×
Ad

ದರೋಡೆ ಪ್ರಕರಣ: 23 ನೇಪಾಳಿಗಳ ಬಂಧನ, 2 ಕೋಟಿ ರೂ.ಮೌಲ್ಯದ ವಸ್ತುಗಳ ವಶ

Update: 2023-03-12 11:19 IST

ಬೆಂಗಳೂರು, ಮಾ.11: ಕೆಲಸಕ್ಕಿದ್ದ ಮನೆಯವರ ನಂಬಿಕೆಗಳಿಸಿ ಎರಡು ಪ್ರತ್ಯೇಕ ಕಡೆಗಳಲ್ಲಿ ಮನೆಗೆ ಕನ್ನ ಹಾಕಿದ್ದ 23 ನೇಪಾಳಿ ಖದೀಮರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿ ಅಪಾರ ನಗದು ಸೇರಿ 2 ಕೋಟಿ ಮೌಲ್ಯದ ಚಿನ್ನಾಭರಣ, ಪಿಸ್ತೂಲ್, ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದಾರೆ. 

ಜೆ.ಪಿ.ನಗರ ಪೊಲೀಸರು ಕಾರ್ಯಾಚರಣೆ ಕೈಗೊಂಡು ನೇಪಾಳ ಮೂಲದ ನೇತ್ರಾ ಶಾಹಿ(43), ಲಕ್ಷ್ಮೀ ಸೇಜುವಲ್(33), ಗೋರಕ್ ಬಹದ್ದೂರ್(50), ಭೀಮ್ ಬಹದ್ದೂರ್(45), ಅಂಜಲಿ(31) ಅಬೇಶ್ ಶಾಹಿ(21) ಪ್ರಶಾಂತ್ (21), ಪ್ರಕಾಶ್(31) ನನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು. 

ಜೆಪಿ ನಗರದ ಕಿರಣ್ ಅವರು ಕುಟುಂಬದ ಸಮೇತ ತಿರುಪತಿಗೆ ತೆರಳಿದ್ದಾಗ ಅವರ ಮನೆಯಲ್ಲಿ ಕೆಲಸಕ್ಕಿದ್ದ ಬಂಧಿತ ಆರೋಪಿಯಾದ ಲಕ್ಷ್ಮೀ ಸೆಜುವಲ್ ಇತರರ ಜೊತೆ ಗುಂಪು ಕಟ್ಟಿಕೊಂಡು ಮನೆಗೆ ನುಗ್ಗಿ ದರೋಡೆ ಮಾಡಿದ್ದರು. ಬಳಿಕ ಕಿರಣ್ ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.  

ಬಂಧಿತರಿಂದ 1 ಕೆ.ಜಿ 173 ಗ್ರಾಂ ಚಿನ್ನಾಭರಣ, 350 ಗ್ರಾಂ ಬೆಳ್ಳಿ, 77.69 ಲಕ್ಷ ನಗದು, ಪಿಸ್ತೂಲ್, 3 ಜೀವಂತ ಗುಂಡುಗಳು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ. 

ವೃದ್ಧೆ ಮನೆ ಕಳವು: ವಯೋವೃದ್ದ ಮಹಿಳೆಯಿದ್ದ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ದಕ್ಷಿಣ ವಿಭಾಗದ ಪೆÇಲೀಸರು ಬಂಧಿಸಿದ್ದಾರೆ. ಅರ್ಜುನ್ ಶಾಯಿ, ಪೂರನ್ ಶಾಯಿ, ಹರೀಶ್ ಶಾಯಿ ಹಾಗೂ ರಮಿತ ಠಾಕೂರ್, ವಿಮಲಾ ಬಂಧಿತ ಆರೋಪಿಗಳಾಗಿದ್ದಾರೆ. 

ಬ್ರಿಜ್ ಭೂಷಣ್ ಎಂಬುವವರ ಮನೆಯಲ್ಲಿ ಆರೋಪಿ ವಿಮಲಾ ಕೆಲಸಕ್ಕಿದ್ದಳು. ಬ್ರಿಜ್ ಭೂಷಣ್ ಅವರು ವಯೋವೃದ್ದ ತಾಯಿಯನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋದಾಗ ಆತನ ಮನೆಯಲ್ಲಿ ತನ್ನ ಗ್ಯಾಂಗ್ ನೊಂದಿಗೆ ವಿಮಲಾ ಕೃತ್ಯ ಎಸಗಿದ್ದಳು. ಪೆÇಲೀಸರು ಆರೋಪಿಗಳನ್ನು ಕಾರ್ಯಾಚರಣೆ ಕೈಗೊಂಡು ಬಂಧಿಸಿದ್ದು ಬಂಧಿತರಿಂದ 320 ಗ್ರಾಂ ಚಿನ್ನಾಭರಣ, 6.12 ಲಕ್ಷ ನಗದು, 197 ಗ್ರಾಂ ಬೆಳ್ಳಿ ವಸ್ತು ವಶಕ್ಕೆ ಪಡೆದಿದ್ದಾರೆ ಎಂದು ಅವರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು. 

ದಂಪತಿ ಸೇರಿ ಐವರ ಬಂಧನ: ಜಯನಗರ ಪೊಲೀಸರು, ಗುಂಪು ಕಟ್ಟಿಕೊಂಡು ಮನೆಗಳವು ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಿಕಾಸ್, ಹೇಮಂತ್, ಸುಷ್ಮಿತಾ, ರೋಷನ್ ಪದಂ ಹಾಗೂ ಪ್ರೇಮ್ ಬಂಧಿತ ಆರೋಪಿಗಳಾಗಿದ್ದಾರೆ. ಬಿಕಾಸ್ ಹಾಗೂ ಸುಷ್ಮಿತಾ ದಂಪತಿ ಒಬೇದುಲ್ಲಾ ಖಾನ್ ಎಂಬಾತನ ಮನೆಯಲ್ಲಿ ಕೆಲಸಕ್ಕಿದ್ದರು. 

ಸಮಯ ನೋಡಿಕೊಂಡು ತಮ್ಮ ಗ್ರೂಪ್‍ನೊಂದಿಗೆ ಕಳ್ಳತನ ಮಾಡಿದ್ದರು. ಬಂಧಿತರಿಂದ 292 ಗ್ರಾಂ ಚಿನ್ನಾಭರಣ, 15 ಸಾವಿರ ನಗದು, 168 ಗ್ರಾಂ ಬೆಳ್ಳಿ ವಸ್ತುಗಳು, 18 ವಾಚ್ ಗಳು ತಲಾ ಒಂದು ಟ್ಯಾಬ್ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು. 

Similar News