×
Ad

ನಡುಬಗ್ಗಿಸಿ ಇನ್ನೆಷ್ಟು ದಿನ ನಿಲ್ಲುವಿರಿ?, ಸ್ವಾಭಿಮಾನಿಯಾಗಿ ಧ್ವನಿ ಎತ್ತಿ: ಸಿಎಂ ಬೊಮ್ಮಾಯಿಗೆ ಜೆಡಿಎಸ್ ಸಲಹೆ

Update: 2023-03-07 17:46 IST

ಬೆಂಗಳೂರು, ಮಾ. 7: ‘ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಲು ಆಡಳಿತ ಮಂಡಳಿ ಹಿಂದೇಟು ಹಾಕುತ್ತಿದೆ. ಕನ್ನಡದ ಜಲ-ನೆಲ-ಧನ ಬಳಸಿ ಕಟ್ಟಿದ ಸಂಸ್ಥೆಯಲ್ಲಿ ಕನ್ನಡಿಗರ ದುಸ್ಥಿತಿ ಇದು. ಬಿಜೆಪಿಯ ಸಂಸದರೇ ಇದರ ಬಗ್ಗೆ ಪ್ರಶ್ನೆ ಮಾಡಲು ನಿಮಗೆ ಧಮ್ಮು-ತಾಕತ್ತು ಇಲ್ಲವೆ?’ ಎಂದು ಜೆಡಿಎಸ್ ಪ್ರಶ್ನಿಸಿದೆ.

ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ‘ಉತ್ತರದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಈ ವಂಚನೆ ನಮ್ಮ ಮೂಗಿನ ಕೆಳಕ್ಕೆ ನಡೆಯುತ್ತಿದೆ. ಉತ್ತರದವರ ಮುಂದೆ ಬೇಡಲು ನಾವೇನು ಅವರ ಗುಲಾಮರೆ? ನಾವು ನಮ್ಮ ಹಕ್ಕು ಕೇಳುತ್ತಿದ್ದೇವೆ ಹೊರತು ಭಿಕ್ಷೆಯಲ್ಲ’ ಎಂದು ಎಚ್ಚರಿಕೆ ನೀಡಿದೆ.

‘ಡಬಲ್ ಎಂಜಿನ್ ಸರಕಾರ ಬಂದರೆ ರಾಜ್ಯಕ್ಕೆ ಲಾಭವಾಗಲಿದೆ ಎಂದು ಬಿಜೆಪಿ ಮುಖಂಡರು ಬೊಬ್ಬೆ ಹಾಕುತ್ತಿದ್ದರು. ಆದರೆ, ಈಗ ನಮ್ಮ ಮಕ್ಕಳಿಗೆ ಮೋಸವಾಗುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರೆ, ಈ ಅನ್ಯಾಯವನ್ನು ಮೋದಿ ಅವರ ಗಮನಕ್ಕೆ ತನ್ನಿ. ನಡುಬಗ್ಗಿಸಿ ಇನ್ನೆಷ್ಟು ದಿನ ನಿಲ್ಲುವಿರಿ? ಅಧಿಕಾರದ ಕೊನೆಯಲ್ಲಾದರೂ ಸ್ವಾಭಿಮಾನಿಯಾಗಿ ಧ್ವನಿ ಎತ್ತಿ’ ಎಂದು ಜೆಡಿಎಸ್ ಲೇವಡಿ ಮಾಡಿದೆ.

Similar News