ಬೆಂಗಳೂರು ನಗರಕ್ಕೆ ಸೇಫ್ ಸಿಟಿ ಯೋಜನೆ ಅಗತ್ಯ: ಅಮಿತ್ ಶಾ

Update: 2023-03-03 18:15 GMT

ಬೆಂಗಳೂರು: ದೇಶದ ಎಂಟು ಪ್ರಮುಖ ನಗರಗಳಲ್ಲಿ ಸೇಫ್ ಸಿಟಿ ಯೋಜನೆ ಪ್ರಾಯೋಗಿಕವಾಗಿ ನಡೆಯುತ್ತಿದೆ. ಈ ಪೈಕಿ ಬೆಂಗಳೂರು ನಗರವು ಒಂದಾಗಿದೆ. ಬೆಂಗಳೂರಿನಂತಹ ನಗರಕ್ಕೆ ಸೇಫ್ ಸಿಟಿ ಯೋಜನೆ ಬಹಳ ಮುಖ್ಯವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಶುಕ್ರವಾರ ನಗರದ ಪುರಭವನದಲ್ಲಿ 632 ಕೋಟಿ ರೂ. ವೆಚ್ಚದ ಬೆಂಗಳೂರು ಸೇಫ್ ಸಿಟಿ ಯೋಜನೆಯ ಮೊದಲನೆ ಹಂತವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಅತ್ಯಾಧುನಿಕ ಕಮಾಂಡ್ ಸೆಂಟರ್ ಇದೆ. ಬೆಂಗಳೂರಿನ ಪೊಲೀಸರು ಎರಡು ಹೆಜ್ಜೆ ಮುಂದಿರುತ್ತಾರೆ. ಇಲ್ಲಿ ಅಪರಾಧ ತಡೆಯಲು ಉತ್ತಮ ತಂತ್ರಜ್ಞಾನ ಬೇಕು. ಜೊತೆಗೆ ಉತ್ತಮ ತಂಡವು ಬೇಕಾಗಿದೆ ಎಂದರು.

ಮಹಿಳೆಯರ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಜೊತೆಗೆ ಡ್ರೋನ್ ಕ್ಯಾಮರಾಗಳನ್ನು ಬಳಸಲಾಗುತ್ತದೆ. ಮಹಿಳೆಯರಿಗೆ ಯಾವುದೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಿದೆ. ಅಪರಾಧ ತಡೆಯ ಜೊತೆಗೆ ಕಳ್ಳತನವಾಗಿರುವ ವಾಹನಗಳನ್ನು ಕೂಡ ಈ ಯೋಜನೆಯಿಂದಾಗಿ ಪತ್ತೆಯಾಗಲಿದೆ ಎಂದು ಅಮಿತ್ ಶಾ ಹೇಳಿದರು.

ನಿಮ್ಮ ಕಳುವಾಗಿರುವ ವಾಹನಗಳನ್ನು ಎರಡೆ ನಿಮಿಷಗಳಲ್ಲಿ ಪತ್ತೆ ಹಚ್ಚಲಾಗುತ್ತದೆ. ಪಾಸ್‌ಪೋರ್ಟ್ ಅನ್ನು ಕೇವಲ 3 ಗಂಟೆಯಲ್ಲಿ ಪರಿಶೀಲನೆ ಮಾಡಲಾಗುತ್ತಿದೆ.  ಐಸಿಜೆಎಸ್ ಹಾಗೂ ಸಿಸಿಟಿಎನ್‌ಎಸ್ ಒಟ್ಟಿಗೆ ಕೆಲಸ ಮಾಡುತ್ತಿರುವುದರಿಂದ ಬೇಗ ಫಲಿತಾಂಶ ಲಭ್ಯವಾಗುತ್ತಿದೆ. ಐಸಿಜೆಎಸ್ ಮೂಲಕ ವಿದೇಶಿ ಪ್ರಕರಣ ಲಭ್ಯವಾಗಲಿದೆ. ಐಸಿಜೆಎಸ್‌ನ 2ನೇ ಪ್ರಯೋಗವು ನಡೆಯುತ್ತಿದೆ ಎಂದು ಅವರು ತಿಳಿಸಿದರು.

