ ವಾಹನ ದಟ್ಟಣೆ ಕಡಿಮೆಯಾಗುತ್ತದೆ ಎಂದು ಹೇಳಿದರು.

ಕೋವಿಡ್ ನಿಂದಾಗಿ ಹಾಗೂ ಕೆಲವು ವರ್ಷಗಳಿಂದ ಬಿಎಂಟಿಸಿ ದರಗಳನ್ನು ಹೆಚ್ಚಿಸದ ಕಾರಣ, ಬಿಎಂಟಿಸಿ ನಷ್ಟದಲ್ಲಿದೆ, ಕಳೆದ ಎರಡು ವರ್ಷಗಳಲ್ಲಿ ಸರಕಾರ 2915 ಕೋಟಿ ರೂ.ಗಳನ್ನು ಸಂಸ್ಥೆಗೆ ನೀಡಿರುವುದರಿಂದ, ಬಿಎಂಟಿಸಿ, ತನ್ನ ಸೇವೆಯನ್ನು ಸಲ್ಲಿಸಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು. 

ಮೆಟ್ರೋ ಸ್ಟೇಷನ್‍ಗೆ ಜೋಡಿಸುವ ಬಗ್ಗೆ ನಿರ್ಧಾರ: ಬಿಎಂಟಿಸಿ ಹಾಗೂ ಮೆಟ್ರೋ ಅಧಿಕಾರಿಗಳ ಜೊತೆ ಚರ್ಚಿಸಿ ಕಲಾಸಿಪಾಳ್ಯ ಬಸ್ ನಿಲ್ದಾಣವನ್ನು ಮೆಟ್ರೋ ಸ್ಟೇಷನ್ ಗೆ ಜೋಡಿಸುವ ಬಗ್ಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದ ಅವರು, ಬಿಎಂಟಿಸಿಯನ್ನು ಲಾಭದಾಯಕಗೊಳಿಸಲು ಶ್ರೀನಿವಾಸಮೂರ್ತಿ ಸಮಿತಿ ವರದಿಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಬಿಎಂಟಿಸಿ ನೌಕರರ ಕಲ್ಯಾಣಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ನೌಕರರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.

ಕಲಾಸಿಪಾಳ್ಯದ ಐತಿಹಾಸಿಕ ಬಸ್ ನಿಲ್ದಾಣವನ್ನು ಹೊಸದಾಗಿ ನಿರ್ಮಿಸಿರುವುದು ಸಂತೋಷ ತಂದಿದೆ. ಈ ಬಸ್ ನಿಲ್ದಾಣ ಬಹಳ ವರ್ಷಗಳಿಂದ ಜನರ ಸೇವೆ ಮಾಡಿಕೊಂಡು ಬಂದಿದೆ. ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್ ಸೇವೆ ಸುತ್ತಮುತ್ತಲಿನ ಗ್ರಾಮದವರು ಮತ್ತು ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಿರುವ ಬಸ್ ನಿಲ್ದಾಣ. ಇಲ್ಲಿನ ಸೌಲಭ್ಯಗಳನ್ನು ವ್ಯವಸ್ಥಿತಗೊಳಿಸಿ ನೂತನ ಬಸ್ ನಿಲ್ದಾಣ ನಿರ್ಮಿಸಿ ಜನರ ಸೇವೆಗೆ ಸಮರ್ಪಿಸಿರುವುದು ಜನರಿಗೆ ದೊಡ್ಡ ಅನುಕೂಲ ಕಲ್ಪಿಸಿದಂತಾಗಿದೆ ಎಂದರು.

ಕಂದಾಯ ಸಚಿವ ಆರ್.ಅಶೋಕ್, ತೋಟಗಾರಿಕಾ ಸಚಿವ ಮುನಿರತ್ನ, ಚಿಕ್ಕಪೇಟೆ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಮತ್ತಿತರರು ಉಪಸ್ಥಿತರಿದ್ದರು. 

Similar News