ಕಾರ್ಕಳದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರುದ್ಧ ಪ್ರಧಾನಿ ಮೋದಿಗೆ ದೂರು ನೀಡಲಾಗುವುದು: ಪ್ರಮೋದ್ ಮುತಾಲಿಕ್
ಕಾರ್ಕಳ: ಕಾರ್ಕಳದಲ್ಲಿ ನಡೆಯುತ್ತಿರುವ ಎಲ್ಲಾ ಭ್ರಷ್ಟಾಚಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ದೂರು ನೀಡಲಾಗುವುದು ಎಂದು ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಅವರು ಕಾರ್ಕಳದಲ್ಲಿ ಸುದ್ದಿಗೋಷ್ಠಿಯಲ್ಲಿ ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಪೊಟ್ಟುಕೆರೆ ಅಭಿವೃದ್ಧಿಗೆ ಕಣಂಜಾರು ಸಮೀಪದ ಕೊಡಿಲುಕಟ್ಟೆ ಎಂಬಲ್ಲಿ ಹತ್ತು ಸಾವಿರ ರೂ. ಕೆಲಸಕ್ಕೆ ಸರಕಾರದಿಂದ ಹತ್ತು ಲಕ್ಷ ರೂ. ಬಿಲ್ ಮಾಡಲಾಗಿದ್ದು ಮತ್ತೆ ಹದಿನೈದು ಲಕ್ಷ ರೂ.ಗೆ ಬೇಡಿಕೆ ಸಲ್ಲಿಸಲಾಗಿದೆ. ಬೋಗಸ್ ಕೆಲಸದಲ್ಲಿ ಲಕ್ಷ ಲಕ್ಷ ರೂ. ಲೂಟಿ ಮಾಡಲಾಗಿದೆ ಈ ಮೂಲಕ ಸುನೀಲ್ ಭ್ರಷ್ಟಾಚಾರ ಮೇಲುನೋಟಕ್ಕೆ ಸಾಬೀತಾಗಿದೆ ಎಂದು ಮುತಾಲಿಕ್ ಹೇಳಿದರು.
ಎರಡನೇ ದಾಖಲೆ ಬಿಡುಗಡೆಗೊಳಿಸಿದ ಮುತಾಲಿಕ್ ಪುರಾತನ ಊರಿಗೆ ನೀರುಣಿಸುತಿದ್ದ ಜಡ್ಡಿನಕಟ್ಟೆ ಕೆರೆಯನ್ನು ಮುಚ್ಚಿ ತೀರ್ಥಹಳ್ಳಿಯ ಷರೀಫ್ ಅಕ್ರಮ ಕ್ರಷರ್ ಮಾಡುತಿದ್ದರು ಅದನ್ನು ಮನಗಂಡು ಸಂಘಟನೆ ಪ್ರಮುಖರಾದ ದಿವ್ಯ ಹಾಗು ಇತರರ ಹೋರಾಟದ ಫಲವಾಗಿ ಗಣಿಗಾರಿಕೆ ನಿಲುಗಡೆಯಾಗಿದೆ. ಈಗ ಸ್ಥಾಪಿತಹಿತಾಸಕ್ತರ ಕುಮ್ಮಕ್ಕಿನಿಂದ ಆ ಗಣಿಗಾರಿಕೆ ಆರಂಭಕ್ಕೆ ತಯಾರಿ ನಡೆಸಲಾಗುತ್ತಿದೆ. ಇದಕ್ಕೆ ಸಚಿವರ ಒತ್ತಡವೇ ಕಾರಣವಾಗಿದೆ ಎಂದು ಹೇಳಿದರು.
ನೀರೆ ಬೈಲೂರಿನಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಗೆ ಅಂದಿನ ತಹಶೀಲ್ದಾರ್ ಹಾಗೂ ಉಪತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ಇಲಾಖೆ ದಾಳಿ ನಡೆಸಿ ಕಲ್ಲುತುಂಬಿದ ಎರಡು ಲಾರಿಗಳನ್ನು ವಶಪಡಿಸಿ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಇದಾದ ಕೆಲ ಹೊತ್ತಿನಲ್ಲಿ ರಾಜಕೀಯ ಪ್ರಭಾವ ಬಳಸಿಕೊಂಡು ಆ ಎರಡು ಲಾರಿಗಳನ್ನು ಬಿಡುಗಡೆಗೊಳಿಸಲಾಗಿತ್ತು. ಈ ಎಲ್ಲಾ ಬೆಳವಣಿಯ ಬೆನ್ನಲ್ಲೇ ಜಿಲ್ಲಾಡಳಿತವು ಆ ಉಪತಹಶೀಲ್ದಾರ್ ಅವರನ್ನು ಕಾಪುವಿಗೆ ವರ್ಗಾವಹಿಸಿದ್ದರು. ಇದು ಕಾನೂನು ಸಮ್ಮತವಲ್ಲ. ಅದೇ ಉಪತಹಶೀಲ್ದಾರ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ ಎಂದರು.
ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೇಂದ್ರ ಸರಕಾರದ ಜಲಜೀವನ್ ಯೋಜನೆ ದುರುಪಯೋಗವಾಗಿದೆ. ರೂ. 35 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಟ್ಯಾಂಕಿನ ಕಳಪೆ ಕಾಮಗಾರಿಯಿಂದಾಗಿ ಒಂದು ಹನಿ ನೀರು ನಿಲ್ಲದೇ ಇದೀಗ ಟ್ಯಾಂಕ್ ದುರಸ್ಥಿ ನೆಪದಲ್ಲಿ ನೆಲಸಮ ಗೊಳಿಸುವ ಪ್ರಯತ್ನ ನಡೆಯುತ್ತಿದೆ. ಅಲ್ಲಿ ನಡೆದಿರುವ ಕಳಪೆ ಕಾಮಗಾರಿಯ ರೂವಾರಿಯಾಗಿರುವ ಗುತ್ತಿಗೆದಾರನೇ ಆ ಹಣವನ್ನು ಭರಿಸಿಸಬೇಕೆಂದು ಒತ್ತಾಯಿಸಿದರು.
ಭಾರತೀಯ ಪುರಾತತ್ವ ಸರ್ವೇ ಕ್ಷಣ ಇಲಾಖೆಯ ವ್ಯಾಪ್ತಿಯೊಳಪಟ್ಟ ಧಾರ್ಮಿಕ ಕ್ಷೇತ್ರ 150 ಮೀಟರ್ ಪರಿಧಿಯೊಳಗೆ ಬಹುಮಹಡಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಕಾರ್ಕಳ ಪುರಸಭೆಯಿಂದ ನಾಲ್ಕು ಬಾರಿ ನೋಟೀಸ್ ಜಾರಿಗೊಂಡರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಭ್ರಷ್ಟಾಚಾರ ಹಾಗೂ ಡೋಂಗಿ ಹಿಂದುತ್ವದ ವಿರುದ್ಧ ಸ್ವರ್ಧೆಗೆ ಇಳಿದಿದ್ದೇನೆ. ಮೋದಿ, ಯೋಗಿ ಮಾದರಿಯಲ್ಲಿ ಅಭಿವೃದ್ಧಿ ಹಾಗೂ ಆಡಳಿತ ನಡೆಸುವುದೇ ನನ್ನ ಗುರಿ. ಬಿಜೆಪಿಯ ಸಿದ್ಧಾಂತದೊಂದಿಗೆ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಲಾಗುವುದು.
ಸಂಘಟನೆಯ ಮೂಲಕ ಎಲ್ಲಾ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಹೋರಾಟ ನಡೆಸಿ ಭಾಷಣ ಬಿಗಿಯುತ್ತಿದ್ದಾಗ ಮುತಾಲಿಕ್ ಎಲ್ಲರಿಗೂ ಬೇಕಾಗಿದ್ದರು. ಲಾಭ ಪಡೆದರು. ಇಲ್ಲಿಗೆ ಯಾಕೆ ಬಂದರೆಂಬ ಪ್ರಶ್ನೆ ಕೇಳಲಿಲ್ಲ. ಈಗ ನನ್ನ ಸ್ವರ್ಧೆಯ ಕುರಿತು ಪ್ರಶ್ನಿಸುತ್ತಿದ್ದಾರೆ. 25 ಮಂದಿ ಹಿಂದುತ್ವವಾದಿಗಳಿಗೆ ಬಿಜೆಪಿಯಲ್ಲಿ ಸ್ವರ್ಧಿಸಲು ಅವಕಾಶ ಕೇಳಿದರೂ, ಕಡೆಗಣಿಸಿದ ಬಿಜೆಪಿ ನಾಯಕರಿಕಗೆ ಈಗ ನನ್ನ ಸ್ವರ್ಧೆಯಿಂದ ಕಾಲಬುಡಕ್ಕೆ ಬಿಸಿನೀರು ಬಂದತಾಗಿದೆ ಎಂದು ಲೇವಡಿ ಮಾಡಿದರು.
ಉಳ್ಳಾಲದಲ್ಲಿ ಸ್ಪರ್ಧಿಸುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುತಾಲಿಕ್ ಸ್ಪರ್ಧಿಸುವುದಾದರೆ ಸುನೀಲ್ ಕುಮಾರ್ ಉಳ್ಳಾಲದಲ್ಲೆ ಸ್ಪರ್ಧಿಸಲಿ ಎಂದು ಹೇಳಿದರು.
ಬೇನಾಮಿ ಹೆಸರಿನಲ್ಲಿ ಆಸ್ತಿ ಬಗ್ಗೆ ಸಚಿವ ಸುನೀಲ್ ಕುಮಾರ್ ಸ್ಪಷ್ಟನೆ ಕೊಟ್ಟಿಲ್ಲ. ತಾಕತ್ ಇದ್ದರೆ ದಾಖಲೆಗಳಿಗೆ ಸಚಿವ ಸುನೀಲ್ ಕುಮಾರ್ ಉತ್ತರಿಸಲಿ ಎಂದು ಮುತಾಲಿಕ್ ಗುಡುಗಿದರು.
ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ರಹಿತ ಶುದ್ಧ ಹಸ್ತದಲ್ಲಿರುವ ವ್ಯಕ್ತಿ. ಆದರೆ ಅವರ ಹೆಸರಿನಲ್ಲಿ ಸುನೀಲ್ ಕುಮಾರ್ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಇಂಧನ ಇಲಾಖೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ಬ್ರಹ್ಮಾಂಡವಿದೆ ಎಂದು ಹೇಳಿದರು.
ಈ ಸಂದರ್ಭ ಮಹಿಳಾ ಘಟಕದ ಮುಖ್ಯಸ್ಥೆ ದಿವ್ಯಾ, ಮುತಾಲಿಕ್ ಅಭಿಮಾನಿ ಬಳಗದ ಅಧ್ಯಕ್ಷ ಹರೀಶ್ ಅಧಿಕಾರಿ ಉಪಸ್ಥಿತರಿದ್ದರು.