ನೀರು, ಗಾಳಿ, ಮರಗಳಿಗೂ ಬೇಕು ಒಂದಷ್ಟು ಭರವಸೆ

Update: 2023-03-27 06:32 GMT

► ಸರಣಿ 4

1.ಮುಂದಿನ 25 ವರ್ಷಗಳ ಅಭಿವೃದ್ಧಿ ಯೋಜನೆ ಗಳಿಗೆ ಬಲಿಯಾಗಲಿರುವ ಗಿಡಮರಗಳಿಗೆ ಈಗಲೇ ಪರಿಹಾರ ರೂಪದಲ್ಲಿ ಅರಣ್ಯ ಬೆಳೆಸಲು ಬೆಂಗಾಡಿನಲ್ಲಿ ಸ್ಥಳ ನಿಗದಿ ಮಾಡಿ, ಅರಣ್ಯವನ್ನು ಬೆಳೆಸಲು ಆರಂಭಿಸ ಬೇಕು. ಇಲ್ಲಿ ಬೆಳೆಸಿದಷ್ಟೇ ಸಂಖ್ಯೆಯ ಮರಗಳನ್ನು ವಿವಿಧ ಯೋಜನೆಗಳು ಜಾರಿಯಾಗುವ ಹಂತದಲ್ಲಿ ಕಡಿಯಲು ಅನುಮತಿ ಸಿಗಬೇಕು. ಗಣಿಗಾರಿಕೆ ಮತ್ತು ಸಿವಿಲ್ ಕಾಮಗಾರಿಗಳ ಗುತ್ತಿಗೆದಾರರಿಗೆ ಅವರವರ ಶ್ರೇಣಿಗೆ ತಕ್ಕಂತೆ, ಬದಲೀ ಅರಣ್ಯ ಬೆಳೆಸಲು ಅಲ್ಲಿ ಅವಕಾಶ ಇರಬೇಕು. ಅರಣ್ಯವನ್ನು ಬೆಳೆಸಿದರೆ ಮಾತ್ರ ಅಂಥವರ ಲೈಸೆನ್ಸ್ ನವೀಕರಣ ಮಾಡಬೇಕು.

2. ರಾಜ್ಯದ ಎಲ್ಲ ಡೇರಿ ಕೇಂದ್ರಗಳಲ್ಲಿ ಗೋಬರ್ ಗ್ಯಾಸ್ ಉತ್ಪಾದನೆಯ ಪ್ರಾತ್ಯಕ್ಷಿಕೆ ಇರಬೇಕು. ಅದರಿಂದ ಸಿಗುವ ಅನಿಲವನ್ನೇ ಅಲ್ಲೇ ವಿದ್ಯುತ್ತನ್ನಾಗಿ ಪರಿವರ್ತಿಸಿ ಅಲ್ಲಿನದೇ ಶೀತಲಘಟಕಗಳಲ್ಲಿ ಬಳಸಬೇಕು. 

3. ಇನ್ನು ಐದು ವರ್ಷಗಳಲ್ಲಿ ರಾಜ್ಯದ ಎಲ್ಲ ನಗರಗಳ ಚರಂಡಿ ನೀರಿನ ಶೇ. 50 ರಷ್ಟನ್ನು ಶುದ್ಧೀಕರಿಸಿ ಕುಡಿಯುವ ನೀರನ್ನಾಗಿ ಪರಿವರ್ತಿಸಿ ಆಯಾ ನಗರಗಳಿಗೆ ಪೂರೈಸುವ ವ್ಯವಸ್ಥೆಯಾಗಬೇಕು.

4. ನದಿ ತೀರದ ಕಾರ್ಖಾನೆಗಳು ನದಿಯ ಕೆಳಹರಿವಿನಿಂದಲೇ ನೀರನ್ನು ಮೇಲಕ್ಕೆತ್ತಬೇಕು ಮತ್ತು ಬಳಸಿದ ನೀರನ್ನು ನದಿಯ ಮೇಲುಧಾರೆಯಲ್ಲೇ ಬಿಡುವಂತಾಗಬೇಕು.

5. ನಾಡಿನ ಎಲ್ಲ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ ಕಚೇರಿಗಳು ಮತ್ತು ನಿವಾಸಗಳು ತಮಗೆ ಬೇಕಿದ್ದ ನೀರು ಮತ್ತು ವಿದ್ಯುತ್ತನ್ನೂ ತಮ್ಮ ಕಟ್ಟಡದಲ್ಲೇ ಸಂಗ್ರಹಿಸಬೇಕು. ಹೊರಗಿನ ನೀರು ಮತ್ತು ವಿದ್ಯುತ್ತನ್ನು ಸಾಗಿಸಿ ತರದಂತೆ ನಿರ್ಬಂಧ ವಿಧಿಸಬೇಕು. 

6. ಪ್ರತಿ ತಾಲೂಕು ಕೇಂದ್ರದಲ್ಲೂ ಇನ್ನು ಐದು ವರ್ಷಗಳ ಒಳಗೆ ಒಂದು ಮಾದರಿ ಮನೆಯನ್ನು ನಿರ್ಮಿಸಬೇಕು. ಕೃಷಿತ್ಯಾಜ್ಯದಿಂದ ಪ್ಲೈವುಡ್, ಒತ್ತಿಟ್ಟಿಗೆಗಳ ಗೋಡೆಯಂಥ ಸುಸ್ಥಿರ ವಿಧಾನದ ಕಟ್ಟಡ ಅದಾಗಿರಬೇಕು. ಮಳೆಕೊಯ್ಲು, ಸೋಲಾರ್ ವಿದ್ಯುತ್ತಿನ ಉತ್ಪಾದನೆಗೆ ಅದು ಮಾದರಿಯಾಗಬೇಕು. ಕೃಷಿತ್ಯಾಜ್ಯದಿಂದ ಅಡುಗೆ ಅನಿಲ ಮತ್ತು ವಿದ್ಯುತ್ ಉತ್ಪಾದನೆಯ ಪ್ರಾತ್ಯಕ್ಷಿಕೆಯೂ ಅಲ್ಲಿರಬೇಕು.

7. ಕರಾವಳಿ ತೀರದಲ್ಲಿ ಪ್ರತೀ 10 ಕಿಲೊಮೀಟರ್ ದೂರದಲ್ಲಿ ಬಿಸಿಲಿನ ಅಥವಾ ಗಾಳಿಶಕ್ತಿಯಿಂದಲೇ ಉಪ್ಪು ನೀರನ್ನು ಶುದ್ಧನೀರನ್ನಾಗಿ ಪರಿವರ್ತಿ ಸುವ ಘಟಕಗಳನ್ನು ಸ್ಥಾಪಿಸಬೇಕು. ಸಮೀಪದ ಎಲ್ಲ ಸರಕಾರಿ ಸಿಬ್ಬಂದಿ ಅದೇ ನೀರನ್ನು ಬಳಸುವಂತೆ ಕಡ್ಡಾಯ ಮಾಡಬೇಕು.

8. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ದೊಡ್ಡ ನಗರಗಳ ಸುತ್ತಲ 50 ಕಿಲೊಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳ ಹೂಳೆತ್ತಿಸಿ ಅಲ್ಲೆಲ್ಲ ಕಳೆರಹಿತ ಶುದ್ಧನೀರು ಸಂಗ್ರಹವಾಗುವಂತೆ ಮಾಡಬೇಕು.