ನಾಗರಿಕರ ಸುರಕ್ಷತೆ ಬಗ್ಗೆ ದಿನದ 24 ಗಂಟೆಯು ನುರಿತ ಸಿಬ್ಬಂದಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಸಹಕಾರದೊಂದಿಗೆ ಕೆಲಸ ಮಾಡುತ್ತಾರೆ. ಮಹಿಳೆಯರು, ಹಿರಿಯ ನಾಗರಿಕರು, ವಿಕಲಚೇತನರಿಗೆ ತುರ್ತು ಸಂದರ್ಭಗಳಲ್ಲಿ ನೆರವು ನೀಡಲು ‘ಡಯಲ್ 112’ ಸಹಾಯವಾಣಿಯೂ ಇರಲಿದೆ ಎಂದು ಅಮಿತ್ ಶಾ ಹೇಳಿದರು. ಇದೇ ವೇಳೆ ಅಮಿತ್ ಶಾ ಸೈಬರ್ ಕ್ರೈಂ ಇನ್ವೆಸ್ಟಿಗೇಷನ್ ಪುಸ್ತಕವನ್ನು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ವಿ.ಸೋಮಣ್ಣ, ಎಸ್.ಟಿ.ಸೋಮಶೇಖರ್, ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ್ ಗರುಡಾಚಾರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಉಪಸ್ಥಿತರಿದ್ದರು.

‘ಸುರಕ್ಷಿತ ನಗರ ಬೆಂಗಳೂರು’ ಯೋಜನೆಯ ಮುಖ್ಯಾಂಶಗಳು
ಮೂರು ಸಾವಿರ ಪ್ರಮುಖ ಸ್ಥಳಗಳಲ್ಲಿ 50 ಸುರಕ್ಷಾ ದ್ವೀಪಗಳು ಹಾಗೂ 6,300 ಕ್ಯಾಮರಾಗಳ ಅಳವಡಿಕೆ, ಸಂಚಾರಿ ನ್ಯಾಯ ವಿಜ್ಞಾನ ಪ್ರಯೋಗಾಲಯ ಸ್ಥಾಪನೆ, ಸಲಹಾ ಕೇಂದ್ರಗಳ ಸ್ಥಾಪನೆ, ರಾಣಿ ಚೆನ್ನಮ್ಮ ಪಡೆ ರಚನೆ, ಪೊಲೀಸರಿಗೆ 800 ಪಿಟಿಝೆಡ್ ಕ್ಯಾಮರಾಗಳು, 400 ಹೈ ರೆಸಲ್ಯೂಷನ್ ಕ್ಯಾಮರಾಗಳು, 560 ಬಾಡಿವೊರ್ನ್ ಕ್ಯಾಮರಾಗಳ ಖರೀದಿ, ಮೊಬೈಲ್ ಕಮಾಂಡ್ ಮತ್ತು ಕಂಟ್ರೋಲ್ ವಾಹನ, ಡಯಲ್ 112 ತುರ್ತು ಸಹಾಯವಾಣಿ, ಕಮಾಂಡ್ ಸೆಂಟರ್, ಠಾಣೆಗಳಿಗೆ ನೇರ ವಿಡಿಯೋ ಪ್ರಸಾರ ಸೌಲಭ್ಯ.

ಭದ್ರತೆಗೆ 450 ಪೊಲೀಸರ ನಿಯೋಜನೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಟೌನ್‌ಹಾಲ್‌ನಲ್ಲಿ ಸುರಕ್ಷಿತ ಬೆಂಗಳೂರು ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ ಆಯೋಜನೆಗೊಂಡಿದ್ದ ಹಿನ್ನೆಲೆಯಲ್ಲಿ ಮೂವರು ಡಿಸಿಪಿ, ಎಸಿಪಿಗಳು, ಇನ್‌ಸ್ಪೆಕಟರ್‌ಗಳು ಸೇರಿದಂತೆ 450ಕ್ಕೂ ಹೆಚ್ಚು ಪೊಲೀಸರು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಟೌನ್‌ಹಾಲ್‌ನಲ್ಲಿನ ಕಾರ್ಯಕ್ರಮ ಮುಗಿಸಿ ಅಮಿತ್ ಶಾ ಎಚ್‌ಎಎಲ್ ವಿಮಾನ ನಿಲ್ದಾಣದ ಮೂಲಕ ಹೊಸದಿಲ್ಲಿಗೆ ಪ್ರಯಾಣ ಬೆಳೆಸಿದರು.

Similar News