ಭ್ರಷ್ಟಾಚಾರದ ಕಳಂಕ: ಶುಚಿಗೊಳಿಸುವ ಸಾಬೂನಿಗಾಗಿ ತಡಕಾಟ

Update: 2023-03-06 04:05 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಶೇ.40 ಕಮಿಷನ್ ಸರಕಾರ ಮತ್ತೆ ಸುದ್ದಿಯಲ್ಲಿದೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ರಾಜ್ಯ ಸರಕಾರದ ಪರವಾಗಿ ಕರ್ನಾಟಕದಲ್ಲಿ ಬೀದಿ ಪ್ರಚಾರಕ್ಕಿಳಿದಿರುವ ಹೊತ್ತಿಗೇ ಬಿಜೆಪಿ ಶಾಸಕನ ಪುತ್ರನೊಬ್ಬ ಲಂಚ ಪಡೆಯುತ್ತಾ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಅಷ್ಟೇ ಅಲ್ಲ, ಶಾಸಕ ಮತ್ತು ಪುತ್ರನ ಮನೆಗೆ ದಾಳಿ ನಡೆಸಿರುವ ಲೋಕಾಯುಕ್ತ  ತಂಡ ಕಂತೆ ಕಂತೆ ನೋಟುಗಳನ್ನು ವಶಪಡಿಸಿಕೊಂಡಿದೆ. ಶಾಸಕನ ಮೇಲೂ ಮೊಕದ್ದಮೆ ದಾಖಲಾಗಿದ್ದು, ಅವರನ್ನು ಬಂಧಿಸುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ. ಅಪರಾಧಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿಯವರು ಭರವಸೆ ನೀಡಿದ್ದಾರಾದರೂ, ಆ ಭರವಸೆಯ ಬಗ್ಗೆ ದೊಡ್ಡ ನಿರೀಕ್ಷೆಯೇನೂ ಇಡುವಂತಿಲ್ಲ. ಪದೇ ಪದೇ ರಾಜ್ಯಕ್ಕೆ ಆಗಮಿಸಿ, ರಾಜ್ಯದ ಆಡಳಿತವನ್ನು ಹಾಡಿ ಹೊಗಳುತ್ತಿರುವ ಕೇಂದ್ರ ವರಿಷ್ಠರು, ಬಿಜೆಪಿ ಶಾಸಕನ ಮನೆಯಲ್ಲಿ ಪತ್ತೆಯಾಗಿರುವ ಕೋಟ್ಯಂತರ ಹಣದ ಬಗ್ಗೆ ಇನ್ನೂ ತುಟಿ ಬಿಚ್ಚಿಲ್ಲ. ಕೇಂದ್ರದ ವರಿಷ್ಠರು ಬಣ್ಣಿಸುತ್ತಿರುವ ಡಬಲ್ ಇಂಜಿನ್ ಸರಕಾರದ ಮೂಲಕ ನಿಜಕ್ಕೂ ಲಾಭ ಪಡೆಯುತ್ತಿರುವವರು ಯಾರು ಎನ್ನುವುದನ್ನು  ಲೋಕಾಯುಕ್ತರು ಜನರಿಗೆ ಪ್ರಾತ್ಯಕ್ಷಿಕೆಯ ಮೂಲಕ ಅರ್ಥಮಾಡಿಸಿಕೊಟ್ಟಿದ್ದಾರೆ.

