ಸಚಿವೆ ಶಶಿಕಲಾ ಜೊಲ್ಲೆ ಮನೆ ಮುಂದೆಯೇ ರೌಡಿಶೀಟರ್ ಕೊಲೆಗೆ ಯತ್ನ

Update: 2023-03-22 10:56 GMT

ಬೆಂಗಳೂರು, ಮಾ.22: ನಗರದ ಜಯಮಹಲ್ ರಸ್ತೆಯಲ್ಲಿರುವ ಸಚಿವೆ ಶಶಿಕಲಾ ಜೊಲ್ಲೆ ಮನೆ ಮುಂದೆಯೇ ಸ್ನೇಹಿತರಿಂದ ರೌಡಿಶೀಟರ್ ಗಗನ್ ಶರ್ಮಾ ಕೊಲೆಗೆ ಯತ್ನ ನಡೆದಿರುವುದು ವರದಿಯಾಗಿದೆ.  

ಮಾರ್ಚ್ 21ರ ಮುಂಜಾನೆ 5.30 ರಿಂದ 6 ಗಂಟೆಗೆ ಆಸುಪಾಸಿನಲ್ಲಿ ಘಟನೆ ನಡೆದಿದ್ದು, ದುಷ್ಕರ್ಮಿಗಳು ರೌಡಿಶೀಟರ್ ಮೇಲೆ ಮೂರ್ನಾಲ್ಕು ಬಾರಿ ಕಾರು ಹತ್ತಿಸಿ ಹತ್ಯೆ ಮಾಡಲು ಮುಂದಾಗಿದ್ದು, ಗಗನ್ ಶರ್ಮಾ ಗಂಭೀರವಾಗಿ ಗಾಯಗೊಂಡಿದ್ದಾರೆನ್ನಲಾಗಿದೆ.

ಆಸ್ತಿ ವಿಚಾರದಲ್ಲಿ ಗಗನ್ ಮತ್ತು ಬಿಬಿಎಂಪಿ ಟ್ಯಾಕ್ಸ್ ಕಲೆಕ್ಟರ್ ಆಗಿರುವ ಸುನೀಲ್ ಕುಮಾರ್ ನಡುವೆ ಮನಸ್ತಾಪ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕೊಲೆ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಗಗನ್ ಶರ್ಮಾ ಹೌಗ್ರೌಂಡ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿ ಗುರುತಿಸಿಕೊಂಡಿದ್ದಾನೆ. ಘಟನೆ ಸಂಬಂಧ  ಸ್ಥಳೀಯರು ಜೆಸಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸದ್ಯ ಗಾಯಾಳು ಗಗನ್​ನನ್ನು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ಜೆಸಿ ನಗರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿ ಸುನೀಲ್​ನನ್ನು ಬಂಧಿಸಿದ್ದಾರೆ.

Similar News