9. ನಗರದ ಎಲ್ಲ ವಾಹನಗಳಿಗೆ ಹಾರ್ನ್ ಕೋಟಾ ನಿಗದಿ ಮಾಡಬೇಕು. ತಿಂಗಳಿಗೆ 50ಕ್ಕಿಂತ ಹೆಚ್ಚು ಬಾರಿ ಹಾರ್ನ್ ಮಾಡುವವರಿಗೆ ಶುಲ್ಕ ವಿಧಿಸಬೇಕು. ಎಲ್ಲ ವಾಹನಗಳಿಗೂ ತಿಂಗಳಿಗೆ 300 ಕಿ.ಮೀ. ಓಡಾಟದ ಕೋಟಾವನ್ನು ವಿಧಿಸಬೇಕು. ಅದನ್ನು ಮೀರಿದವರು ಶುಲ್ಕ ತೆರುವಂತಾಗ ಬೇಕು. ಹೀಗೆ ಸಂಗ್ರಹವಾದ ನಿಧಿಯನ್ನು ಟಯರ್‌ಗಳ ಮರುಸಂಸ್ಕರಣೆಗೆ ಬಳಸ ಬೇಕು. 

10. ಎಲ್ಲ ನಗರಗಳಲ್ಲೂ ತ್ಯಾಜ್ಯ ಪ್ಲಾಸ್ಟಿಕ್ ಸಂಗ್ರಹ ಮತ್ತು ಮರುಬಳಕೆ ಯನ್ನು ಕಡ್ಡಾಯ ಮಾಡಬೇಕು. ಟಾರ್ ರಸ್ತೆ ಮತ್ತು ಆವರಣದ ಗೋಡಗಳಿಗೆ ಶೇ.20ರಷ್ಟನ್ನಾದರೂ ಅಂಥ ಮರುಬಳಕೆಯ ಪ್ಲಾಸ್ಟಿಕ್ ಮತ್ತು ಟಯರ್ ಚಕ್ಕೆಗಳ ಬಳಕೆಯನ್ನು ಕಡ್ಡಾಯ ಮಾಡಬೇಕು.

11. ಕೊಳವೆ ಬಾವಿಗಳಿಗೆ ಜಿಯೊ ಟ್ಯಾಗಿಂಗ್ ಮಾಡಬೇಕು. ಟ್ಯಾಂಕರ್ ಗಳಿಗೆ ನಗರದ ಕೊಳವೆ ಬಾವಿಗಳಿಂದ ನೀರೆತ್ತದಂತೆ ನಿಷೇಧ ಹಾಕಬೇಕು. ನಗರ ಪ್ರದೇಶದಲ್ಲಿ ಹೊಸ ಕೊಳವೆ ಬಾವಿಗಳಿಗೆ ಲಿಲಾವಿನ ಮೂಲಕ ಲೈಸೆನ್ಸ್ ಲಭಿಸುವಂತೆ ಮಾಡಬೇಕು. ಮನೆಕಟ್ಟುವ ಮೊದಲು ಮನೆಯ ವಿಸ್ತೀರ್ಣ/ಗಾತ್ರಕ್ಕೆ ತಕ್ಕಷ್ಟು ಮಳೆನೀರಿನ ಸಂಗ್ರಹಕ್ಕೆ ನೆಲದಡಿ ಯಲ್ಲಿ ವ್ಯವಸ್ಥೆ ಮಾಡಿರಬೇಕು.

12. ರಾಜ್ಯದ ಎಲ್ಲ ನಗರಗಳಲ್ಲೂ ಮೃತ ಶರೀರಗಳನ್ನು ಸುಡುವ ಪ್ರಮಾಣಕ್ಕೆ ಅನುಗುಣವಾಗಿ ‘ನೆನಪಿನ ವೃಕ್ಷ’ಗಳನ್ನು ಬೆಳೆಸಲು ಸ್ಥಳವನ್ನು ನಿಗದಿ ಮಾಡಬೇಕು. ವಿದ್ಯುತ್ ಶವಾಗಾರಗಳಿಗೆ ಬಿಸಿಲು ಅಥವಾ ಗಾಳಿಯಿಂದ ತಯಾರಾಗುವ ವಿದ್ಯುತ್ತನ್ನು ಬಳಸಬೇಕು. ಗೋಬರ್ ಗ್ಯಾಸ್ ಅಥವಾ ಕೃಷಿ ತ್ಯಾಜ್ಯದಿಂದ ಲಭಿಸುವ ಅನಿಲದಿಂದ ಶವಸಂಸ್ಕಾರ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕು.

Similar News