ಆರೋಪಿ ಶಾಸಕ ಮತ್ತು ಆತನ ಪುತ್ರನ ಬಳಿ ಪತ್ತೆಯಾಗಿರುವ 8 ಕೋಟಿಗೂ ಅಧಿಕ ಹಣ ಇನ್ನಷ್ಟು  ಪ್ರಶ್ನೆಗಳನ್ನು ಹುಟ್ಟಿಸಿ ಹಾಕಿದೆ. ಒಬ್ಬ ಶಾಸಕನ ಬಳಿಯೇ ಇಷ್ಟೊಂದು ನಗದು ಹಣ ದಾಸ್ತಾನಿದೆಯಾದರೆ, ಈ ರಾಜ್ಯದಲ್ಲಿರುವ ಉಳಿದ ಸಚಿವರು ತಮ್ಮ ಮನೆಗಳಲ್ಲಿ ಅದೆಷ್ಟು ನಗದು ಹಣವನ್ನು ಕೂಡಿಟ್ಟಿರಬಹುದು? ಆಡಳಿತ ಪಕ್ಷದ ಶಾಸಕನಾಗಿ ಒಬ್ಬ ಈ ಮಟ್ಟಿಗೆ ಭ್ರಷ್ಟನಾಗಲು ಸಾಧ್ಯವಿದೆಯಾದರೆ ಸರಕಾರದೊಳಗೆ ಉನ್ನತ ಸ್ಥಾನಮಾನಗಳನ್ನು ತಮ್ಮದಾಗಿಸಿಕೊಂಡಿರುವ ಉಳಿದ ಸಚಿವರು ಯಾವ ಮಟ್ಟಿಗೆ ಕೆಟ್ಟು ಹೋಗಿರಬಹುದು? ಬಿಜೆಪಿಯ ಶಾಸಕನ ಪುತ್ರನ ಮೇಲೆ ದಾಳಿ ನಡೆಸುವ ಅನಿವಾರ್ಯತೆಯನ್ನು ಲೋಕಾಯುಕ್ತಕ್ಕೆ ಸೃಷ್ಟಿಸಿದವರು ಯಾರು ಎನ್ನುವುದು ಈಗಾಗಲೇ ಚರ್ಚೆಯಲ್ಲಿದೆ. ಆದರೆ ಇದೇ ದಾಳಿ ಸರಕಾರದೊಳಗಿರುವ ಇನ್ನಿತರ ಸಚಿವರ ನಿವಾಸಗಳ ಮೇಲೆ ನಡೆದಿದ್ದರೆ ಪರಿಸ್ಥಿತಿ ಏನಾಗಿ ಬಿಡುತ್ತಿತ್ತು? ಲೋಕಾಯುಕ್ತ ದಾಳಿ ನಡೆಸಲೇ ಬೇಕಾದಂತಹ ಹತ್ತು ಹಲವು ಹಗರಣಗಳಿಗಾಗಿ ಈಗಾಗಲೇ ರಾಜ್ಯ ಸರಕಾರ ಸುದ್ದಿಯಲ್ಲಿದೆ. ಪಿಎಸ್‌ಐ ನೇಮಕಾತಿ ಹಗರಣ ಅದರಲ್ಲಿ ಬಹುಮುಖ್ಯವಾದುದು. ಈ ಪ್ರಕರಣದಲ್ಲಿ ಅಧಿಕಾರಿಗಳು ಮಾತ್ರವಲ್ಲ, ಸರಕಾರದೊಳಗಿರುವ ರಾಜಕಾರಣಿಗಳೂ ಭಾಗಿಯಾಗಿದ್ದಾರೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿತ್ತು.  ಇದಾದ ಬಳಿಕ ಶೇ. 40 ಕಮಿಷನ್ ಇಲ್ಲದೆ ಯಾವೊಂದು ಕಾಮಗಾರಿ ಕೆಲಸಗಳನ್ನೂ ಸಚಿವರು ನಡೆಯಗೊಡುವುದಿಲ್ಲ ಎನ್ನುವ ಆರೋಪ ಗುತ್ತಿಗೆದಾರರಿಂದಲೇ ಕೇಳಿ ಬಂತು. ಗುತ್ತಿಗೆದಾರರೊಬ್ಬರು ಈ ಬಗ್ಗೆ ಪ್ರಧಾನಿಗೂ ಪತ್ರ ಬರೆದಿದ್ದರು. ಆದರೆ ಸರಕಾರ ಈ ಪತ್ರಕ್ಕೆ ಸ್ಪಂದಿಸಲಿಲ್ಲ ಮಾತ್ರವಲ್ಲ, ಆರೋಪ ಮಾಡಿದ ಗುತ್ತಿಗೆದಾರನ ವಿರುದ್ಧವೇ ದೂರು ದಾಖಲಿಸಿತು. ಪರಿಣಾಮವಾಗಿ ಆತ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಆ ಸಂಬಂಧ ಅಂದಿನ ಸಚಿವ ಈಶ್ವರಪ್ಪ ರಾಜೀನಾಮೆ ನೀಡಿದರಾದರೂ, ಸರಕಾರದ ಮೂಗಿನ ನೇರಕ್ಕೆ ನಡೆದ ಪೊಲೀಸರ ತನಿಖೆ ಅವರಿಗೆ ಕ್ಲೀನ್‌ಚಿಟ್ ನೀಡಿತು. ಆ ಪ್ರಕರಣದ ಬಳಿಕವೂ, ಗುತ್ತಿಗೆದಾರರ ಸಂಘ ಸರಕಾರದ ವಿರುದ್ಧ  ಶೇ.40 ಕಮಿಷನ್ ಆರೋಪಗಳನ್ನು ಮಾಡಿದೆ. ಇದೀಗ ಲಂಚ ಪಡೆಯುವಾಗಲೇ ಶಾಸಕನ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಆದರೆ ಲೋಕಾಯುಕ್ತರು ಅಷ್ಟೇ ಧೈರ್ಯದಿಂದ ಸರಕಾರದಲ್ಲಿ ಸಹಭಾಗಿಗಳಾಗಿರುವ ಸಚಿವರನ್ನು ಬೆನ್ನು ಹತ್ತುವ ಸ್ಥಿತಿ ರಾಜ್ಯದಲ್ಲಿ ಇಲ್ಲ. ಜೊತೆ ಜೊತೆಗೇ ರಾಜ್ಯದ ಬೇರೆ ಬೇರೆ ಟೆಂಡರ್‌ಗಳಲ್ಲಿ ನಡೆದಿರುವ ಅವ್ಯವಹಾರಗಳೂ ಬಹಿರಂಗವಾಗುತ್ತಿವೆ. ಕೇಂದ್ರ ವರಿಷ್ಠರೇ ಈ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟೀಕರಣವನ್ನು ನೀಡಬೇಕಾಗಿದೆ.

ರಾಜ್ಯದಲ್ಲಿ  ಶಾಸಕರ ನಿವಾಸಗಳಲ್ಲಿ ಕೋಟ್ಯಂತರ ರೂ. ನಗದು ಪತ್ತೆಯಾಗುವ ಮೂಲಕ, ಪ್ರಧಾನಿ ಮೋದಿಯವರ ಡಿಜಿಟಲ್ ಬ್ಯಾಂಕಿಂಗ್ ಕೂಡ ತಮಾಷೆಗೀಡಾಗಿದೆ. ಮೋದಿಯವರ ನೋಟು ನಿಷೇಧ ನಿರ್ಧಾರದ ಬಳಿಕ ಜನಪ್ರಿಯವಾಗುತ್ತಿರುವ ಡಿಜಿಟಲ್ ಬ್ಯಾಂಕಿಂಗ್, ‘ಲಂಚ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತಿದೆ’ ಎಂದು ಬಿಜೆಪಿ ಮುಖಂಡರು ಪ್ರಚಾರ ಮಾಡುತ್ತಿದ್ದಾರೆ. ನಗದು ಹಣದಿಂದಾಗಿಯೇ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ನೋಟು ನಿಷೇಧದ ಬಳಿಕ ನಗದು ಹಣ ವ್ಯವಹಾರ ಇಳಿಮುಖವಾಗಿರುವುದರಿಂದ ಭ್ರಷ್ಟಾಚಾರ ಇಳಿಮುಖವಾಗಿದೆ ಎಂದು ಅವರು ವ್ಯಾಖ್ಯಾನಿಸುತ್ತಿದ್ದಾರೆ. ಹಾಗಿದ್ದರೆ, ಕೋಟ್ಯಂತರ  ನಗದು ಹಣ ಬಿಜೆಪಿ ಶಾಸಕನೊಬ್ಬನ ನಿವಾಸದಲ್ಲಿ ಪತ್ತೆಯಾದುದು