ಬಂಟ್ವಾಳ ಪ್ರಜಾಧ್ವನಿ ಯಾತ್ರೆ: ಕುಕ್ಕಾಜೆಯಲ್ಲಿ ಸಾರ್ವಜನಿಕ ಸಭೆ

Update: 2023-03-20 18:08 GMT

ಬಂಟ್ವಾಳ : ಬಿಜೆಪಿ ಸರಕಾರದ ಅವೈಜ್ಞಾನಿಕ ನೀತಿಯಿಂದ ಕಂಗಾಲಾದ ಜನತೆಗೆ ಸಾಂತ್ವನ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಭರವಸೆಗಳನ್ನು ನೀಡಿದ್ದು ಅದನ್ನು ಸರಕಾರ ಬಂದ ತಕ್ಷಣ ಈಡೇರಿಸಲಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಸವಿತಾ ರಮೇಶ್ ಭರವಸೆ ನೀಡಿದರು.

ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯುತ್ತಿರುವ “ಬಂಟ್ವಾಳ ಪ್ರಜಾಧ್ವನಿ” ಯಾತ್ರೆಯ 10ನೇ ದಿನ ಕುಕ್ಕಾಜೆಯಲ್ಲಿ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಆರೆಸ್ಸೆಸ್ ಪ್ರೇರಿತ ಕೋಮುವಾದ ಹೊರಗಿಟ್ಟು ಬಿಜೆಪಿ ನಾಯಕರು ತಾಕತ್ ಇದ್ದರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಧನೆ ಹೇಳಿ ಮತ ಪಡೆದು ನೋಡಿ ಎಂದು ಸವಾಲು ಹಾಕಿದರು.

ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರುವುದು ಶತಸ್ಸಿದ್ದ. ಈ ಕ್ಷೇತ್ರದ, ಈ ಜಿಲ್ಲೆಯ ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ರಮಾನಾಥ ರೈ ಮಂತ್ರಿಯಾಗಲೇಬೇಕಾಗಿದೆ. ಈ ಹಿನ್ನಲೆಯಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಕೂಡಾ ಆಹೋರಾತ್ರಿ ಶ್ರಮಿಸಬೇಕಾಗಿದೆ ಎಂದರು.

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಬಿ ರಮಾನಾಥ ರೈ ಅವರು, ನಾನು ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಬೇನಾವಿ ಆಸ್ತಿ-ಅಂತಸ್ತು ಸಂಪಾದಿಸಿಲ್ಲ. ಕ್ಷೇತ್ರದ ಜನರ ಪ್ರೀತಿ ಸ್ನೇಹವೇ ನಾನು ಸಂಪಾದಿಸಿದ ಆಸ್ತಿ ಎಂದರಲ್ಲದೆ ಬಡವರಿಗೆ ಕಾಂಗ್ರೆಸ್ ಕಾರ್ಯಕ್ರಮ ಹಮ್ಮಿಕೊಂಡರೆ ಅದಕ್ಕೆ ದುಡ್ಡು ಹೇಗೆ ಹೊಂದಿಸುತ್ತಾರೆ ಎಂಬ ಚಿಂತೆ ಬಿಜೆಪಿಗರಿಗೆ. ನಮ್ಮ ಆಶ್ವಾಸನೆ ಏನಿದ್ದರೂ ಈಡೇರಿಸುವಂತದ್ದು ಮಾತ್ರ. ಬಿಜೆಪಿಯ ಹದಿನೈದು ಲಕ್ಷ, ಕಪ್ಪುಹಣ ವಾಪಾಸು ನಂತಹ ಭರವಸೆ ಅಲ್ಲ. ಈ ಬಗ್ಗೆ ಯಾರಿಗೂ ಚಿಂತೆ ಬೇಡ ಎಂದರು.

ಕಾಂಗ್ರೆಸ್ ಪಕ್ಷವು ಸಿಇಟಿ ಜಾರಿಗೆ ತರುವ ಮೂಲಕ  ಬಡವರ ಮಕ್ಕಳು ಕೂಡಾ ಇಂಜಿನಿಯರ್ ಡಾಕ್ಟರ್ ಮಾಡುವ ಅವಕಾಶ ಕಲ್ಪಿಸಿದ್ದು, ರೈತರಿಗೆ ಉಚಿತ ವಿದ್ಯುತ್, ಸಾಲಮನ್ನಾ ಇದೆಲ್ಲವೂ ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದ್ದು, ಸಿದ್ದು ಸರಕಾರದ ಯುಗ ಕರ್ನಾಟಕದ ಸುವರ್ಣ ಯುಗ ಎಂದು ಬಣ್ಣಿಸಿದರು.

94 ಸಿ ಹಕ್ಕುಪತ್ರ ರಾಜ್ಯದಲ್ಲೇ ಮೊದಲ ಬಾರಿಗೆ ನೀಡಿದ್ದು ಬಂಟ್ವಾಳದಲ್ಲಿ. ಕಮಿಷನ್ ಪರ್ಸೆಂಟೇಜ್ ರಾಜಕೀಯ ನಾನು ಯಾವತ್ತೂ ಮಾಡಿಲ್ಲ. ಜನಸೇವೆಯ ರಾಜಕೀಯ ಮಾತ್ರ ಮಾಡಿದ್ದೇನೆ. ಇದು ನನ್ನ  ಕೊನೆಯ ಚುನಾವಣೆಯಾಗಿದೆ, ಈ ಬಾರಿ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಈ ಸಂದರ್ಭ ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಅರ್ಶದ್ ಸರವು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಬಂಟ್ವಾಳ ಪುರಸಭಾ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್, ಲೋಲಾಕ್ಷ ಶೆಟ್ಟಿ, ಬಿ ವಾಸು ಪೂಜಾರಿ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರ  ರಝಾಕ್ ಕುಕ್ಕಾಜೆ,  ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು, ಪ್ರಮುಖರಾದ ಬಾಲಕೃಷ್ಣ ಆಳ್ವ ಕೊಡಾಜೆ, ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಅಬ್ದುಲ್ ರಹಿಮಾನ್, ಕೆ ಪದ್ಮನಾಭ ರೈ, ರಮೇಶ ಪಣೋಲಿಬೈಲು, ಪಿ.ಎ. ರಹೀಂ ಬಿ ಸಿ ರೋಡು, ಸಿದ್ದೀಕ್ ಸರವು,  ಜಿ ಎಂ ಇಬ್ರಾಹಿಂ ಮಂಚಿ, ಬದ್ರುದ್ದೀನ್ ಕೆಯ್ಯೂರು, ಸಿರಾಜ್ ಮದಕ, ಪ್ರವೀಣ್ ರೋಡ್ರಿಗಸ್,  ಆಲ್ಬರ್ಟ್ ಮೆನೆಜಸ್, ನಜೀಬ್ ಮಂಚಿ,  , ವೆಂಕಪ್ಪ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.

Similar News