ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಹತ್ಯೆ

Update: 2023-03-01 06:35 GMT

ಬೆಂಗಳೂರು: ಯುವಕನೋರ್ವ ಚೂರಿಯಿಂದ ಇರಿದು ಯುವತಿಯನ್ನು ಹತ್ಯೆ ಮಾಡಿರುವ ಘಟನೆ ನಗರದ ಜೀವನ್ ಭಿಮಾ ನಗರ ಠಾಣೆ ವ್ಯಾಪ್ತಿಯ ವಿಂಡ್ ಟನಲ್ ರಸ್ತೆಯಲ್ಲಿ ಮಂಗಳವಾರ ವರದಿಯಾಗಿದೆ. 

ದಿನಕರ್ ಬಂಧಿತ ಆರೋಪಿಯಾಗಿದ್ದು, ಪ್ರೀತಿ ನಿರಾಕರಿಸಿದ್ದಕ್ಕೆ ಲೀಲಾ ಪವಿತ್ರ ಎಂಬಾಕೆಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆನ್ನಲಾಗಿದೆ. ಇವರಿಬ್ಬರೂ ಆಂಧ್ರ ಪ್ರದೇಶ ಮೂಲದವರಾಗಿದ್ದಾರೆ ಎಂದು ಹೇಳಲಾಗಿದೆ.  

ಆರೋಪಿ ದಿನಕರ್ ದೊಮ್ಮಲೂರು ಬಳಿಯ ಲ್ಯಾಬೋರೇಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಲೀಲಾ ಪವಿತ್ರಾ ಹಾಗೂ ದಿನಕರ್, ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದ್ದು, ಮದುವೆಯಾಗಲು ತೀರ್ಮಾನಿಸಿದ್ದರು. ಆದರೆ, ಜಾತಿ ಬೇರೆ ಬೇರೆಯಾಗಿದ್ದರಿಂದ ಮದುವೆಗೆ ಯುವತಿ ಕಡೆಯವರು ಒಪ್ಪಿರಲಿಲ್ಲ ಎನ್ನಲಾಗಿದೆ.

ಅಲ್ಲದೇ, ದಿನಕರ್ ಜೊತೆ ಮಾತನಾಡದಂತೆ ಪೋಷಕರು ಯುವತಿಗೆ ತಾಕೀತು ಮಾಡಿದ್ದರು. ಹೀಗಾಗಿ, ಯುವತಿ ಆರೋಪಿಯಿಂದ ಅಂತರ ಕಾಯ್ದುಕೊಳ್ಳಲಾರಂಭಿಸಿದ್ದರು. ಸಿಟ್ಟಾದ ಆರೋಪಿ, ಲೀಲಾ ಪವಿತ್ರಾ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿ ಚಾಕು ಸಮೇತ ಮಂಗಳವಾರ ಕಚೇರಿ ಬಳಿ ಬಂದಿದ್ದ. ಲೀಲಾ ಪವಿತ್ರಾ ಅವರು ಕಚೇರಿಯಿಂದ ಹೊರಬರುತ್ತಿದ್ದಂತೆ ಮಾತುಕತೆ ನೆಪದಲ್ಲಿ ಆರೋಪಿ ಅಡ್ಡಗಟ್ಟಿದ್ದ. ಇದೇ ಸಂದರ್ಭದಲ್ಲಿ ಹೊಟ್ಟೆಗೆ ಚೂರಿಯಿಂದ ಇರಿದಿದ್ದ. ನಂತರ, ಎದೆ, ಕುತ್ತಿಗೆ ಸೇರಿ ದೇಹದ ಹಲವು ಕಡೆ ಚೂರಿ ಇರಿದಿದ್ದ. ತೀವ್ರ ರಕ್ತಸ್ರಾವದಿಂದ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಜೀವನ್ ಭೀಮಾ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಿವಾಕರ್​ನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. 

Similar News