ಹೇಗೆ? ನೋಟು ನಿಷೇಧದ ಬಳಿಕ ನಕಲಿ ನೋಟುಗಳ ಚಲಾವಣೆಯೂ ಹೆಚ್ಚಿದೆ ಎನ್ನುವುದು ವರದಿಗಳಿಂದ ಬಹಿರಂಗವಾಗುತ್ತಿವೆ. ನೋಟು ನಿಷೇಧದ ಬಳಿಕ ದೇಶ ಭ್ರಷ್ಟಾಚಾರ ಸೂಚ್ಯಂಕದಲ್ಲಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಂಡಿದೆ. 2021ರ ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತವು 180 ದೇಶಗಳಲ್ಲಿ 85ನೇ ಸ್ಥಾನದಲ್ಲಿದೆ. ನೋಟು ನಿಷೇಧದಿಂದಾಗಿ ಭಾರೀ ಪ್ರಮಾಣದಲ್ಲಿ ಕಪ್ಪು ಹಣ ಬೆಳಕಿಗೆ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ನಿರೀಕ್ಷೆ ಹುಸಿಯಾಯಿತು. ಹಾಗೆಂದು, ಭಾರತದಲ್ಲಿ ಕಪ್ಪು ಹಣ ಇದ್ದಿರಲಿಲ್ಲವೆ ಎಂದರೆ ಇತ್ತು. ಆ ಹಣವನ್ನೆಲ್ಲ  ಸರಕಾರದ ಬೆಂಬಲದೊಂದಿಗೇ ಬಿಳಿಯಾಗಿಸಲಾಯಿತು. ಆದುದರಿಂದಲೇ, ನೋಟು ನಿಷೇಧವನ್ನು ಸ್ವಾತಂತ್ರ್ಯೋತ್ತರ ಭಾರತದ ಅತಿ ದೊಡ್ಡ ಹಗರಣ ಎಂದು ಕರೆಯಲಾಗುತ್ತದೆ. ಇದೀಗ ನೋಟು ನಿಷೇಧದ ಬಳಿಕವೂ ಸಚಿವರು, ಶಾಸಕರ ನಿವಾಸಗಳಲ್ಲಿ ಕೋಟ್ಯಂತರ ರೂ.ಅನಧಿಕೃತ ನಗದು ಪತ್ತೆಯಾಗುತ್ತಿವೆ ಎಂದ ಮೇಲೆ ನೋಟು ನಿಷೇಧಕ್ಕೆ ಏನು ಅರ್ಥ ಉಳಿಯಿತು? ಈ ದೇಶದಲ್ಲಿ ಕಪ್ಪು ಹಣ ಅಳಿಯುತ್ತದೆ, ಭ್ರಷ್ಟಾಚಾರ ಇಳಿಕೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಜನಸಾಮಾನ್ಯರು ಸರಕಾರದ ನೋಟು ನಿಷೇಧದ ನಿರ್ಧಾರದ ಬೆನ್ನಿಗೆ ನಿಂತರು. ಅಪಾರ ನಾಶ, ನಷ್ಟಗಳನ್ನು ಸಹಿಸಿಕೊಂಡರು. ಜನ ಸಾಮಾನ್ಯರ ಆ ತ್ಯಾಗ, ಬಲಿದಾನಗಳೆಲ್ಲವೂ ನಮ್ಮನ್ನಾಳುವವರಿಂದ ಅಣಕಕ್ಕೀಡಾಗುತ್ತಿದೆ. ನೋಟು ನಿಷೇಧದಿಂದ ಭ್ರಷ್ಟಾಚಾರ ಅಳಿಯುತ್ತದೆ, ಕಪ್ಪು ಹಣ ಓಡಾಡುವುದು ನಿಲ್ಲುತ್ತದೆ ಎಂದು ಜನರಿಗೆ ಭರವಸೆ ನೀಡಿದ್ದ ಪ್ರಧಾನಿ ಮೋದಿಯವರೇ ಕರ್ನಾಟಕದ ಜನರನ್ನು ಸಮಾಧಾನಿಸಬೇಕಾಗಿದೆ.

