ಸುಳ್ಯ: ಮನೆಯೊಡತಿಯ ಕೊಲೆಗೆ ಯತ್ನ; ಇಬ್ಬರು ಆರೋಪಿಗಳ ಬಂಧನ

Update: 2023-03-03 17:45 GMT

ಸುಳ್ಯ: ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಇಬ್ಬರು ಮಾನೆಯೊಡತಿಯನ್ನು ಕೊಲೆಗೆ ಯತ್ನಿಸಿ ಚಿನ್ನ, ನಗದು ದರೋಡೆಗೆ ಯತ್ನಿಸಿರುವ ಘಟನೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಪಂಬೆತ್ತಾಡಿ ಗ್ರಾಮದ ಕರಿಕ್ಕಳ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.

ವರದರಾಜ್ (30),  ಸೈಜಾನ್ ಪಿ.ಪಿ. (38) ಕೃತ್ಯ ಎಸಗಿದ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ವರದರಾಜ್ ಹಾಗೂ ಸೈಜಾನ್ ಎಂಬವರು ನಾಲ್ಕು ತಿಂಗಳುಗಳಿಂದ ಕರಿಕ್ಕಳ ಗುರುಕೃಪ ವಿಶ್ವನಾಥ್ ಅವರ  ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಮನೆ ಸಮೀಪದ ಕೊಟ್ಟಿಗೆಯಲ್ಲಿ ವಾಸವಾಗಿದ್ದರು. ಗುರುವಾರ ಸಂಜೆ ಇಬ್ಬರು ಪಂಜ ಪೇಟೆಗೆ ಹೋಗುವುದಾಗಿ ಹೇಳಿ ತಲಾ 200 ರೂ. ಪಡೆದು, ಪೇಟೆಗೆ ತೆರಳಿ ಬಂದಿದ್ದರು.

ರಾತ್ರಿ ಸುಮಾರು 9.30ರ ವೇಳೆಗೆ ಆರೋಪಿಗಳು ಮನೆಯ ಮಹಡಿಯನ್ನು ಏಣಿಯ ಮೂಲಕ ಹತ್ತಿ ಮಹಡಿಯಲ್ಲಿದ್ದ ಮನೆ ಮಾಲಕ ವಿಶ್ವನಾಥ್ ಅವರ ಪತ್ನಿ ಗಾಯತ್ರಿ(61) ಅವರ ಕುತ್ತಿಗೆಯನ್ನು ಆರೋಪಿ ವರದರಾಜ್ ಅದುಮಿ ಹಿಡಿದು ಚಿನ್ನ ಮತ್ತು ಹಣ ಎಲ್ಲಿದೆ ಎಂದು ಕೇಳಿದ್ದು, ಮನೆಯೊಡತಿ ಇಲ್ಲ ಎಂದಾಗ ಕೊಲೆ ಮಾಡುತ್ತೇನೆ ಎಂದಿದ್ದಾರೆ. ಇನ್ನೊರ್ವ ಆರೋಪಿ ಸೈಜಾನ್ ಗಾಯತ್ರಿ ಅವರ ಎರಡೂ ಕಾಲುಗಳನ್ನೂ ಹಿಡಿದುಕೊಂಡಿದ್ದಾನೆ. ಈ ವೇಳೆ ಗಾಯತ್ರಿ ಅವರ ಬೊಬ್ಬೆ ಕೇಳಿ ಮನೆ ಸಮೀಪದ ಸುರೇಶ್ ಹಾಗೂ ಪ್ರೇಮ ಎಂಬವರು ಅಲ್ಲಿಗೆ ಬಂದು ಆರೋಪಿಗಳನ್ನು ಪಕ್ಕಕ್ಕೆ ತಳ್ಳಿದ್ದು, ಸುರೇಶ್ ಆರೋಪಿಗಳನ್ನು ಹಿಡಿದಿದ್ದ ವೇಳೆ ಆರೋಪಿ ವರದರಾಜ್ ಹರಿತವಾದ ಆಯುಧದಿಂದ ಗಾಯತ್ರಿ ಅವರ ಕುತ್ತಿಗೆಗೆ ಎರಡು ಕಡೆ ಹಿರಿದ ಪರಿಣಾಮ ಗಾಯವಾಗಿದೆ. ಅವರಿಗೆ ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

Similar News