ಡಿ.ಕೆ.ಶಿವಕುಮಾರ್, ಎಸ್‍ಡಿಪಿಐ ಮುಖಂಡನ ವಿರುದ್ಧ ಕ್ರಮಕ್ಕೆ ಬಿಜೆಪಿ ಒತ್ತಾಯ: 2 ಪ್ರತ್ಯೇಕ ದೂರು

Update: 2023-03-29 15:12 GMT

ಬೆಂಗಳೂರು: ಮಂಡ್ಯ ಜಿಲ್ಲೆಯ ಬೇವಿನಹಳ್ಳಿಯಲ್ಲಿ ನಿನ್ನೆ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ವೇಳೆ ಕಲಾವಿದರು ಮತ್ತು ಜನರತ್ತ 500 ರೂ. ನೋಟುಗಳನ್ನು ಎಸೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಅಭ್ಯರ್ಥಿ ರಮೇಶ ಬಂಡಿಸಿದ್ದೇಗೌಡರ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ರಾಜ್ಯ ಸಮಿತಿ ಆಗ್ರಹಿಸಿದೆ. ಈ ವಿಚಾರವಾಗಿ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಯೋಗೇಂದ್ರ ಹೂಡಾಘಟ್ಟ, ರಾಜ್ಯ ಪ್ಯಾನಲಿಸ್ಟ್ ಮಧು ಎನ್ ರಾವ್, ಜಿಲ್ಲಾ ವಕ್ತಾರ ರಾಘವೇಂದ್ರ ರಾವ್ ಅವರ ನಿಯೋಗವು ಇಂದು ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ಈ ಸಂಬಂಧ ದೂರು ಸಲ್ಲಿಸಿತು.

ಡಿ.ಕೆ.ಶಿವಕುಮಾರ್ ಮತ್ತು ರಮೇಶ ಬಂಡಿಸಿದ್ದೇಗೌಡ ಅವರು ಈ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಮುಂದಾಗಿದ್ದಾರೆ ಎಂದು ಗಮನ ಸೆಳೆಯಲಾಗಿದೆ.

► ಎಸ್‍ಡಿಪಿಐ ಮುಖಂಡನ ವಿರುದ್ಧ ದೂರು

ಶಾಂತಿ ಕದಡುವ, ದ್ವೇಷ ಹರಡುವ ಮತ್ತು ಮಾನಹಾನಿ ಮಾಡುವ ಉದ್ದೇಶದ ಹೇಳಿಕೆ ಕೊಟ್ಟ ಚಿತ್ರದುರ್ಗ ಜಿಲ್ಲಾ ಎಸ್‍ಡಿಪಿಐ ಅಧ್ಯಕ್ಷ ಝಾಕೀರ್ ಹುಸೇನ್ ವಿರುದ್ಧ ಇನ್ನೊಂದು ದೂರು ಸಲ್ಲಿಸಲಾಯಿತು.

ಮುಸ್ಲಿಮರ ಮೀಸಲಾತಿ ರದ್ದು ಮಾಡಿದ ಸಂಬಂಧ ಪ್ರತಿಭಟನೆಯಲ್ಲಿ ಮಾತನಾಡಿದ ಜಾಕೀರ್ ಹುಸೇನ್ ಅವರು, “ನಮ್ಮ ಹಕ್ಕನ್ನು ಹೀನಾಯವಾಗಿ ಕಸಿದುಕೊಳ್ಳಲಾಗಿದೆ. ನಮ್ಮ ಹಕ್ಕನ್ನು ವಾಪಸ್ ಕೊಡದಿದ್ದರೆ ಸಿಎಂ ಬೊಮ್ಮಾಯಿಯವರ ಬಟ್ಟೆ ಬಿಚ್ಚಿಸುತ್ತೇವೆ; ಹಿಜಾಬ್, ಆಝಾನ್‍ಗೆ ತಲೆ ಕೊಟ್ಟೆವು. ಮೀಸಲಾತಿ ವಿಚಾರದಲ್ಲಿ ತಲೆ ಹೋದರೂ ಚಿಂತೆಯಿಲ್ಲ. ಜೈಲಿಗೆ ಹೋದರೂ ಚಿಂತೆಯಿಲ್ಲ. ನಾವೆಲ್ಲ ಉಗ್ರವಾಗಿ ಹೋರಾಡುತ್ತೇವೆ” ಎಂದು ಹೇಳಿದ್ದರು ಎಂದು ಗಮನ ಸೆಳೆಯಲಾಗಿದೆ.

ಸಾಮಾಜಿಕ ಶಾಂತಿಗೆ ಹಾನಿ ಉಂಟು ಮಾಡುವ ಮತ್ತು ದ್ವೇಷ ಹರಡುವ ಉದ್ದೇಶದ ಈ ಮಾತುಗಳನ್ನು ಗಮನಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ಮನವಿಯಲ್ಲಿ ಕೋರಲಾಗಿದೆ.

Similar News