ರಾಜ್ಯದಲ್ಲಿ ಲೋಕಾಯುಕ್ತರ ಈ ದಾಳಿಗೆ ಹಲವರು ಹಲವು ಬಣ್ಣವನ್ನು ನೀಡುತ್ತಿದ್ದಾರೆ. ಬಿಜೆಪಿಯೊಳಗಿನ ಒಳ ರಾಜಕೀಯವೇ ಈ ದಾಳಿಗೆ ಕಾರಣ ಎಂದು ಹೇಳಲಾಗುತ್ತಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ ಅವರು ಬಂಡೇಳದಂತೆ ಬೆದರಿಸುವ ತಂತ್ರವಾಗಿ ಈ ದಾಳಿ ನಡೆದಿದೆ ಎಂದೂ ಕೆಲವರು ವ್ಯಾಖ್ಯಾನಿಸುತ್ತಿದ್ದಾರೆ. ಇಂತಹ ದಾಳಿ ನಿಮ್ಮ ಹಾಗೂ ನಿಮ್ಮ ಪುತ್ರನ ವಿರುದ್ಧವೂ ನಡೆಯಬಹುದು ಎಚ್ಚರಿಕೆ? ಎಂಬ ಸಂದೇಶವನ್ನು  ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರಿಗೆ ರವಾನಿಸಿದ್ದಾರೆ ಎಂದು ಕಾಂಗ್ರೆಸ್‌ನ ನಾಯಕರೊಬ್ಬರು ಹೇಳಿಕೆ ನೀಡಿದ್ದಾರೆ. ರಾಜ್ಯ ಸರಕಾರದೊಳಗಿರುವ ಭ್ರಷ್ಟರಿಗೆ ಹೋಲಿಸಿದರೆ ಈ ಶಾಸಕ ಒಂದು ಸಣ್ಣ ಎರೆಹುಳ. ಈಗಾಗಲೇ ಶೇ. 40 ಕಮಿಷನ್ ಆರೋಪದಲ್ಲಿ ಗುರುತಿಸಿಕೊಂಡಿರುವ ಸಚಿವರ ಕುರಿತಂತೆ ತನಿಖಾ ಸಂಸ್ಥೆಗಳು ದಾಳಿ ನಡೆಸುವುದು ಯಾವಾಗ ಎಂಬ ಪ್ರಶ್ನೆಯನ್ನೂ ಕೇಳ ತೊಡಗಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಹತ್ತಿರವಾಗುತ್ತಿರುವ ದಿನಗಳಲ್ಲಿ, ಲೋಕಾಯುಕ್ತ ದಾಳಿ ಬಿಜೆಪಿಗೆ ಭಾರೀ ಮುಖಭಂಗವನ್ನುಂಟು ಮಾಡಿದೆ. ಆ ಕಳಂಕವನ್ನು ತೊಳೆದುಕೊಳ್ಳುವ ಸಾಬೂನಿನ ಹುಡುಕಾಟದಲ್ಲಿದೆ ರಾಜ್ಯ ಸರಕಾರ. ಸದ್ಯಕ್ಕೆ,   ರಾಜ್ಯ ಬಿಜೆಪಿಯ ನಾಯಕರು ಅಂತಹದೊಂದು ಸಾಬೂನಿಗಾಗಿ ದಿಲ್ಲಿಯ ಕಡೆಗೆ ನೋಡುತ್ತಿದ್ದಾರೆ.

Similar News