ಸ್ನೇಹಿತನ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2023-03-06 12:15 GMT

ಬೆಂಗಳೂರು, ಮಾ.6: ಸ್ನೇಹಿತನನ್ನು ಕೊಲೆಗೈದು ಮೃತದೇಹಕ್ಕೆ ಬೆಂಕಿಹಚ್ಚಿದ್ದ ಆರೋಪ ಸಂಬಂಧ ಮೂವರು ಆರೋಪಿಗಳನ್ನು ಇಲ್ಲಿನ ಸೋಲದೇವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಶ್ರೀಧರ್ (34) ಎಂಬಾತ ಕೊಲೆಯಾಗಿದ್ದು, ಈತನ ಸ್ನೇಹಿತರಾದ ಆಂಧ್ರಪ್ರದೇಶ ಮೂಲದ ವೀರಾಂಜನೇಯಲು, ಗೋವರ್ಧನ್ ಹಾಗೂ ಬುಡ್ಡಪ್ಪ ಎಂಬಾತನನ್ನ ಬಂಧಿಸಲಾಗಿದೆ. 

ಯಲಹಂಕದಲ್ಲಿ ವಾಸವಿದ್ದ ಶ್ರೀಧರ್ ಫಿಸಿಯೋ ಥೆರಪಿಸ್ಟ್ ಆಗಿದ್ದು, ಬಾರ್ ನಲ್ಲಿ ವೀರಾಂಜನೇಯಲು ಪರಿಚಯವಾಗಿತ್ತು. ಆನಂತರ, ಶ್ರೀಧರ್ ಕೊಲೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ವೀರಾಂಜನೇಯಲು ತನ್ನ ಸ್ನೇಹಿತರಾದ ಗೋವರ್ಧನ್, ಬುಡ್ಡಪ್ಪನ ಜೊತೆ ಸೇರಿ ಲಕ್ಷ್ಮೀಪುರದ ಖಾಲಿ ತೋಟದಲ್ಲಿ ಶ್ರೀಧರನನ್ನು ಕೊಲೆಗೈದು ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದರು ಎನ್ನಲಾಗಿದೆ.

ಫೆ.7ರಂದು ಸುಟ್ಟ ಸ್ಥಿತಿಯಲ್ಲಿದ್ದ ಶವ ಕಂಡ ಜಮೀನಿನ ಮಾಲಕ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದರು. ಅಪರಿಚಿತ ಶವ ಪತ್ತೆ ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಫೆ.9 ರಂದು ಮೃತನ ಕಿವಿಯಲ್ಲಿದ್ದ ಓಲೆ, ಮೈ ಮೇಲೆ ಸುಟ್ಟ ಸ್ಥಿತಿಯಲ್ಲಿದ್ದ ಬಟ್ಟೆಯನ್ನು ಮೃತನ ಸಹೋದರ ಗುರುತಿಸಿದ್ದ ಬಳಿಕ ಸತ್ತವನು ಶ್ರೀಧರ್ ಎಂಬುದು ಪತ್ತೆಯಾಗಿತ್ತು. ಆನಂತರ, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

Similar News