ಪುತ್ತೂರು : ಬಿಜೆಪಿ ವಿಜಯ ಸಂಕಲ್ಪ ಯಾತ್ರೆ

Update: 2023-03-11 16:05 GMT

ಪುತ್ತೂರು: ಬಿಜೆಪಿ ಸರ್ಕಾರವು ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆಗಳನ್ನು ಕಾಂಗ್ರೆಸ್ ಸರ್ಕಾರ ಬಂದಲ್ಲಿ ಹಿಂದಕ್ಕೆ ಪಡೆಯುತ್ತೇವೆ ಎಂದು ಡಿಕೆಶಿ ಮತ್ತು ಸಿದ್ದರಾಮಯ್ಯ ಅವರು ಹೇಳುತ್ತಿದ್ದಾರೆ. ಅವರಿಗೆ ತಾಖತ್ತಿದ್ದಲ್ಲಿ ಈ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಲಿ ಎಂದು ಬಿಜೆಪಿ ನಾಯಕ, ಮಾಜಿ  ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದರು. 

ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯು ಶನಿವಾರ ಸಂಜೆ ಪುತ್ತೂರಿಗೆ ಆಗಮಿಸಿತ್ತು. ಈ ಸಂದರ್ಭದಲ್ಲಿ ನಗರದ ಶ್ರೀ ವೆಂಕಟರಮಣ ದೇವಳದ ಮುಂಭಾಗದಲ್ಲಿ ಬಿಜೆಪಿ ಸಮಾವೇಶ ನಡೆಸಲಾಗಿತ್ತು. ಸಮಾವೇಶದಲ್ಲಿ ಮಾತನಾಡಿದ ಅವರು ಜಾತೀವಾದಿಗಳಾದ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ತಮ್ಮ ಸಮುದಾಯವನ್ನು ಮುಂದಿಟ್ಟು ರಾಜಕೀಯ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ಜಾತೀವಾದಿಯಲ್ಲ ರಾಷ್ಟ್ರೀಯವಾದಿ ರಾಜಕೀಯ ನಡೆಸುತ್ತಿದೆ. ಕಾಂಗ್ರೆಸ್ ಈ ತನಕ ಮುಸ್ಲಿಂ ಓಟುಗಳನ್ನು ನಂಬಿಕೊಂಡಿತ್ತು. ಆದರೆ ಇದೀಗ ಎಸ್‍ಡಿಪಿಐ ಹುಟ್ಟಿಕೊಂಡಿದೆ. ಅದು ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಅಧಿಕಾರ ಪಡೆಯುವ ಕನಸು ಕಾಣುತ್ತಿದೆ. ಆದರೆ ರಾಷ್ಟ್ರೀಯವಾದಿ ಕಾರ್ಯಕರ್ತರು ಇರುವ ತನಕ ಈ ಕನಸು ನನಸಾಗಲು ಸಾಧ್ಯವಿಲ್ಲ. ಬಿಜೆಪಿಗೆ ಮುಸ್ಲಿಮರ ಓಟು ಈಗ ಬೇಡ. ಮುಂದೆ ಅವರೂ ರಾಷ್ಟ್ರೀಯವಾದಕ್ಕೆ ಬೆಲೆ ನೀಡಿ ನಮ್ಮ ಪಕ್ಷದ ಜೊತೆ ಸೇರಿಕೊಳ್ಳಲಿದ್ದಾರೆ ಎಂದ ಅವರು ಕಾಂಗ್ರೆಸ್ ಪಕ್ಷವು ಮುಸ್ಲಿಮರ ಓಟಿಗಾಗಿ ಮತಾಂತರ ಕಾಯ್ದೆ ತಡೆ ಮತ್ತು ಗೋ ಹತ್ಯೆ ತಡೆ ಕಾಯ್ದೆಯನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ತಾನು ಗೋಮಾಂಸ ತಿನ್ನುತ್ತೇನೆ ಎಂದು ಹೇಳುತ್ತಾರೆ. ಅವರು ಗೋಮಾಂಸ ತಿನ್ನಲಿ ಅಥವಾ ಗೋವಿನ ಸೆಗಣಿಯನ್ನೂ ತಿನ್ನಲಿ ಈ ಕಾಯ್ದೆಯನ್ನು ಹಿಂಪಡೆಯುವ ಬಗ್ಗೆ ಅವರ ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಲಿ ಎಂದರು. 

ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಶಾಸಕ ಸಂಜೀವ ಮಠಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. 

ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಪಕ್ಷದ ಮುಖಂಡರಾದ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ರಾಜೇಶ್ ಕಾವೇರಿ, ರಾಮದಾಸ್ ಬಂಟ್ವಾಳ, ಗೋಪಾಲಕೃಷ್ಣ ಹೇರಳೆ, ಕಸ್ತೂರಿ ಪಂಜ, ಬೂಡಿಯಾರ್ ರಾಧಾಕೃಷ್ಣ ರೈ, ದತ್ತಾತ್ರೇಯ, ಕಿಶೋರ್, ದೇವದಾಸ ಶೆಟ್ಟಿ, ಜಯಂತಿ ನಾಯ್ಕ್, ಆರ್.ಸಿ. ನಾರಾಯಣ, ಸುನಿಲ್ ದಡ್ಡು, ವಿದ್ಯಾಗೌರಿ, ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು. 

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು. ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು ಮತ್ತು ಚಂದ್ರಶೇಖರ ರಾವ್ ಬಪ್ಪಳಿಗೆ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಪುತ್ತೂರು ಬಸ್ಸು ನಿಲ್ದಾಣದ ಬಳಿಯಿಂದ ಸಭಾ ವೇದಿಕೆಯ ತನಕ ಮೆರವಣಿಗೆ ನಡೆಯಿತು. 

Similar News