​ಮಂಗಳೂರು : ವಿದ್ಯಾರ್ಥಿನಿಯರಿಗೆ ಕಾರು ಢಿಕ್ಕಿ

Update: 2023-03-23 14:35 GMT

ಮಂಗಳೂರು, ಮಾ.23: ನಗರ ಹೊರವಲಯದ ಅಡ್ಯಾರ್‌ನ ಸಹ್ಯಾದ್ರಿ ಕಾಲೇಜಿನ ಬಳಿ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಯರಾದ ಜಿಸ್ಸಂ ಒ.ಎಸ್. ಮತ್ತು ಜೋಸ್ನಾ ಚಾಕೋಗೆ ಕಾರು ಢಿಕ್ಕಿಯಾಗಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಅಡ್ಯಾರ್‌ನ ಹಾಸ್ಟೆಲ್‌ನಿಂದ ಬಿಕರ್ನಕಟ್ಟೆಯಲ್ಲಿರುವ ಕಾಲೇಜಿಗೆ ತೆರಳಲು ಇಂದು ಬೆಳಗ್ಗೆ ಮಂಗಳೂರು-ಬಿಸಿ ರೋಡ್ ರಸ್ತೆಯನ್ನು ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಮುಂದೆ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ  ಢಿಕ್ಕಿಯಾಗಿದೆ. ಬಳಿಕ ವಿದ್ಯಾರ್ಥಿನಿಯರಿಗೆ ಢಿಕ್ಕಿ ಹೊಡೆದಿದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿನಿಯರನ್ನು ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದ್ವಿಚಕ್ರ ವಾಹನ ಸವಾರ ಶಿವಪ್ರಸಾದ್ ಈ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಆರೋಪಿ ಕಾರು ಚಾಲಕ ಮುಹಮ್ಮದ್ ಆಶ್ರಫ್ ವಿರುದ್ಧ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News