×
Ad

ಬೆಂಗಳೂರಿನಲ್ಲಿ ಗಗನಸಖಿ ಅನುಮಾನಾಸ್ಪದ ಸಾವು: ಪ್ರಿಯಕರ ವಶಕ್ಕೆ

Update: 2023-03-12 20:12 IST

ಬೆಂಗಳೂರು, ಮಾ.12: ಗಗನಸಖಿಯೊಬ್ಬರು ಅಪಾರ್ಟ್ಮೆಂಟ್‌ನ 4ನೆ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾದ ಘಟನೆ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ತಡರಾತ್ರಿ ವರದಿಯಾಗಿದೆ. 

ಮೂಲತಃ ಹಿಮಾಚಲ ಪ್ರದೇಶದ ಅರ್ಚನಾ(28) ಮೃತಪಟ್ಟಿರುವ ಗಗನಸಖಿ ಪೊಲೀಸರು ಗುರುತಿಸಿದ್ದಾರೆ. ಕೋರಮಂಗಲದ 8ನೆ ಬ್ಲಾಕ್‌ನಲ್ಲಿರುವ ರೇಣುಕಾ ರೆಸಿಡೆನ್ಸಿ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದ ಗಗನಸಖಿ ಅರ್ಚನಾ ಅವರು ಸಾಫ್ಟ್ವೇರ್ ಎಂಜಿನಿಯರ್ ಜತೆ ಲೀವಿಂಗ್ ಟುಗೆದರ್‌ನಲ್ಲಿದ್ದರೆನ್ನಲಾಗಿದೆ. 

ಘಟನೆ ಸಂಬಂಧ ಮೃತಳ ಪ್ರಿಯಕರ ಮಂಗಳೂರು ಮೂಲದ ಆದೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ತಡರಾತ್ರಿ 12 ಗಂಟೆ ಸುಮಾರಿನಲ್ಲಿ ಅರ್ಚನಾ ಅವರು ಅಪಾರ್ಟ್ ಮೆಂಟ್‌ನ 4ನೇ ಮಹಡಿಗೆ ಹೋಗಿ ಅಲ್ಲಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಲೀವಿಂಗ್ ಟುಗೆದರ್‌ನಲ್ಲಿದ್ದ ಸಾಫ್ಟ್ವೇರ್ ಎಂಜಿನಿಯರ್ ಜತೆ ಜಗಳ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. 

ಸುದ್ದಿ ತಿಳಿದು ಕೋರಮಂಗಲ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Similar News