ಮದುವೆ ವೇಳೆ ಹೃದಯಾಘಾತದಿಂದ ಮೃತಪಟ್ಟ ವಧು: ಬದಲಿಗೆ ಕಿರಿಯ ಸಹೋದರಿಯನ್ನು ವಧುವಾಗಿಸಿದ ಕುಟುಂಬಸ್ಥರು

Update: 2023-02-25 10:14 GMT

ಭಾವನಗರ: ಮದುವೆಯ ಸಂತೋಷದ ದಿನದಂದೇ ಹೃದಯಾಘಾತದ ಕಾರಣದಿಂದ ವಧು ಮೃತಪಟ್ಟ ಘಟನೆಯು ಗುಜರಾತ್‌ನ ಭಾವನಗರದಲ್ಲಿ ನಡೆದಿದೆ. ಭಾವನಗರದ ಸುಭಾಶ್‌ ನಗರ ಎಂಬಲ್ಲಿ ಮದುವೆ ಸಮಾರಂಭದ ಮಧ್ಯೆಯೇ ಯುವತಿ ಮೃತಪಟ್ಟಿದ್ದಾರೆ. ಭಗವಾನೇಶ್ವರ ಮಹಾದೇವ ದೇವಸ್ಥಾನದ ಮುಂಭಾಗದಲ್ಲಿ ಈ ಅಹಿತಕರ ಘಟನೆ ನಡೆದಿದೆ. 

ಜಿನಾಭಾಯಿ ರಾಥೋಡ್ ಎಂಬವರ ಮಗಳು ಹೇತಾಲ್‌ ಎಂಬಾಕೆ ನಾರಿ ಗ್ರಾಮದ ರಾಣಾಭಾಯ್ ಬೂತಭಾಯ್ ಅಲ್ಗೋಟಾರ್ ಅವರ ಮಗ ವಿಶಾಲ್ ನನ್ನು ಮದುವೆಯಾಗುವ ಪ್ರಕ್ರಿಯೆಯಲ್ಲಿದ್ದರು. ಈ ವೇಳೆ ವಧು ಮೂರ್ಛೆ ಹೋದಳು ಎಂದು ತಿಳಿದು ಬಂದಿದೆ. ಬಳಿಕ ಆಸ್ಪತ್ರೆಗೆ ಸಾಗಿಸಿದಾಗ ಆಕೆ ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ. 

ಹೇತಾಲ್‌ನ ಸಾವಿನಿಂದ ಕುಟುಂಬ ಶೋಕದಲ್ಲಿದ್ದರೂ, ಮದುವೆಯ ಆಚರಣೆಯನ್ನು ಮುಂದುವರೆಸಲು ಸಂಬಂಧಿಕರು ಪರ್ಯಾಯ ಯೋಜನೆಯನ್ನು ಪ್ರಸ್ತಾಪಿಸಿದರು. ಅವರು ವಧುವಿನ ತಂಗಿಯನ್ನು ಮೃತಪಟ್ಟ ಸಹೋದರಿಯ ಸ್ಥಾನದಲ್ಲಿ ನಿಂತು ಮದುವೆಯಾಗಲು ಸೂಚಿಸಿದರು. ವಧುವಿನ ಮರಣದ ನಂತರ, ಕುಟುಂಬವು ಅವಳ ಸಹೋದರಿಯನ್ನು ವರನಿಗೆ ಮದುವೆ ಮಾಡಲು ನಿರ್ಧರಿಸಿತು ಮತ್ತು ಅವಳ ಕಿರಿಯ ಸಹೋದರಿಯೊಂದಿಗೆ ಮದುವೆಯ ಆಚರಣೆಗಳನ್ನು ಮುಂದುವರೆಸಿತು. ಸಮಾರಂಭ ಮುಗಿಯುವವರೆಗೂ ಹೇತಲ್ ಅವರ ಮೃತದೇಹವನ್ನು ಕೋಲ್ಡ್ ಸ್ಟೋರೇಜ್ ನಲ್ಲಿ ಇಡಲಾಗಿತ್ತು ಎಂದು ವರದಿಯಾಗಿದೆ.

ಭಾವನಗರ ನಗರದ ಕಾರ್ಪೊರೇಟರ್ ಮತ್ತು ಮಾಲ್ಧಾರಿ ಸಮಾಜದ ಮುಖಂಡ ಲಕ್ಷ್ಮಣಭಾಯ್ ರಾಥೋಡ್ ಘಟನೆಯನ್ನು ಅತ್ಯಂತ ದುಃಖಕರ ಎಂದು ಬಣ್ಣಿಸಿದ್ದಾರೆ. ಮಗಳ ಸಾವಿನಿಂದ ಕುಟುಂಬವು ಆಘಾತಕ್ಕೊಳಗಾಗಿದ್ದರೂ, ಸಮಾಜದವರು ವರ ಮತ್ತು ಅವರ ಕುಟುಂಬವನ್ನು ಬರಿಗೈಯಲ್ಲಿ ಕಳುಹಿಸದೆ ಮಾದರಿಯಾಗಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Similar News